"ಪಾದರಾಯನಪುರ ಗಲಾಟೆ: ಮನುಕುಲವೇ ತಲೆ ತಗ್ಗಿಸುವಂತ ಕೃತ್ಯ'
ದಾವಣಗೆರೆ, ಏಪ್ರಿಲ್ 20: ಪಾದರಾಯನಪುರ ಗಲಾಟೆ ಪ್ರಕರಣ ಇಡೀ ಮನುಕುಲವೇ ತಲೆ ತಗ್ಗಿಸುವಂತಹದ್ದು, ಹಲ್ಲೆ ನಡೆಸಿದವರ ವಿರುದ್ಧ ಗೂಂಡಾ ಕಾಯ್ದೆ ಹಾಕಿ, ಕಠಿಣ ಶಿಕ್ಷೆ ನೀಡಬೇಕು ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ""ಶವಸಂಸ್ಕಾರಕ್ಕೆ ರೇಣುಕಾಚಾರ್ಯ ತಮ್ಮ ಕ್ಷೇತ್ರಕ್ಕೆ ಕರೆದರೆ ನಾನು ಬರುತ್ತೇನೆ '' ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಜಮೀರ್ ಅಹಮ್ಮದ್ ಗೆ ತಿರುಗೇಟು ನೀಡಿದರು.
""ನಾನು 15 ವರ್ಷಗಳಿಂದ ಕ್ಷೇತ್ರದ ಜನತೆಗೆ ಕಷ್ಟಕ್ಕೆ ಸ್ಪಂದಿಸುತ್ತಿದ್ದೇನೆ. ಯಾರೇ ವಿಧಿವಶರಾದರೂ ಶವಸಂಸ್ಕಾರಕ್ಕೆ ಹೋಗಿ ಧೈರ್ಯ ಹೇಳುತ್ತಿದ್ದೇನೆ, ಯಾವತ್ತೂ ಅದನ್ನು ಪ್ರಚಾರಕ್ಕಾಗಿ ಮಾಡಿಲ್ಲ, ನೀವು ಶವಸಂಸ್ಕಾರಕ್ಕೆ ಹೋಗಿ ಬಂದು ಅದನ್ನು ಟ್ವಿಟ್ಟರ್ ನಲ್ಲಿ ಹಾಕಿಕೊಂಡು ಪ್ರಚಾರ ಗಿಟ್ಟಿಸಿಕೊಂಡಿದ್ದೀರಿ'' ಎಂದರು.
""ನನ್ನ ಕ್ಷೇತ್ರಕ್ಕೆ ನಿನ್ನ ಅವಶ್ಯಕತೆ ಇಲ್ಲ, ನನ್ನ ಜನರನ್ನು ನಾನು ನೋಡಿಕೊಳ್ಳುತ್ತೇನೆ, ಕಷ್ಟಕ್ಕೆ ಸ್ಪಂದಿಸುತ್ತೇನೆ. ಸಾರಾಯಿಪಾಳ್ಯದಲ್ಲಿ ಆದ ಗಲಾಟೆ ಘಟನೆಯನ್ನು ಪೌರತ್ವಕ್ಕೆ ಲಿಂಕ್ ಮಾಡಿದಿರಿ. ಅವತ್ತೇ ಅದನ್ನು ಖಂಡಿಸಿದ್ದರೆ ನಿನ್ನೆಯ ಘಟನೆ ಆಗುತ್ತಿರಲಿಲ್ಲ. ನಿಮ್ಮ ಹೇಳಿಕೆ, ಪ್ರಚೋದನಕಾರಿ ವರ್ತನೆಯಿಂದ ಈ ರೀತಿ ಘಟನೆಗಳು ಆಗುತ್ತಿವೆ. ನೀವು ಜನತೆಯ ಮುಂದೆ ಇದಕ್ಕೆಲ್ಲ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.
ನಾನು ತಬ್ಲಿಘಿ ಗಳ ವಿರುದ್ಧ ಮಾತನಾಡಿದ್ದಕ್ಕೆ ನನ್ನ ಮೇಲೆ ಕೇಸ್ ಹಾಕಿದಿರಿ. ನಾನು ಮುಸ್ಲಿಮರ ವಿರುದ್ಧ ಮಾತನಾಡಿಲ್ಲ, ತಬ್ಲಿಘಿಗಳು ಯಾರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಅವರ ವಿರುದ್ಧ ಹೇಳಿಕೆ ನೀಡಿದ್ದೆ. ಜಮೀರ್ ಖಾನ್ ನ ನಡವಳಿಕೆ ಹಾಗೂ ಹೇಳಿಕೆಗಳನ್ನು ಖಂಡಿಸುತ್ತೇನೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದರು.
ನಮ್ಮನ್ನು ಕೇಳಿ ಪಾದರಾಯನಪುರಕ್ಕೆ ಹೋಗಬೇಕಿತ್ತು ಎಂದು ಶಾಸಕ ಜಮೀರ್ ಹೇಳುತ್ತಾರೆ. ಪ್ರಧಾನಿಗಳು ಹಾಗೂ ಸಿಎಂ ಅವರು ಕೊರೊನಾ ವಾರಿಯರ್ಸ್ ಗೆ ಸೂಚನೆ ನೀಡಿದ್ದಾರೆ. ನಿಮ್ಮನ್ನು ಕೇಳಿ ಕೆಲಸ ಮಾಡಬೇಕೆಂದು ಹೇಳಿಲ್ಲ ಎಂದು ಶಾಸಕ ಜಮೀರ್ ಅಹಮದ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.