ದಾವಣಗೆರೆ; ಆಶ್ರಯ ಮನೆ ಅರ್ಜಿಗೆ ಶಾಸಕರ ಮನೆ ಮುಂದೆ ಜಮಾಯಿಸಿದ ಜನ
ದಾವಣಗೆರೆ, ಆಗಸ್ಟ್ 14: ಆಶ್ರಯ ಮನೆ ಯೋಜನೆಗೆ ಅರ್ಜಿ ಪಡೆಯಲು ಸಾವಿರಾರು ಜನರು ಶಾಸಕರ ಮನೆ ಮುಂದೆ ಜಮಾಯಿಸಿ, ನೂಕು ನುಗ್ಗಲು ಉಂಟಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮನೆ ಮುಂದೆ ಸಾವಿರಾರು ಜನರು ಜಮಾಯಿಸಿದ್ದು, ಪಾಲಿಕೆ ವತಿಯಿಂದ ನೀಡಿದ ಅರ್ಜಿಗಳನ್ನು ಪಡೆಯಲು ಹಾಗೂ ಶಾಸಕರ ಸಹಿ ಪಡೆಯಲು ಬೆಳಗ್ಗೆಯಿಂದಲೇ ನೂಕು ನುಗ್ಗಲಾಗಿತ್ತು.
ನಾಲ್ವರು ಸಂತ್ರಸ್ತರಿಗೆ ಮನೆಯಲ್ಲೇ ಆಶ್ರಯ ನೀಡಿದ ಅಥಣಿಯ ಮಾಜಿ ಶಾಸಕ
ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಪಾಲಿಕೆ ವತಿಯಿಂದ ಆಶ್ರಯ ಮನೆಗಳಿಗೆ ಆರ್ಜಿಯನ್ನು ಆಹ್ವಾನಿಸಲಾಗಿತ್ತು. ಆದ್ದರಿಂದ ಶಾಸಕರ ಸಹಿಯೊಂದಿಗೆ ಅರ್ಜಿಯನ್ನು ಪಡೆಯಲು ದಕ್ಷಿಣ ಕ್ಷೇತ್ರದ ಸಾವಿರಾರು ಜನರು ಶಾಸಕರ ಮನೆ ಮುಂಭಾಗ ಜಮಾಯಿಸಿದ್ದಾರೆ.
ಅರ್ಜಿಯನ್ನು ಪಡೆಯಲು ಬಂದಿದ್ದ ರೇಖಾ ಎನ್ನುವವರು ನೂಕುನುಗ್ಗಲಿನಲ್ಲಿ ಕಾಲ್ತುಳಿತದಿಂದ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ರಾತ್ರಿಯಿಂದಲೇ ಶಾಸಕರ ಮನೆ ಕಾಯುತ್ತಿದ್ದು, ಅರ್ಜಿಗಳನ್ನು ಪಡೆದೇ ಹಿಂದಿರುಗಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ.