ಪ್ರಧಾನಿ ನರೇಂದ್ರ ಮೋದಿ ಧರಿಸಿದ ಮಾಸ್ಕ್ಗೆ ದಾವಣಗೆರೆ ನಂಟು
ದಾವಣಗೆರೆ, ನವೆಂಬರ್ 2: ಪ್ರಧಾನಮಂತ್ರಿ ನರೇಂದ್ರ ಮೋದಿ ಧರಿಸಿದ ಗೋಪುರ ಮಾದರಿ ಕೇಸರಿ ಮಾಸ್ಕ್ಗೂ, ಬೆಣ್ಣೆನಗರಿ ದಾವಣಗೆರೆಗೂ ನಂಟಿದೆ. ದಾವಣಗೆರೆಯಲ್ಲಿ ಸಿದ್ದಪಡಿಸಿದ ಮಾಸ್ಕ್ನ್ನು ಪ್ರಧಾನಿ ಮೋದಿ ಧರಿಸಿದ್ದರಿಂದ ದಾವಣಗೆರೆಯ ಹೆಸರು ರಾಷ್ಟ್ರ ಮಟ್ಟದಲ್ಲಿ ಪ್ರಜ್ವಲಿಸಿದೆ. ಈ ಮಾಸ್ಕ್ನಲ್ಲಿ ಏನು ಅಂತಹ ವಿಶೇಷವಿದೆ ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ..
ಕೇಸರಿ, ಬಿಳಿ, ಹಸಿರು ಬಣ್ಣದ ಗೋಪುರ ಮಾದರಿ ಮಾಸ್ಕ್, ಮನೆಯಲ್ಲೇ ಸಿದ್ಧಗೊಳ್ಳುತ್ತವೆ. ಕುಟುಂಬದ ಸದಸ್ಯರೆಲ್ಲರೂ ಸೇರಿ ಮಾಸ್ಕ್ ಸಿದ್ಧಪಡಿಸುತ್ತಾರೆ. ದಾವಣಗೆರೆಯಲ್ಲಿ ಸಿದ್ಧವಾದ ಅಪ್ಪಟ ಕಾಟನ್ ಬಟ್ಟೆಯ ಮಾಸ್ಕ್ನ್ನು ಪ್ರಧಾನಿ ನರೇಂದ್ರ ಮೋದಿ ಧರಿಸಿದ್ದಾರೆ. ಇದು ದಾವಣಗೆರೆಯ ಎಂಸಿಸಿ ಬಿ-ಬ್ಲಾಕ್ನ, ಕುವೆಂಪು ನಗರದ ಸಾಮಾಜಿಕ ಕಾರ್ಯಕರ್ತ ಕೆ.ಪಿ ವಿವೇಕಾನಂದ ಅವರ ಮನೆಯಲ್ಲಿ ತಯಾರಾಗುತ್ತವೆ.
ದಾವಣಗೆರೆ; ಕೋವಿಡ್ ನಿಯಮ ಉಲ್ಲಂಘನೆ, 51. 67 ಲಕ್ಷ ದಂಡ ಸಂಗ್ರಹ
ಸಾಮಾಜಿಕ ಕಾರ್ಯಕರ್ತ ಕೆ.ಪಿ ವಿವೇಕಾನಂದ ಅವರು ಮಾತನಾಡಿ, ಕೊರೊನಾ ಲಾಕ್ಡೌನ್ ಸಂಕಷ್ಟದ ನಂತರ ಅರ್ಥಿಕ ಪುನಶ್ಚೇನಕ್ಕೆ ಅನ್ಲಾಕ್ ವರ್ಷನ್ ಆರಂಭವಾಯ್ತು. ಇದರ ಭಾಗವಾಗಿ ಪ್ರಧಾನಿಯವರು ಆತ್ಮನಿರ್ಭರ್ ಎಂಬ ಪರಿಕಲ್ಪನೆಯನ್ನು ಜಾಗೃತಗೊಳಿಸಿದರು. ಇದು ದೇಸಿ ಉತ್ಪನ್ನಗಳಿಗೆ ಮಾನ್ಯತೆ ನೀಡುವ ಜತೆ ಎಲ್ಲ ಸ್ಥರಗಳಲ್ಲೂ ಅರ್ಥಿಕ ಅಭಿವೃದ್ಧಿ ಅಂಶಗಳನ್ನು ಹೊಂದಿತ್ತು.
