ನುಡಿದಂತೆ ನಡೆಯದಿದ್ದರೆ ಬಿಜೆಪಿಗೂ ಪಾಠ: ಪ್ರಸನ್ನಾನಂದಪುರಿ ಶ್ರೀ ಗುಡುಗು
ದಾವಣಗೆರೆ, ಅಕ್ಟೋಬರ್ 18: ವಾಲ್ಮೀಕಿ ನಾಯಕ ಸಮುದಾಯವು ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಪಾಠ ಕಲಿಸಿದೆ. ನಮ್ಮ ಸಮುದಾಯಕ್ಕೆ ಮೀಸಲಾತಿ ವಿಚಾರವಾಗಿ ಸಿಎಂ ಬಿ.ಎಸ್ ಯಡಿಯೂರಪ್ಪ ನುಡಿದಂತೆ ನಡೆಯದಿದ್ದರೆ ಬಿಜೆಪಿಗೂ ಪಾಠ ಕಲಿಸುತ್ತದೆ ಎಂದು ಹರಿಹರದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಗುಡುಗಿದ್ದಾರೆ.
ದಾವಣಗೆರೆಯಲ್ಲಿ ಇಂದು ಮಾತನಾಡಿದ ಶ್ರೀಗಳು, ಈಗಾಗಲೇ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ವರದಿ ನೀಡಿದೆ. ವರದಿ ಬಂದ ತಕ್ಷಣ ಮೀಸಲಾತಿ ನೀಡುವುದಾಗಿ ಸಿಎಂ ಹೇಳಿದ್ದರು. ಆದರೆ ಈಗ ವಿಳಂಬ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಮುಲು ಅವರನ್ನು ಡಿಸಿಎಂ ಮಾಡುತ್ತಾರೆ ಅಂತಾ ಅಂದ್ಕೊಂಡಿದ್ವಿ, ಆದ್ರೆ ಆಗ್ಲಿಲ್ಲ
ಇದೇ ಕಾರಣ ನಾವು ಈಗಾಗಲೇ ರಾಜ್ಯದ 24 ಜಿಲ್ಲೆಗಳ ಪ್ರವಾಸ ಮಾಡಿದ್ದೇವೆ. ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಇದೇ 21 ರಿಂದ ವಿಧಾನಸೌಧದ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಇದೇ 31 ರಂದು ಮಹರ್ಷಿ ವಾಲ್ಮೀಕಿ ಜಯಂತಿ ವೇಳೆ ಮೀಸಲಾತಿ ಬಗ್ಗೆ ಸಿಎಂ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
Recommended Video
ಈಗಾಗಲೇ ವಾಲ್ಮೀಕಿ ಸಮುದಾಯದವರಿಗೆ ಡಿಸಿಎಂ ಹುದ್ದೆ ನೀಡುವುದು ಮುಗಿದು ಹೋದ ವಿಚಾರ. ಇನ್ನು ಮುಂದಿನ ದಿನಗಳಲ್ಲಿ ವಾಲ್ಮೀಕಿ ಸಮಾಜದ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಲಾಗುವುದೆಂದರು.