ಆಹಾರ ಕಿಟ್ ಅನ್ನೂ ಮಾರುತ್ತಿದ್ದಾರಾ? ದಾವಣಗೆರೆಯಲ್ಲಿ ಹೀಗೊಂದು ಜಾಲ
ದಾವಣಗೆರೆ ,ಮೇ 11: ಇಲ್ಲಿನ ಕೆ.ಆರ್.ರಸ್ತೆಯ ಮುದ್ದೇಗೌಡರ ಶಾಲೆಯ ಎದುರು ಇರುವ ಗೋದಾಮಿನಲ್ಲಿ ಸಂಗ್ರಹಿಸಿದ್ದ 250 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ದಾಳಿ ನಡೆದಿದ್ದು, ಆರೋಪಿ ಪರಾರಿಯಾಗಿದ್ದಾನೆ.
Recommended Video
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ರವಿ ಶಿವಮೂರ್ತಿ ಹಿಪ್ಪರಗಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ವ್ಯಸನಿಗಳ ಕಾಟ: ಬಾರ್ ಬಂದ್ ಮಾಡಿಸಿದ ಗ್ರಾಮಸ್ಥರು
ಆಹಾರ ಕಿಟ್ಗಳ ಮಾರಾಟ ಶಂಕೆ: ಲಾಕ್ಡೌನ್ನಿಂದಾಗಿ ವಿತರಿಸಿರುವ ಕಿಟ್ಗಳ ಆಹಾರ ಧಾನ್ಯಗಳನ್ನೂ ಮಾರಾಟ ಮಾಡಿರುವ ಶಂಕೆ ಇದೇ ವೇಳೆ ವ್ಯಕ್ತವಾಗಿದೆ. ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡ ವೇಳೆ ಈ ಕಿಟ್ಗಳು ಪತ್ತೆಯಾಗಿವೆ. ಬಡವರು, ಕೂಲಿ ಕಾರ್ಮಿಕರು ಊಟವಿಲ್ಲದೇ ಕಷ್ಟ ಅನುಭವಿಸಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತ, ದಾನಿಗಳು ಹಾಗೂ ನಗರಪಾಲಿಕೆ ಸದಸ್ಯರು ಆಹಾರದ ಕಿಟ್ಗಳನ್ನು ವಿತರಿಸಿದ್ದು, ಕೆಲವರು ಅವುಗಳನ್ನು ಮಾರಾಟ ಮಾಡಿದ್ದಾರೆ. ಬಡವರಿಂದ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.
'ಆಟೋಗಳ ಮೂಲಕ ಒಬ್ಬೊಬ್ಬ ಚಾಲಕನಿಗೆ ₹5 ಸಾವಿರ ನೀಡಿ ಆ ಹಣದಿಂದ ಧಾನ್ಯಗಳನ್ನು ಖರೀದಿ ಮಾಡಲಾಗುತ್ತಿದೆ. ಆ ಚಾಲಕನಿಗೆ ₹300 ಕೂಲಿ ನೀಡಿ ಕಳುಹಿಸುವ ಜಾಲವೊಂದು ಕೆಲಸ ಮಾಡುತ್ತಿದೆ. ಇದರಿಂದಾಗಿ ಅರ್ಹ ಬಡವರಿಗೆ ಧಾನ್ಯಗಳು ಸಿಗದಂತಾಗಿದೆ. ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ವಿತರಿಸಿದ್ದು, ಅವುಗಳನ್ನು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ' ಎಂದು ಹೇಳುತ್ತಾರೆ ತಹಶೀಲ್ದಾರ್ ಗಿರೀಶ್.