ದಾವಣಗೆರೆ: ಮೂಢನಂಬಿಕೆಗೆ ದೀಪಾವಳಿ ಹಬ್ಬವನ್ನೇ ಮರೆತ ಜನ
ದಾವಣಗೆರೆ, ನವೆoಬರ್ 15: ದೇಶಾದ್ಯಂತ ಬೆಳಕಿನ ಹಬ್ಬ ಸಡಗರದಿಂದ ಆಚರಿಸುತ್ತಿದ್ದರೆ, ದಾವಣಗೆರೆ ತಾಲ್ಲೂಕಿನ ಲೋಕಿಕೆರೆ ಗ್ರಾಮದಲ್ಲಿ ಮಾತ್ರ ಕತ್ತಲು ಆವರಿಸಿದೆ. ಮೂಢನಂಬಿಕೆಗೆ ಜನರು ಹಬ್ಬವನ್ನೇ ಮರೆತಿದ್ದಾರೆ.
ಇಲ್ಲಿನ ಜನರ ಪ್ರಕಾರ, ಊರು ಹಬ್ಬ ಮಾಡುವ ಹಾಗಿಲ್ಲ. ಹೊಸ ವಸ್ತು ಖರೀದಿ ಮಾಡುವಂಗಿಲ್ಲ. ಈ ಜನರಿಗೆ ದೀಪಾವಳಿ ಹಬ್ಬ ಕರಾಳ ದಿನವಾಗಿದೆ. ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ. ಹಬ್ಬದ ದಿನ ದೀಪ ಹಚ್ಚಿ ಪಟಾಕಿ ಸಿಡಿಸಿ ಎಲ್ಲರೂ ಸಂಭ್ರಮಿಸುತ್ತಾರೆ. ಆದರೆ ಲೋಕಿಕೆರೆ ಗ್ರಾಮದಲ್ಲಿ ದೀಪಾವಳಿ ಅಂದರೆ ಭಯ.
ಕುರುಬ ಜನಾಂಗದವರು ಈ ಹಬ್ಬವನ್ನು ಮರೆತಿದ್ದಾರೆ
ಈ ಗ್ರಾಮದಲ್ಲಿ ಮಾತ್ರ ಈ ಎಲ್ಲಾ ಆಚರಣೆ ಮತ್ತು ಹೊಸ ವಸ್ತುಗಳ ಖರೀದಿಗೆ ಆರೇಳು ತಲೆಮಾರುಗಳಿಂದ ಬ್ರೇಕ್ ಬಿದ್ದಿದೆ. ಒಂದು ಸಣ್ಣ ಮೂಢನಂಬಿಕೆಗೆ ಮೊರೆ ಹೋಗಿರುವ ಈ ಊರಿನಲ್ಲಿ ಇರುವ ಕುರುಬ ಜನಾಂಗದವರು ಈ ಹಬ್ಬವನ್ನು ಮರೆತೇ ಹೋಗಿದ್ದಾರೆ.
ಕಾಡಿನಲ್ಲೇ ರಾತ್ರಿ ಕಳೆದ ಪುಟ್ಟ ಬಾಲಕಿ; ದಾವಣಗೆರೆಯಲ್ಲೊಂದು ಅಚ್ಚರಿಯ ಸಂಗತಿ...
