ದಾವಣಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗೆ ಹಿಂದೇಟು
ದಾವಣಗೆರೆ, ನವೆಂಬರ್ 09; ದಾವಣಗೆರೆಯ ಜಿಲ್ಲಾಸ್ಪತ್ರೆಗೆ ಬರುವವರನ್ನು ಚಿಕಿತ್ಸೆ ನೀಡದೇ ವಾಪಸ್ ಕಳುಹಿಸುತ್ತಿದ್ದು, ರೋಗಿಗಳು ಪರದಾಡುವಂತೆ ಆಗಿದೆ. ಕೊರೊನಾ ನೆಪವೊಡ್ಡಿ ಜನರನ್ನು ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದು, ಈ ಆಸ್ಪತ್ರೆಯನ್ನೇ ನಂಬಿಕೊಂಡು ಬಂದ ಬಡ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ.
ಭಾನುವಾರವೂ ಇಂಥದ್ದೇ ಸಂಗತಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಕೊಪ್ಪಳ ಮೂಲದ ವಿದ್ಯಾರ್ಥಿ ಮಂಜುನಾಥ ಅವರಿಗೆ ತಡರಾತ್ರಿ ರಕ್ತವಾಂತಿ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಬಂದಿದ್ದರು. ಅಜ್ಜಂಪುರದ ಮಹಿಳೆಯೊಬ್ಬರು ವಿಷ ಸೇವಿಸಿದ್ದು, ಚಿಕಿತ್ಸೆಗೆಂದು ದಾವಣಗೆರೆ ಜಿಲ್ಲಾಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ಗೆ ಅವರನ್ನು ಕರೆದುಕೊಂಡು ಬರಲಾಗಿತ್ತು.
ರೋಗಗ್ರಸ್ಥವಾಗಿದೆ ಗುಂಡ್ಲುಪೇಟೆಯ ಈ ಸರ್ಕಾರಿ ಆಸ್ಪತ್ರೆ
ಆದರೆ ಇಬ್ಬರಿಗೂ ಚಿಕಿತ್ಸೆ ನೀಡದೇ ವಾಪಸ್ ಕಳುಹಿಸಲು ಮುಂದಾಗಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ಚಿಕಿತ್ಸೆ ನೀಡದೆ ರೋಗಿಗಳನ್ನು ಸತಾಯಿಸಿದ್ದಾರೆ. ನಂತರ ಆಂಬುಲೆನ್ಸ್ ಮೂಲಕ ಮಂಜುನಾಥ್ ಎಂಬುವರನ್ನು ಶಿವಮೊಗ್ಗ ಆಸ್ಪತ್ರೆಗೆ ಕಳುಹಿಸಲಾಗಿದೆ. ವಿಷ ಸೇವಿಸಿದ್ದ ಮಹಿಳೆಗೂ ಬೆಡ್ ಸಿಗದೇ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಜಿಲ್ಲಾಸ್ಪತ್ರೆ ಮಾತ್ರವಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಇದೇ ರೀತಿಯಾಗಿದೆ. ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭ ಸೂಕ್ತ ಚಿಕಿತ್ಸೆ ಸಿಗದೇ ಭಾನುವಾರ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆದಿದೆ. ಮಹಿಳೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಹಾಗೂ ತಾವರೆಕೆರೆ ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡವರಿಗೆ ಜೀವ ರಕ್ಷೆಯಾಗಬೇಕಿರುವ ಸರ್ಕಾರಿ ಆಸ್ಪತ್ರೆ ಜೀವ ತೆಗೆಯುವಂತೆ ಆಗಿದೆ. ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆಗೆ ಹೋಗಿ ದುಬಾರಿ ಬಿಲ್ ಕಟ್ಟಲಾಗದೆ ಪರದಾಡುತ್ತಿರುವ ಪರಿಸ್ಥಿತಿಯೂ ಇದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಬಡವರಿಗೆ ಚಿಕಿತ್ಸೆ ದೊರಕಿಸಿಕೊಡಬೇಕಿದೆ.
Recommended Video