ದಾವಣಗೆರೆಯಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ಆರಂಭ
ವಣಗೆರೆ, ಫೆಬ್ರವರಿ 23: ರಾಜ್ಯದ ಹೃದಯ ಭಾಗವಾದ ದಾವಣಗೆರೆಯಲ್ಲಿ ಪಾಸ್ ಪೋರ್ಟ್ ಸೇವಾಕೇಂದ್ರ ಪ್ರಾರಂಭದಿಂದ ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ನಗರದ ಗಡಿಯಾರ ಕಂಬದ ಬಳಿ ಇರುವ ಪ್ರಧಾನ ಅಂಚೆ ಕಚೇರಿಯಲ್ಲಿ ನೂತನ ಪಾಸ್ಪೋರ್ಟ್ ಸೇವಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯು ವಿದ್ಯಾ ಕೇಂದ್ರ ಮತ್ತು ವಾಣಿಜ್ಯ ನಗರಿ ಆಗಿರುವುದರಿಂದ ಹೊರದೇಶಕ್ಕೆ ಹೋಗುವ ಮತ್ತು ಬರುವ ವಿದ್ಯಾರ್ಥಿಗಳು ಹಾಗೂ ವಾಣಿಜ್ಯೋದ್ಯಮಿಗಳಿಗೆ ಅನುಕೂಲವಾಗಲಿದೆ.
ಫೆ. 14ರಿಂದ ಬೆಳಗಾವಿಯಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ಆರಂಭ
ಇಲ್ಲಿನ ಉದ್ಯೋಗಸ್ಥರು ಹೊರದೇಶಗಳಿಗೆ ಹೆಚ್ಚಾಗಿ ಹೋಗುತ್ತಿದ್ದಾರೆ. ಹಾಗಾಗಿ ಇಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ಸ್ಥಾಪನೆಯಾಗಬೇಕೆಂದು ಕ್ಷೇತ್ರದ ಜನತೆಯ ಒತ್ತಾಸೆಯಾಗಿತ್ತು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಜಿಲ್ಲೆಯಲ್ಲಿ ಪಾಸ್ಪೋರ್ಟ್ ಸೇವಾಕೇಂದ್ರದ ಅವಶ್ಯಕತೆಯಿದೆ ಎಂದು ಬೇಡಿಕೆ ಇಟ್ಟು ಅದನ್ನು ನೆರವೇರಿಸಿದ ಸಂತೃಪ್ತಿ ನನಗಿದೆ ಎಂದರು.
ಮಧ್ಯ ಕರ್ನಾಟಕ ಭಾಗದ ಜನತೆ ಪಾಸ್ಪೋರ್ಟ್ ಗಾಗಿ ಹುಬ್ಬಳ್ಳಿ ಇಲ್ಲವೇ ಬೆಂಗಳೂರು ಕಚೇರಿಗೆ ಹೋಗಬೇಕಿತ್ತು. ಇದೀಗ ದಾವಣಗೆರೆಯಲ್ಲಿ ಸೇವಾಕೇಂದ್ರ ಪ್ರಾರಂಭವಾಗಿರುವುದರಿಂದ ಹಾವೇರಿ, ಚಿತ್ರದುರ್ಗ ಭಾಗದ ಜನರಿಗೆ ಅನುಕೂಲವಾಗಿದೆ.
ಮೈಸೂರಿನಲ್ಲಿ ಫೆ. 10, 17, ಮಾ. 3ರಂದು ಪಾಸ್ಪೋರ್ಟ್ ಮೇಳ
ದೇಶದ 56 ಕಡೆಗಳಲ್ಲಿ ಅಂಚೆ ಕಚೇರಿಯಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು, ಈಗಾಗಲೇ ಮಂಗಳೂರು, ಬೆಳಗಾಂ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಾರಂಭವಾಗಿದೆ. ಈ ಸೇವಾಕೇಂದ್ರದಲ್ಲಿ ನಿಗದಿತ ಅವಧಿ ಯೊಳಗೆ ಪಾಸ್ಪೋರ್ಟ್ ವಿತರಣೆಯಾಗಲಿದೆ.
ದಾವಣಗೆರೆಯಲ್ಲಿ ಪ್ರಾರಂಭದ ದಿನವೇ 25-30 ಜನರು ಪಾಸ್ಪೋರ್ಟ್ ಗಾಗಿ ಅರ್ಜಿ ಸಲ್ಲಿಸುತ್ತಿರುವುದನ್ನು ನೋಡಿದರೇ ಇಲ್ಲಿನ ಜನರಿಗೆ ಅದರ ಅವಶ್ಯಕತೆ ಎಷ್ಟಿದೆ ಎಂದು ತಿಳಿಯುತ್ತದೆ ಎಂದರು.
ಬೆಂಗಳೂರು ವಿಭಾಗೀಯ ಪಾಸ್ಪೋರ್ಟ್ ಕಚೇರಿಯ ಐಎಫ್ ಎಸ್ ಅಧಿಕಾರಿ ಭರತ್ಕುಮಾರ್ ಕುತಟಿ ಮಾತನಾಡಿ, ದೇಶದ ಜನಸಂಖ್ಯೆಯ ಶೇಕಡ 5 ರಷ್ಟು ಜನರು ಮಾತ್ರ ಪಾಸ್ಪೋರ್ಟ್ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಬಹುಪಾಲು ಜನರು ಪಾಸ್ಪೋರ್ಟ್ ಸೌಲಭ್ಯ ಹೊಂದ ಬೇಕೆನ್ನುವುದು ಕೇಂದ್ರ ಸರ್ಕಾರದ ಆಶಯವಾಗಿದೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಪಾಸ್ಪೋರ್ಟ್ ಸೇವಾಕೇಂದ್ರದ ಅವಶ್ಯಕತೆ ಹೆಚ್ಚಾಗಿದ್ದು, ಇಲ್ಲಿನ ಜನರಿಗೆ ಅನುಕೂಲವಾಗಿದೆ. ಪಾಸ್ಪೋರ್ಟ್ ಗೆ ನಿಗದಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ ನಂತರದ 10 ದಿನಗಳ ಒಳಗಾಗಿ ಪಾಸ್ಪೋರ್ಟ್ ವಿತರಣೆ, ಒಂದು ವೇಳೆ ಅರ್ಜಿದಾರರಿಗೆ ಪೊಲೀಸ್ ಪರಿಶೀಲನೆಗೊಳಪಡಿಸಿದರೇ 30 ದಿನಗಳೊಗಾಗಿ ವಿತರಣೆ ಹಾಗೂ ತಾತ್ಕಾಲಿಕ ಪಾಸ್ಪೋರ್ಟ್ ಅನ್ನು ಗೆಜೆಟೆಡ್ ಅಧಿಕಾರಿಗಳ ಸಹಿಯೊಂದಿಗೆ 3-4 ದಿನಗಳೊಳಗಾಗಿ ವಿತರಣೆ ಮಾಡಲಾಗುವುದು. ಸಾರ್ವಜನಿಕರು ಸೇವೆಯನ್ನು ಪಡೆದುಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತ್ರಾವ್ ಜಾಧವ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.