ಹಬ್ಬ ಮಾಡದಿರಲು ಮೊದಲನೆಯ ಕಾರಣ
ಒಂದು ಈ ಗ್ರಾಮದ ಯುವಕನೊಬ್ಬ ಚಿತ್ರದುರ್ಗದಲ್ಲಿ ಮದುವೆ ಆಗಿರುತ್ತಾನೆ. ಈ ವೇಳೆ ಆ ನವ ವರ ಹಾವು ಕಚ್ಚಿ ಸಾವನ್ನಪ್ಪಿರುತ್ತಾನೆ. ನಂತರ ಇವರ ಪತ್ನಿಗೆ ಮತ್ತೊಂದು ಮದುವೆ ಮಾಡಲು ಮುಂದಾದಾಗ ಈ ಮಹಿಳೆ ನನಗೆ ಈಗಾಗಲೇ ಮದುವೆ ಆಗಿದೆ ಅವನು ಸತ್ತರೂ ಅವನೇ ನನ್ನ ಗಂಡ. ನಾನು ಮತ್ತೊಂದು ಮದುವೆ ಆಗಲಾರೆ ಎಂದು ದೀಪಾವಳಿ ದಿನವೇ ಅಗ್ನಿಗೆ ಆಹುತಿಯಾಗುತ್ತಾಳೆ. ಹೀಗಾಗಿ ದೀಪಾವಳಿ ದಿನವೇ ಊರಿಗೆ ಕತ್ತಲು ಆವರಿಸಿದೆ ಎಂದು ಅಂದಿನಿಂದ ಇಂದಿನವರೆಗೆ ದೀಪಾವಳಿ ಹಬ್ಬ ಮಾಡುತ್ತಿಲ್ಲ.
ಹಬ್ಬ ಮಾಡದಿರಲು ಎರಡನೆಯ ಕಾರಣ
ಮತ್ತೊಂದು ಕಾರಣ, ಈ ಗ್ರಾಮದ ನಾಲ್ಕೈದು ಮಂದಿ ಯುವಕರು ಹಬ್ಬದ ದಿನ ಪೂಜೆಯ ವಸ್ತುಗಳಾದ ಕವಚಿ ಕಡ್ಡಿ, ಉತ್ರಾಣಿ ಕಡ್ಡಿ ತರಲು ಹೋದವರು ಇದುವರೆಗೂ ಬಂದಿಲ್ಲವಂತೆ. ಹೀಗಾಗಿ ಅವರು ಸತ್ತಿರಬಹುದು. ಹೀಗಾಗಿ ಈ ದೀಪಾವಳಿ ಊರಿಗೆ ಅಪಶಕುನ ಎಂದು ತಿಳಿದು ಹಬ್ಬ ನಿಷೇಧಕ್ಕೆ ಅಂದಿನ ಮುಖಂಡರು, ಗ್ರಾಮಸ್ಥರು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಂದಿನಿಂದ ಇಂದಿನವರೆಗೆ ಇಲ್ಲಿ ದೀಪಾವಳಿ ಇಲ್ಲ.
ತಂತ್ರಜ್ಞಾನ ಯುಗದಲ್ಲಿ ಮೂಢನಂಬಿಕೆ
ಆದರೆ ಈಗಿನ ಯುವಕರು, ಎಲ್ಲರೂ ಹಬ್ಬ ಮಾಡುವುದು ನೋಡಿ ನಾವು ಮಾಡಬೇಕು ಎಂದು ಹಲವು ಬಾರಿ ಪ್ರಯತ್ನಿಸಿದರು ಆಗಿಲ್ಲ. ಮುಂದಿನ ವರ್ಷ ಕುಲದೇವರು ಬೀರಪ್ಪನ ಆಶೀರ್ವಾದ ಪಡೆದು ಹಬ್ಬ ಮಾಡಿಯೇ ಮಾಡುತ್ತೇವೆ ಎಂದು ಹೇಳುತ್ತಾರೆ. ಒಟ್ಟಾರೆ ಮುಂದುವರೆದ ಜಾಗತೀಕರಣ, ತಂತ್ರಜ್ಞಾನ ಯುಗದಲ್ಲಿ ಈ ಗ್ರಾಮದವರು ಮೂಢನಂಬಿಕೆಗೆ ಮೊರೆ ಹೋಗಿ ಹಬ್ಬ ನಿಷೇಧ ಹೇರಿಕೊಂಡಿರುವುದು ಸೋಜಿಗದ ಸಂಗತಿ. ಇನ್ನಾದರೂ ಈ ಊರಿಗೆ ಕತ್ತಲೆ ಹೋಗಿ ಬೆಳಕು ಆವರಿಸಲಿ ಎಂಬುದು ನಮ್ಮ ಆಶಯ.