ಕುಂದುವಾಡ ಕೆರೆ ಬಳಿ ಸೈಕ್ಲಿಂಗ್ ಪಾಥ್ ಬೇಡ; ಪರಿಸರವಾದಿಗಳ ವಿರೋಧ
ದಾವಣಗೆರೆ, ಜುಲೈ 30: ನಗರದ ಕುಂದುವಾಡ ಕೆರೆ ಪ್ರವಾಸಿಗರ ಹಾಗೂ ವಾಯುವಿಹಾರಿಗಳ ಹಾಟ್ ಫೇವರೆಟ್. ಇದೀಗ ಇಲ್ಲಿ ಸೈಕ್ಲಿಂಗ್ ಪಾಥ್ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಪರಿಸರ ಹೋರಾಟಗಾರರಿಂದ ವಿರೋಧ ವ್ಯಕ್ತವಾಗಿದೆ.
ಕುಂದುವಾಡ ಕೆರೆ ನಗರಕ್ಕೆ ಕುಡಿಯುವ ನೀರು ಪೂರೈಸುವ ಕೆರೆಗಳಲ್ಲಿ ಒಂದು. ಪ್ರವಾಸಿಗರ ಹಾಗೂ ವಾಯು ವಿಹಾರಿಗಳ ನೆಚ್ಚಿನ ತಾಣವೂ ಹೌದು. ಇಲ್ಲಿನ ಸೌಂದರ್ಯ ಸವಿಯಲು ದಿನನಿತ್ಯ ಸಾವಿರಾರು ಮಂದಿ ಬರುತ್ತಾರೆ. ಆದ್ದರಿಂದ ಸ್ಮಾರ್ಟ್ ಸಿಟಿ ಯೋಜನೆಯಿಂದ ಸೈಕಲ್ ಪಾಥ್ ನಿರ್ಮಿಸಲು ಸುಮಾರು 13 ಕೋಟಿ ರೂಪಾಯಿ ಟೆಂಡರ್ ಕೂಡ ಆಗಿದೆ. ಸೈಕಲ್ ಪಾಥ್ ನಿರ್ಮಿಸಿ ಅಲ್ಲಿ ಸೈಕಲ್ ವಾಕ್ ನಡೆಸುವುದು ಯೋಜನೆಯ ಉದ್ದೇಶ. ಆದರೆ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಸ್ಮಾರ್ಟ್ ಸಿಟಿ ದಾವಣಗೆರೆ ರಸ್ತೆಗಿಳಿಯಲಿವೆ ಇ-ಆಟೋಗಳು
"ಸ್ಮಾರ್ಟ್ ಸಿಟಿ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು, ಕಳಪೆಯಾಗಿದೆ. ಕಾಮಗಾರಿ ಹೊಣೆ ಹೊತ್ತಿರುವ ಯೋಜನೆಯ ಅಧಿಕಾರಿಗಳಿಗೆ ದೂರದೃಷ್ಟಿಯಿಲ್ಲ. ಸಂಬಂಧಪಟ್ಟ ಪಾಲಿಕೆ, ಪರಿಸರ, ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಭೆಗೆ ಕರೆಯುವುದಿಲ್ಲ, ಚರ್ಚಿಸುವುದಿಲ್ಲ. ಪರಿಸರಕ್ಕೆ ಪೂರಕವಾಗಿ ಆಗಬೇಕಾದ ಕಾಮಗಾರಿಗಳು ವ್ಯಾವಹಾರಿಕವಾಗಿವೆ. ಕುಂದವಾಡ ಕೆರೆ ಸುತ್ತ ಸೈಕಲ್ ಪಾಥ್ ನಿರ್ಮಿಸಲು 13.79 ಕೋಟಿ ಕಾಮಗಾರಿಗೆ ಟೆಂಡರ್ ನೀಡಲಾಗುತ್ತಿದೆ. ಅಗತ್ಯ ಇರುವ ಕಡೆ ಕಾಮಗಾರಿ ಕೈಗೊಳ್ಳದೆ ಇಂತಹ ಕಾಮಗಾರಿ ಕೈಗೊಳ್ಳಲಾಗುತ್ತಿದೆ" ಎಂದು ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಗಿರೀಶ್ ಎಸ್. ದೇವರಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ವಾಯುವಿಹಾರಿಗಳಿಗೆ ಸೈಕಲ್ ಫಾಥ್ ನಿರ್ಮಿಸಲು ಹೊರಟ್ಟಿದ್ದ ಸ್ಮಾರ್ಟ್ ಸಿಟಿ ಯೋಜನೆಗೆ ವಿರೋಧ ವ್ಯಕ್ತವಾಗಿದ್ದು, ಇಂತಹ ಯೋಜನೆಗಳನ್ನು ಕೈಬಿಟ್ಟು ಮರ ಗಿಡ ಕಡಿಯದೇ ಪರಿಸರವನ್ನು ಉಳಿಸಲಿ ಎಂಬುದು ಪರಿಸರ ಹೋರಾಟಗಾರರ ಆಗ್ರಹವಾಗಿದೆ.