ಕಾಟನ್ ಬಟ್ಟೆಯಿಂದ ಮಾಸ್ಕ್ ತಯಾರಿಸುವ ಚಿಂತನೆ
ಕೊರೊನಾ ಹೆಮ್ಮಾರಿ ಸೋಂಕಿನ ಹಿನ್ನೆಲೆ ಮಾಸ್ಕ್ಗೆ ಸಾಕಷ್ಟು ಬೇಡಿಕೆ ಸೃಷ್ಟಿಯಾಗಿತ್ತು. ಬಳಸಿ ಬಿಸಾಡುವ ಮಾಸ್ಕ್ಗಿಂತ ಮರುಬಳಕೆ ಮಾಡುವ ಹಾಗೂ ಸುರಕ್ಷಿತ ಮಾಸ್ಕ್ ನೀಡುವ ಉದ್ದೇಶದಿಂದ ಕೆ.ಪಿ ವಿವೇಕಾನಂದ ಪಕ್ಕಾ ಕಾಟನ್ ಬಟ್ಟೆಯಿಂದ ಮಾಸ್ಕ್ ತಯಾರಿಸುವ ಚಿಂತನೆ ನಡೆಸುವ ಜತೆ ಕಾರ್ಯ ಯೋಜನೆಯನ್ನು ಜಾರಿಗೆ ತಂದರು. ಇದಕ್ಕೆ ದಾವಣಗೆರೆಯ ಎಲೆಕ್ಟ್ರಿಕಲ್ ವ್ಯಾಪಾರಿ ರಂಜಿತ್ ಮತ್ತು ಕುಟುಂಬ ಹಾಗೂ ಟೈಲರ್ ಜಿ.ಬಿ ರಾಜು ಸಾಥ್ ನೀಡಿದರು. ಎಲ್ಲರೂ ಸೇರಿ ದಾವಣಗೆರೆ ಹೆಸರು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.
ಸ್ಪೀಡ್ ಪೋಸ್ಟ್ ಮೂಲಕ ಪ್ರಧಾನಿ ಕಚೇರಿಗೆ ಮಾಸ್ಕ್
ಎಲೆಕ್ಟ್ರಿಕಲ್ ವ್ಯಾಪಾರಿ ರಂಜಿತ್ ಸಿಂಗ್ ಮಾತನಾಡಿ, ಮಾಸ್ಕ್ಗೆ ಕಾಟನ್ ಬಟ್ಟೆ ಹಾಗೂ ಕ್ಯಾನ್ವಾಸ್ ಬಳಸಿದ್ದರಿಂದ ಮಾಸ್ಕ್ ಸ್ಟಿಫ್ ಆಗಿತ್ತು. ನೋಡಲು ಸಹ ಸುಂದರವಾಗಿತ್ತು. ಆರಂಭದಲ್ಲಿ ದಾವಣಗೆರೆಗೆ ಮಾತ್ರ ಸೀಮಿತಗೊಳಿಸಿ ಮಾಸ್ಕ್ ತಯಾರಿಸಿದರು. ನಂತರ, ಅದನ್ನು ಪ್ರಧಾನಿ ಅವರಿಗೂ ತಲುಪಿಸುವ ಆಸೆ ಮೂಡಿತು. ರಂಜಿತ್ ಸಿಂಗ್ ಅವರ ಸೊಸೆ ಕವಿತಾದೇವಿ ಹಾಗೂ ವಿವೇಕಾನಂದ ಅವರ ಮಗಳು ಕಾವ್ಯಾ ಹೆಸರಿನಲ್ಲಿ ಪ್ರಧಾನಿ ಅವರಿಗೆ ಇಂಡಿಯನ್ ಪೋಸ್ಟ್ನ ಸ್ಪೀಡ್ ಪೋಸ್ಟ್ ಮೂಲಕ ಪ್ರಧಾನಿ ಕಚೇರಿಗೆ ಕೆಸರಿ, ಬಿಳಿ, ಹಸಿರು ಮೂರು ಬಣ್ಣದ ಪ್ರತ್ಯೇಕ ಮೂರು ಮಾಸ್ಕ್ಗಳನ್ನು ಕಳುಹಿಸಿದ್ದರು.
