ದಾವಣಗೆರೆ ಪೊಲೀಸರಿಂದ ರಾಜಸ್ಥಾನ ಮೂಲದ ಸೈಬರ್ ವಂಚಕ ಅರೆಸ್ಟ್
ದಾವಣಗೆರೆ, ಆಗಸ್ಟ್, 05: ಫ್ಲಿಫ್ ಕಾರ್ಟ್ ಪೇ ಲೇಟರ್ ಖಾತೆ ಹ್ಯಾಕ್ ಮಾಡುವ ಮೂಲಕ ಸೈಬರ್ ವಂಚನೆ ಮಾಡಿದ್ದ ರಾಜಸ್ಥಾನ ಮೂಲದ 23 ವರ್ಷದ ಅಮನ್ ತಿವಾರಿ ಎಂಬಾತನನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ಆರೋಫಿ ಅಮನ್ ತಿವಾರಿ ರಾಜಸ್ತಾನ ಮೂಲದ ಅಲ್ವಾರ ನಗರದವನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಒಂದು ತಿಂಗಳ ಕಾಲ ಆಪ್ ತರಬೇತಿ ಪಡೆದಿದ್ದ, ಈತ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯ ಎಸಗುತ್ತಿದ್ದ. ಈತ ಇದುವರೆಗೆ ಪೊಲೀಸ್ ಕಣ್ತಪ್ಪಿಸಿ ಓಡಾಡುತ್ತಿದ್ದ. ಆದರೆ ದಾವಣಗೆರೆ ಪೊಲೀಸರು ರಾಜಸ್ತಾನಕ್ಕೆ ಹೋಗಿ ಕೊನೆಗೂ ಆರೋಪಿಯನ್ನು ಸೆರೆ ಹಿಡಿದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದರು.
ಅಮನ್ ತಿವಾರಿ ಸುಮಾರು 40 ಸಾವಿರದಷ್ಟು ಈಮೇಲ್ ಐಡಿಯ ಯೂಸರ್ ನೇಮ್, ಪಾಸ್ವರ್ಡ್ ಹ್ಯಾಕ್ ಮಾಡಿದ್ದ. ಈತ ಸುಮಾರು ಶೇಕಡಾ 47ರಷ್ಟು ಈಮೇಲ್ಗಳನ್ನು ಓಪನ್ ಮಾಡಿದ್ದಾನೆ. ಸೈಬರ್ ಬಳಸಿಕೊಂಡು ವಂಚನೆ ಮಾಡುತ್ತಾ ತಲೆಮರೆಸಿಕೊಂಡು ಓಡಾಡಿದ್ದು, ಕೊನೆಗೂ ದಾವಣಗೆರೆ ಪೊಲೀಸರು ಕಿರಾತಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ಪೊಲೀಸರ ಚಾಕಚಕ್ಯತೆಯಿಂದ ಆರೋಪಿ ಸಿಕ್ಕಿ ಬಿದ್ದಿದ್ದಾನೆ ಎಂದು ರಿಷ್ಯಂತ್ ಮಾಹಿತಿ ನೀಡಿದರು.
ಫ್ಲಿಫ್ಕಾರ್ಟ್ ಪೇ ಲೇಟರ್ ಖಾತೆಗೆ ಖನ್ನ
ಈ ಬಗ್ಗೆ ದೂರುದಾರರಾದ ರಕ್ಷಿತ್ ಮಾತನಾಡಿ ಈ ವರ್ಷದ ಜನವರಿ 21ರಂದು ಯಾರೋ ಅಪರಿಚಿತರು ನನ್ನ ಖಾತೆ ಹ್ಯಾಕ್ ಮಾಡಿದ್ದಾರೆ. ಪಾಸ್ವರ್ಡ್ ಬದಲಾಯಿಸಿ ಫ್ಲಿಫ್ಕಾರ್ಟ್ ಪೇ ಲೇಟರ್ ಖಾತೆಯಿಂದ 45,000 ರೂಪಾಯಿ ವಂಚನೆ ಮಾಡಲಾಗಿದೆ ಎಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ರಕ್ಷಿತ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯ ಜಾಡು ಹಿಡಿಯಲು ಮುಂದಾದರು.
ವಂಚಕ ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?
