ದಾವಣಗೆರೆಯಲ್ಲಿ ಕೊರೊನಾ ನಿವಾರಣೆಗಾಗಿ ಹೋಮ
ದಾವಣಗೆರೆ, ಏಪ್ರಿಲ್ 01: ಕೊರೊನಾ ವೈರಸ್ ನಿಂದ ದೇಶ ಹಾಗೂ ರಾಜ್ಯಕ್ಕೆ ಯಾವುದೇ ಅಪಾಯ ಸಂಭವಿಸದಿರಲಿ ಎಂದು ಪ್ರಾರ್ಥಿಸಿ ದಾವಣಗೆರೆಯ ಕೆ.ಬಿ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ಕಳೆದ 5 ದಿನಗಳಿಂದಲೂ ಮಂತ್ರಪಠಣದೊಂದಿಗೆ ಹೋಮ ಹಮ್ಮಿಕೊಳ್ಳಲಾಗಿತ್ತು.
ಇಂದು ಬೆಳಿಗ್ಗೆ ಹೋಮದ ಪೂರ್ಣಾಹುತಿ ಜರುಗಿತು. ಕಳೆದ 5 ದಿನದಿಂದಲೂ ಪ್ರಧಾನ ಪುರೋಹಿತರಾದ ರಾಘವೇಂದ್ರ ಕುಲಕರ್ಣಿ ನೇತೃತ್ವದಲ್ಲಿ ನರಸಿಂಹ ಮಂತ್ರ, ವಿಷ್ಣು ಸಹಸ್ರನಾಮ, ವಾಯುಸ್ತುತಿ, ದುರ್ಗಾಹೋಮ, ಗಾಯತ್ರಿ ಹೋಮ ನೆರವೇರಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.
ಶ್ರೀ ಗುರುರಾಜ ಸೇವಾಸಂಘ ಹಾಗೂ ವಿಶ್ವ ಮಧ್ವ ಮಹಾಪರಿಷತ್ ದಾವಣಗೆರೆ ಶಾಖೆಯ ಸಹಯೋಗದಲ್ಲಿ ಹೋಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶ್ರೀನಿವಾಸ್ ನರೇನಹಳ್ಳಿ, ಪ್ರಸನ್ನ, ಶ್ರೀಧರ್, ಮಾಧವ ಪದಕಿ, ಮುರಳೀಧರ್, ನಿರಂಜನ ಸೇರಿದಂತೆ ಹಲವರು ಹೋಮದಲ್ಲಿದ್ದರು.
ಕೊರೊನಾ ರೋಗ ನಿವಾರಣೆಗಾಗಿ ಪಂಚಭೂತಗಳಲ್ಲಿ ವ್ಯಾಪಿಸಿರುವ ಕೊರೊನಾ ಸೋಂಕು ನಿವಾರಣೆಯಾಗಬೇಕು ಮತ್ತು ಎಲ್ಲರ ಆರೋಗ್ಯ ಆಯುಷ್ಯ ವೃದ್ಧಿಗಾಗಿ ಪ್ರಾರ್ಥಿಸಿ ವಿಷ್ಣು ಪಂಚಾಯತನ ದೇವತೆಗಳ ಮಂತ್ರಪಠಣದೊಂದಿಗೆ "ಕೊರೊನಾ ನಾಶಯಃ ಮನುಕುಲಾನ್ ಪಾಲಯ' ಎಂಬ ಅಭೀಷ್ಟ ಮಂತ್ರದೊಂದಿಗೆ ಹೋಮ ಮಾಡಲಾಗಿದೆ.
ಈ ಹೋಮವನ್ನು ಪಂಚಾಯತನ ದೇವತೆಗಳಿಗೆ ಸಮರ್ಪಿಸಿ ಇರುವ ಕೊರೊನಾ ರೋಗಾಣು ನಿವಾರಣೆಯಾಗಲಿ ಎಂದು ಪ್ರಾರ್ಥಿಸಿ ಪಂಚಾಯತನ ಯಾಗ ಮಾಡಲಾಯಿತು ಎಂದು ರಾಘವೇಂದ್ರ ಮಠದ ಪ್ರಧಾನ ಪುರೋಹಿತರಾದ ರಾಘವೇಂದ್ರ ಕುಲಕರ್ಣಿ ಹೇಳಿದರು.