ದಾವಣಗೆರೆಯಲ್ಲಿ ಕೈಗಾರಿಕಾ ಕಾರಿಡಾರ್ಗೆ ವಿರೋಧ: ಶಾಮನೂರು ಶಿವಶಂಕರಪ್ಪ ಮುಂದೆ ರೈತರ ಅಳಲು
ದಾವಣಗೆರೆ, ಆಗಸ್ಟ್, 18: ಜಿಲ್ಲೆಯ ಅಣಜಿ, ಮೆಳ್ಳಿಕಟ್ಟೆ, ಲಿಂಗಾಪುರದಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ರೈತರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಭಾಗದ ಕೈಗಾರಿಕೆ ಕಾರಿಡಾರ್ ಸ್ಥಾಪನೆ ಮಾಡಬೇಡಿ ಎಂದು ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ಯೋಜನೆ ಜಾರಿಗೆ ಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.
ಅಣಜಿ, ಮೆಳ್ಳಿಕಟ್ಟೆ, ಲಿಂಗಾಪುರದಲ್ಲಿ ನೀರಾವರಿ ಜಮೀನು ಭೂಸ್ವಾಧೀನ ಪಡಿಸಿಕೊಂಡು ಕೈಗಾರಿಕೆ ಕಾರಿಡಾರ್ ಸ್ಥಾಪನೆ ಮಾಡಲು ಷಡ್ಯಂತ್ರ ನಡೆಸಲಾಗಿದೆ. ಇದನ್ನು ಕೈಬಿಡಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ ರೈತರು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಕೆಲ ರೈತರಿಗೆ ಭೂಸ್ವಾಧೀನಪಡಿಸಿಕೊಳ್ಳುವ ಸಂಬಂಧ ನೊಟೀಸ್ ಜಾರಿಗೊಳಿಸಲಾಗಿದೆ. ಇಲ್ಲಿ ಫಲವತ್ತಾದ ಭೂಮಿ ಇದೆ. ನೀರಾವರಿ ಸೌಲಭ್ಯ ಚನ್ನಾಗಿದ್ದು, ರೈತರು ಅದರಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈಗ ಬಿಜೆಪಿ ಸರ್ಕಾರ ರೈತರ ಮೇಲೆ ಗದಾಪ್ರಹಾರ ನಡೆಸಲು ಮುಂದಾಗಿದೆ. ಕೈಗಾರಿಕಾ ಕಾರಿಡಾರ್ ಸ್ಥಾಪನೆ ಮಾಡಿದರೆ ಪರಿಸರ ಹಾಳಾಗಲಿದೆ. ನೀರಾವರಿ ಜಮೀನು ವಶಪಡಿಸಿಕೊಳ್ಳುವ ಬದಲು ಬರಡು ಭೂಮಿಯಲ್ಲಿ ಕೈಗಾರಿಕಾ ಕಾರಿಡಾರ್ ಮಾಡಲಿ. ಇದಕ್ಕೆ ನಮ್ಮ ಅಭ್ಯಂತರ ಇಲ್ಲ. ಏಕಾಏಕಿಯಾಗಿ ನಮ್ಮನ್ನು ಒಕ್ಕಲೆಬ್ಬಿಸಿದರೆ ಎಲ್ಲಿಗೆ ಹೋಗುವುದು? ಬದುಕು ಕಟ್ಟಿಕೊಳ್ಳುವುದಾದರೂ ಹೇಗೆ? ಎಂದು ರೈತರು ಕಿಡಿಕಾರಿದರು.
ಆದ್ದರಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ಹಾಕುವಂತೆ ಶಾಮನೂರು ಶಿವಶಂಕರಪ್ಪ ಅವರನ್ನು ರೈತರು ಆಗ್ರಹಿಸಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರ ಗಮನಕ್ಕೆ ತಂದಿದ್ದೇವೆ. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಕೈಗಾರಿಕಾ ಕಾರಿಡಾರ್ ಬೇಡ ಎಂದು ಹೇಳಿದ್ದೇವೆ. ಸ್ವಾತಂತ್ರ್ಯ ದಿನಾಚರಣೆಯ ಅಮೃತ
ಮಹೋತ್ಸವಕ್ಕೆ ಆಗಮಿಸಿದ್ದ ವೇಳೆ ಬೈರತಿ ಬಸವರಾಜ ಅವರು ರೈತರ ಜೊತೆ ಸಭೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಸಭೆಯಲ್ಲಿ ರೈತರಿಗೆ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡಿದರೆ ನಾವೇನೂ ಮಾಡಬೇಕು. ಈ ಯೋಜನೆ ಜಾರಿಗೊಳಿಸದಂತೆ ಒತ್ತಡ ಹೇರುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಮನೂರು ಶಿವಶಂಕರಪ್ಪ ಅವರು ಭಾನುವಾರ ದಾವಣಗೆರೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬರುತ್ತಿದ್ದಾರೆ. ಅವರ ಗಮನಕ್ಕೆ ತರುತ್ತೇನೆ. ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿಕೊಡುತ್ತೇನೆ. ನೇರವಾಗಿ ನೀವೇ ಮಾತನಾಡಿ ಎಂದು ರೈತರಿಗೆ ಭರವಸೆ ನೀಡಿದರು. ಸಾವಿರಾರು ರೈತರು ಅಣಜಿ, ಮೆಳ್ಳಿಕಟ್ಟೆ, ಲಿಂಗಾಪುರ ಸೇರಿದಂತೆ ಹಲವು ಕಡೆ ತಮ್ಮ ಜಮೀನುಗಳಲ್ಲಿ ಬೆಳೆ ಬೆಳೆಯುತ್ತಿದ್ದಾರೆ.
ಇನ್ನು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕೈಗಾರಿಕೆ ಸ್ಥಾಪನೆ ಆದರೆ ಇಲ್ಲಿನ ಯುವಕರಿಗೆ ಕೆಲಸ ಸಿಗುತ್ತದೆ. ಕೈಗಾರಿಕೋದ್ಯಮವೂ ಬೆಳೆದು ನಗರಕ್ಕೂ ಒಳ್ಳೆಯದಾಗುತ್ತೆ. ರೈತರ ವಿರೋಧವಾಗಿ ಇದನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಬೈರತಿ ಬಸವರಾಜ ಅವರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೈಗಾರಿಕಾ ಕಾರಿಡಾರ್ ಯೋಜನೆ ಜಾರಿಗೆ ಮುಂದಾದರೆ ಭಾರಿ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Recommended Video