ದಾವಣಗೆರೆಯಲ್ಲಿ ಹಂದಿ ಕಾಟ: ಹೈಕೋರ್ಟ್ ತೀರ್ಪಿಗೆ ಸುಪ್ರೀಂನಿಂದ ತಡೆ
ದಾವಣಗೆರೆ, ಅಕ್ಟೋಬರ್ 03: ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಾಗಿರುವ ಹಂದಿ ಕಾಟಕ್ಕೆ ಪಾಲಿಕೆ ಕಂಡುಕೊಂಡಿದ್ದ ಪರಿಹಾರಕ್ಕೆ ಹೈಕೋರ್ಟ್ ಪಾಲಿಕೆ ಆಯುಕ್ತರು, ಅಧಿಕಾರಿಗಳೆ ಬೆಲೆ ತೆರವಂತೆ ಮಾಡಿದ್ದ ಹೈಕೋರ್ಟಿಗೆ ವಿರುದ್ಧವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ನಗರದಲ್ಲಿದ್ದ ಸುಮಾರು 400 ರಿಂದ 500 ಹಂದಿಗಳನ್ನು ಹಿಡಿದು ಅವುಗಳನ್ನು 60 ಕಿ. ಮೀ.ದೂರ ಚಿತ್ರದುರ್ಗದ ಗುಡ್ಡಗಾಡು ಪ್ರದೇಶದಲ್ಲಿ ಬಿಡಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟಿನಲ್ಲಿ ಈ ಮುಂಚೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್, ಅಷ್ಟು ಹಂದಿಗಳ ಮೌಲ್ಯವನ್ನು ದಾವಣಗೆರೆ ಮಹಾನಗರಪಾಲಿಕೆ ಆಯುಕ್ತರು ಸೇರಿದಂತೆ ಇನ್ನಿತರೆ ಅಧಿಕಾರಿಗಳ ಸಂಬಳದಿಂದ ವಸೂಲು ಮಾಡಬೇಕು ಎಂದು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ದಾವಣಗೆರೆ ಪಾಲಿಕೆಗೆ ಸುಪ್ರೀಂ ಕೋರ್ಟಿನಲ್ಲಿ ಮಧ್ಯಂತರ ತಡೆಯಾಜ್ಞೆ ಸಿಕ್ಕಿದೆ.
ವೈರಲ್ ವಿಡಿಯೋ: ಮಂದಿರ-ಮಸೀದಿಗೆ ಪ್ರದಕ್ಷಿಣೆ ಹಾಕುವ ಊರ ಹಂದಿ!
ನ್ಯಾ. ರೋಹಿಂಟನ್ ನಾರಿಮನ್ ಮತ್ತು ನ್ಯಾ. ವಿ ಸುಬ್ರಮಣಿಯನ್ ಅವರನ್ನು ಒಳಗೊಂಡಿದ್ದ ದ್ವಿಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ನೀಡಿದೆ. ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಮತ್ತು ಇತರೆ ಪ್ರತಿವಾದಿಗಳಿಗೆ ನೋಟಿಸ್ ನೀಡಲಾಗಿದೆ.
ರಾಜ್ಯದ ಹಂದಿಗಳ ರಾಜಧಾನಿ
ಪಿಗ್ ಕ್ಯಾಪಿಟಲ್: ರಾಜ್ಯದ ಹಂದಿಗಳ ರಾಜಧಾನಿ ಎಂದು ಕರೆಸಿಕೊಳ್ಳುತ್ತಿದ್ದ ವಾಣಿಜ್ಯ ನಗರಿ ದಾವಣಗೆರೆಯನ್ನು ಹಂದಿಗಳ ಕಾಟದಿಂದ ಮುಕ್ತಗೊಳಿಸಲು ನಿರ್ಧರಿಸಲಾಗಿತ್ತು. 2018ರ ಅಕ್ಟೋಬರ್ 26 ರಂದು ನಗರ ಪಾಲಿಕೆ ಆಯುಕ್ತರು ನಗರದಿಂದ ಹಂದಿಗಳನ್ನು ಹಿಡಿದು ಹೊರಗೆ ಸಾಗಿಸಬೇಕೆಂದು ಆದೇಶ ಹೊರಡಿಸಲಾಯಿತು. ಆದರೆ ಕುಳುವ ಮಹಾ ಸಂಘವು ಪಾಲಿಕೆ ಕ್ರಮವನ್ನು ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿತ್ತು.