ಡಿಸಿಆರ್ಪಿ ಘಟಕದ ಡಿವೈಎಸ್ಪಿ ಬಸವರಾಜ್ ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಸಿಇಎನ್ ಅಪರಾಧ ಠಾಣೆಯ ಎಸ್ಐ ಪರಮೇಶ್, ಸಿಬ್ಬಂದಿ ಪ್ರಕಾಶ್, ಮಾರುತಿ, ಮುತ್ತುರಾಜ್, ಮಲ್ಲಿಕಾರ್ಜುನ ಹಾದಿಮನಿ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ನಂತರ ಪೊಲೀಸರು ವಂಚಕನ ಜಾಲವನ್ನು ಬೆನ್ನು ಹತ್ತಿದ್ದು, ರಾಜಸ್ಥಾನದ ಅಶ್ವಾರ ನಗರದಲ್ಲಿ ಆರೋಪಿ ಅಮನ್ ತಿವಾರಿಯನ್ನು ದಸ್ತಗಿರಿ ಮಾಡಲಾಗಿದೆ. ಆರೋಪಿತನಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್, ಇತರೆ ಸಾರ್ವಜನಿಕರಿಗೆ ವಂಚಿಸಿ ಖರೀದಿಸಿದ್ದ 1.50 ಲಕ್ಷ ರೂಪಾಯಿ ಮೌಲ್ಯದ 3 ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದರು.
ರಾಜಸ್ಥಾನದಲ್ಲಿ ಆರೋಪಿ ಖಾಕಿ ಬಲೆಗೆ
ಆರೋಪಿಯನ್ನು ರಾಜಸ್ಥಾನದ ಸ್ಥಳೀಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಅಲ್ಲಿಂದ ದಾವಣಗೆರೆಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಳ್ಳಲಾಗಿದೆ. ಆರೋಪಿತನ ಪತ್ತೆ ಮತ್ತು ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬಿಟ್ ಕಾಯಿನ್ ಮೂಲಕ ಸಾವಿರಾರು ಇ- ಮೇಲ್ ಐಡಿಗಳ ಪಾಸ್ವರ್ಡ್ ಪಡೆದುಕೊಂಡು ವಂಚನೆ ಮಾಡಲು ಹ್ಯಾಕರ್ಸ್ ಯತ್ನಿಸುತ್ತಿರುವುದು ತಿಳಿದುಬಂದಿದೆ. ಈ ಕಾರಣದಿಂದಾಗಿ ಒಂದೇ ಪಾಸ್ವರ್ಡ್ ಅನ್ನು ಎಲ್ಲದಕ್ಕೂ ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಆಗಾಗ್ಗೆ ಪಾಸ್ವರ್ಡ್ ಬದಲಾಯಿಸುತ್ತಿದ್ದರೆ, ಯಾರೂ ಡೆಟಾ ಕದಿಯಲು ಆಗಲ್ಲ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಹುಷಾರಾಗಿರಲು ಸೂಚನೆ
ವಂಚಕರ ಕಣ್ಣು ಸಾರ್ವಜನಿಕರು ಬಳಸುವ ಸಾಮಾಜಿಕ ಜಾಲತಾಣಗಳ ಮೇಲೆ ಇರುತ್ತದೆ. ಇ-ಮೇಲ್, ಯುಪಿಐ ಖಾತೆಗಳನ್ನು ವಿವಿಧ ತಂತ್ರಾಶಗಳ ಮೂಲಕ ಹ್ಯಾಕ್ ಮಾಡಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹುಷಾರಾಗಿರಬೇಕು. ಆದ್ದರಿಂದ ಸಾಮಾಜಿಕ ಜಾಲತಾಣಗಳು, ಇ -ಮೇಲ್, ಯುಪಿಐ ಖಾತೆಗಳಿಗೆ ಶಕ್ತಿಯುತ ಪಾಸ್ವರ್ಡ್ ಅಳವಡಿಸಿಕೊಳ್ಳಿ. ಒಂದೇ ಪಾಸ್ವರ್ಡ್ ಅನ್ನು ಎಲ್ಲಾ ಖಾತೆಗಳಿಗೆ ಅಳವಡಿಸದೇ ಬೇರೆ ಬೇರೆ ಪಾಸ್ವರ್ಡ್ಗಳನ್ನು ಬಳಸುವಂತೆ ಎಸ್ಪಿ ರಿಷ್ಯಂತ್ ಸೂಚನೆ ನೀಡಿದರು.