ಬಯಲುಸೀಮೆ ದಾವಣಗೆರೆಯಲ್ಲಿ ಮಳೆಗಾಗಿ ಸಂತೆ ಹಾಕಿ ವಿಶಿಷ್ಟ ಪೂಜೆ
ದಾವಣಗೆರೆ, ಜುಲೈ.18: ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ರೈತರು ಸಂತಸಗೊಂಡಿದ್ದಾರೆ. ಆದರೆ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಮಾತ್ರ ಮಳೆಯ ಛಾಯೆಯೂ ಸಹ ಇಲ್ಲ. ಅಂದಹಾಗೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದರೂ ನಮ್ಮಲ್ಲಿ ಮಳೆಯಾಗಿಲ್ಲ ಎಂದರೆ ದೇವತೆ ಮುನಿಸಿಕೊಂಡಿದ್ದಾಳೆ ಎನ್ನುವುದು ಇಲ್ಲಿನ ಜನರ ನಂಬಿಕೆ.
ದೇವತೆಯ ಮುನಿಸು ತಣ್ಣಗೆ ಮಾಡಲು ಇಲ್ಲಿನ ಭಕ್ತರು ವಿಶೇಷವಾದ ಪೂಜೆ ನಡೆಸುತ್ತಾರೆ ಅದು ಹೇಗೆ ಅಂತೀರಾ?
ರಾಯಚೂರಿನಲ್ಲಿ ಮಳೆಗಾಗಿ ಜಲಾಭಿಷೇಕ ಹಮ್ಮಿಕೊಂಡ ರೈತರು
ಸಂತೆ ಹಾಕಿ ವಿಶಿಷ್ಟ ಪೂಜೆ
ಮಳೆ ಬಂದಿಲ್ಲ ಎಂದರೆ ಜನರು ಕಪ್ಪೆಗಳಿಗೆ ಹಾಗೂ ಕತ್ತೆಗಳಿಗೆ ಮದುವೆ ಮಾಡಿಸೋದು, ಇಲ್ಲವೇ ದೇವರಿಗೆ ಎಡೆ ಹಾಕುವುದು ಸರ್ವೆ ಸಾಮಾನ್ಯ. ಆದರೆ ದಾವಣಗೆರೆಯಲ್ಲಿ ಮಳೆಯಾಗಿಲ್ಲ ಎಂದರೆ ನಗರ ದೇವತೆ ದುಗ್ಗಮ್ಮ ದೇವಾಲಯ ಮುಂಭಾಗ ಸಂತೆ ಹಾಕಿ ವಿಶಿಷ್ಟ ಪೂಜೆ ಸಲ್ಲಿಸುತ್ತಾರೆ.
ಹೌದು, ಕಳೆದ ಹಲವಾರು ಶತಮಾನಗಳಿಂದ ದಾವಣಗೆರೆ ಜಿಲ್ಲೆಗೆ ಮಳೆಯಾಗಿಲ್ಲ ಎಂದರೆ ದೇವತೆ ಮುನಿಸಿಕೊಂಡಿದ್ದಾಳೆ ಎಂದು ಅರ್ಥ.
ದುಗ್ಗಮ್ಮ ದೇವಿಗೆ ಎಡೆ
ಹಿಂದಿನಿಂದಲೂ ಮಳೆ ಬರಲಿಲ್ಲ ಅಂದರೆ ದೇವಿಗೆ ಯಾವುದೇ ಬಲಿ ಕೊಡದೆ, ದೇವಾಲಯದ ಬಳಿ ಸಂತೆ ಹಾಕುತ್ತಾರೆ. ಇದರಿಂದ ಮಳೆ ಹುಲುಸಾಗಿ ಬರುತ್ತದೆ ಎಂಬುದು ಜನರ ನಂಬಿಕೆ. ಇದು ಹಲವಾರು ಬಾರಿ ಸಾಬೀತು ಕೂಡ ಆಗಿದೆ.
ಮಳೆಯಾಗದ ವರ್ಷದಲ್ಲಿ ಐದು ವಾರ ಸಂತೆ ನಡೆಸುತ್ತಾರೆ. ಪ್ರತಿ ಭಾನುವಾರ ಸಂತೆ ಹಾಕಿ ನಗರ ದೇವತೆಗೆ ವಿಶೇಷವಾದ ಪೂಜೆ ಮಾಡುತ್ತಾರೆ. ಈ ಬಾರಿಯೂ ಸಹ ಮಳೆ ಇಲ್ಲದೆ ಹಿನ್ನೆಲೆಯಲ್ಲಿ ಭಾನುವಾರ ದುಗ್ಗಮ್ಮ ದೇವಿಗೆ ಎಡೆ ಪೂಜೆ ಮಾಡಲಾಯಿತು.
ರೈತರ ವ್ಯಾಪಾರ
ಇನ್ನು ರೈತರು ತಾವು ಬೆಳೆದ ತರಕಾರಿಗಳನ್ನು ಇಲ್ಲಿ ತಂದು ಪೂಜೆ ಸಲ್ಲಿಸಿ, ವ್ಯಾಪಾರ ಮಾಡುತ್ತಾರೆ. ಇದರಿಂದ ದೇವತೆ ರೈತರ ಮೇಲೆ ಕರುಣೆ ತೋರಿಸಿ, ಮಳೆ ಸರಿಯಾದ ಸಮಯಕ್ಕೆ ಆಗುತ್ತದೆ ಎನ್ನುವುದು ಇಲ್ಲಿಯ ಜನರ ನಂಬಿಕೆ.
ಕಡಿಮೆ ಮಳೆ
ಇದರ ಜೊತೆಗೆ ದಾವಣಗೆರೆಯಿಂದ ಬೇರೆ ಜಿಲ್ಲೆಗಳಿಗೆ ಹೆಣ್ಣು ಮಕ್ಕಳು ಮದುವೆಯಾಗಿ ಹೋಗಿದ್ದವರು ಇಲ್ಲಿಗೆ ಬಂದು ದೇವಿಗೆ ಪೂಜೆ ಸಲ್ಲಿಸಿ ತಮ್ಮ ಊರಿಗೆ ಸಮೃದ್ಧಿ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ. ಒಟ್ಟಾರೆಯಾಗಿ ಹಿಂದೆಂದಿಗಿಂತಲೂ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ದೇವಿಗೆ ಎಡೆಪೂಜೆ ಮಾಡಿದ್ದರಿಂದ ಮಳೆ ಬರುತ್ತದೋ ಕಾದು ನೋಡಬೇಕಿದೆ.