2019ರ ಏಪ್ರಿಲ್ 22ರಂದು ನೀಡಿದ ತೀರ್ಪು
ಹೈಕೋರ್ಟ್ ನಲ್ಲಿ ವಿಚಾರಣೆ ನಡೆದು 2019ರ ಏಪ್ರಿಲ್ 22ರಂದು ನೀಡಿದ ತೀರ್ಪಿನಲ್ಲಿ ನಗರ ಆಯುಕ್ತರ ಆದೇಶ ಸಂವಿಧಾನ ಬಾಹಿರ ಎಂದು ಆದೇಶಿಸಿತ್ತು. ಅಷ್ಟೇ ಅಲ್ಲದೇ ಈ ಹಂದಿಗಳನ್ನು ಹಿಡಿದು ಹೊರಗೆ ಸಾಗಿಸಲು ವೆಚ್ಚವಾದ ಹಣವನ್ನು ಹಂದಿ ಸಾಕಾಣಿಕೆಗೆ ವ್ಯವಸ್ಥೆ ಮಾಡಲು ಮತ್ತೆ ಹಂದಿ ಸಾಕಣೆದಾರರಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ತರಬೇತಿ ನೀಡಲು ಬಳಸಿ ಕೊಳ್ಳಬಹುದಿತ್ತು ಎಂದು ಅಭಿಪ್ರಾಯಪಟ್ಟಿತ್ತು.
ಹಂದಿಗಳ ಬೆಲೆಯನ್ನು ನಿಗದಿ ಪಡಿಸಲು ಸಮಿತಿ
ನಗರದಿಂದ ಹೊರ ಸಾಗಿಸಿದ ಹಂದಿಗಳ ಬೆಲೆಯನ್ನು ನಿಗದಿ ಪಡಿಸಲು ಸಮಿತಿಯೊಂದನ್ನು ರಚಿಸಬೇಕು. ಮೌಲ್ಯ ನಿರ್ಧಾರವಾದ ಬಳಿಕ ಆ ಹಣವನ್ನು ರಾಜ್ಯದ ಬೊಕ್ಕಸದಿಂದ ಪಾವತಿಸದೇ ಆಯುಕ್ತರು ಮತ್ತು ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ವೈಯಕ್ತಿಕ ನೆಲೆಯಲ್ಲಿ ನೀಡಬೇಕು ಎಂದು ಆದೇಶಿಸಿತ್ತು.
ಆಯುಕ್ತರ ಪರ ವಾದಿಸಿದ ಸಂಜಯ್ ನೂಲಿ
"ಈ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ. ಆಯುಕ್ತರ ಪರ ವಾದಿಸಿದ ಸಂಜಯ್ ನೂಲಿ, ಹಂದಿಗಳ ಉಪಟಳದಿಂದ ಆರೋಗ್ಯ ಸಮಸ್ಯೆ(ಎಚ್ 1 ಎನ್ 1, ಹಂದಿಜ್ವರ,ಟಿಬಿ, ಆಂಥ್ರಾಕ್ಸ್, ಮಲೇರಿಯಾ, ಡೆಂಗ್ಯೂ. ಇತ್ಯಾದಿ ಕಾಯಿಲೆ ಹರಡುತ್ತಿದೆ) ಸೃಷ್ಟಿಯಾಗಿತ್ತು. ಹಂದಿಗಳನ್ನು ಸೂಕ್ತವಾಗಿ ನಿರ್ವಹಿಸುವಂತೆ ಹಂದಿ ಮಾಲೀಕರಿಗೆ ಸೂಚನೆ ನೀಡಲಾಗಿತ್ತು. ಹಂದಿಗಳನ್ನು ಹಿಡಿಯಲು ಹೋಗಿದ್ದ ಸಿಬ್ಬಂದಿ ಮೇಲೆ ಹಂದಿಗಳ ಮಾಲೀಕರಿಂದ ಹಲ್ಲೆಯಾಗಿತ್ತು. ಸಾರ್ವಜನಿಕ ಆರೋಗ್ಯದ ಹಿತಾಸಕ್ತಿಯನ್ನು ಗಮನಿಸಿ ಹಂದಿ ಹಿಡಿಯುವಂತೆ ಆಯುಕ್ತರು ಆದೇಶಿಸಿದ್ದರು, ಮುನ್ಸಿಪಾಲಿಟಿ ಕಾಯ್ದೆಯಡಿಯಲ್ಲಿ ಹಂದಿ ಸಾಗಾಣಿಕೆಗೆ ಲೈಸನ್ಸ್ ಕೂಡಾ ಪಡೆದಿಲ್ಲ" ಎಂದು ವಾದಿಸಿದರು.