ದಾವಣಗೆರೆ ಮಾಸ್ಕ್ನ್ನು ಮೋದಿ ಅವರು ಧರಿಸಿದ್ದರು
ಕೆಲವು ದಿನಗಳ ಕಾಲ ಯಾವುದೇ ಉತ್ತರ ಬರಲಿಲ್ಲ. ಕೆಲವು ದಿನಗಳ ಬಳಿಕ ಅವರ ಸ್ನೇಹಿತ ಚಕ್ರವರ್ತಿ ಪವನ್ ಅವರು, ಮೋದಿಜಿ ಅವರ ಒಂದು ವಿಶೇಷ ಫೋಟೋ ಕಳುಹಿಸಿದ್ದರು. ದಾವಣಗೆರೆಯಿಂದ ಕಳುಹಿಸಿದ್ದ ಮಾಸ್ಕ್ನ್ನು ಮೋದಿ ಅವರು ಧರಿಸಿದ್ದ ಭಾವಚಿತ್ರ ಕಂಡು ವಿವೇಕಾನಂದ ಹಾಗೂ ಅವರ ಸ್ನೇಹಿತರು ಮೂಕವಿಸ್ಮಿತರಾಗಿದ್ದರು.
ದೇಶದಲ್ಲಿ ದಾವಣಗೆರೆ ಮತ್ತೊಮ್ಮೆ ಯಶಸ್ಸಿನ ಕಹಳೆ
ವಿವೇಕಾನಂದ ಅವರ ಮಗಳು ಕಾವ್ಯಾ ಮಾತನಾಡಿ, ಆತ್ಮನಿರ್ಭರ್ ಪರಿಕಲ್ಪನೆಯಲ್ಲಿ ಹುರುಳಿಲ್ಲ ಎಂಬ ವಿರೋಧಿಗಳ ಕೂಗು ಜೋರಾಗಿತ್ತು. ಈ ಪರಿಕಲ್ಪನೆ ಕೇವಲ ಕಲ್ಪನೆಯಲ್ಲ, ಅದು ಕೃತಿಯಲ್ಲಿ ಜಾರಿಗೆ ಬಂದಿದೆ ಹಾಗೂ ಅದಕ್ಕೆ ದೇಶದ ಪ್ರಧಾನಿಯಾಗಿ ಪ್ರೋತ್ಸಾಹ ನೀಡುತ್ತೇನೆ ಎಂಬ ಮಹತ್ತರವಾದ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ರವಾನಿಸಿದ್ದಾರೆ ಎಂದರು. ವಿವೇಕಾನಂದ ಅಂಡ್ ಟೀಂನ ಪರಿಶ್ರಮದಿಂದ ಆತ್ಮನಿರ್ಭರ ಪರಿಕಲ್ಪನೆಯಲ್ಲಿ ದಾವಣಗೆರೆ ದೇಶದಲ್ಲಿ ಮತ್ತೊಮ್ಮೆ ಯಶಸ್ಸಿನ ಕಹಳೆ ಮೊಳಗಿಸಿದೆ.
Recommended Video