ದಾವಣಗೆರೆ: ಕೈಗಾರಿಕಾ ಕಾರಿಡಾರ್ಗೆ ವಿರೋಧ, ಮುಂದಿನ ತಿಂಗಳು ರೈತರೊಂದಿಗೆ ಸಭೆ; ಸಚಿವ
ದಾವಣಗೆರೆ ಆಗಸ್ಟ್, 15: ದಾವಣಗೆರೆ ನಗರದಲ್ಲಿ ಭೂಮಿ ಕಳೆದುಕೊಳ್ಳುವ ಭಯದಲ್ಲಿ ರೈತರು ಕೈಗಾರಿಕೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೈಗಾರಿಕಾ ಕಾರಿಡಾರ್ ಮಾಡುವುದು ಸೂಕ್ತ ಎಂಬುದು ನನ್ನ ಭಾವನೆ. ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕಾದರೆ ಹಲವಾರು ಕೈಗಾರಿಕೆಗಳು ಬಂದರೆ ಒಳ್ಳೆಯದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳುತ್ತಿದ್ದಾರೆ.
ಮೆಳ್ಳಿಕಟ್ಟೆ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದಕ್ಕೆ ವಿರೋಧ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ರೈತರ ಜೊತೆ ಈ ಬಗ್ಗೆ ಮುಂದಿನ ತಿಂಗಳು ಸಭೆ ನಡೆಸಲಾಗುವುದು. ನೀರಾವರಿ ಪ್ರದೇಶ ಸ್ವಾಧೀನ ಪಡಿಸಿಕೊಳ್ಳುವ ಚಿಂತನೆ ಇಲ್ಲ. ಸೂಕ್ತ ಸ್ಥಳದ ಬಗ್ಗೆಯೂ ಸಮಾಲೋಚನೆ ನಡೆಸಲಾಗುವುದು ಎಂದು ಸಚಿವ ಬೈರತಿ ಬಸವರಾಜ ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಮಾತನಾಡಿದ ಸಚಿವ ಬೈರತಿ ಬಸವರಾಜ, "ಕೈಗಾರಿಕಾ ಕಾರಿಡಾರ್ಗಾಗಿ ರೈತರಿಂದ ಬಲವಂತವಾಗಿ ಭೂಮಿ ವಶಪಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಕುರಿತಂತೆ ಕೇಂದ್ರದ ಸಂಬಂಧಪಟ್ಟ ಇಲಾಖೆಗೆ ವರದಿ ಕಳುಹಿಸಲಾಗಿದೆ. ಅಲ್ಲಿಂದ ಬರುವ ಉತ್ತರಕ್ಕೆ ಕಾಯುತ್ತಿದ್ದೇವೆ," ಎಂದು ತಿಳಿಸಿದರು.
ಮಳೆಯಿಂದ ಬೆಳೆ ಹಾಗೂ ಮನೆ ಹಾನಿಗೀಡಾದವರಿಗೆ ಪರಿಹಾರ ನೀಡುವ ವಿಚಾರದಲ್ಲಿ ಜಿಲ್ಲಾಡಳಿತ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತದೆ. 4,200ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಹಾನಿ ಆಗಿದ್ದು, ಪರಿಹಾರ ನೀಡುವ ಕೆಲಸ ಪ್ರಗತಿಯಲ್ಲಿದೆ. ಸೂಕ್ತ ದಾಖಲಾತಿಗಳಿದ್ದರೆ ಜಿಲ್ಲಾಧಿಕಾರಿ ಹಾಗೂ ಸಿಇಒ ಅವರ ಗಮನಕ್ಕೆ ತನ್ನಿ. ಪರಿಹಾರ ದೊರಕಿಸಿಕೊಡಲು ಅವರು ಕ್ರಮ ಕೈಗೊಳ್ಳುತ್ತಾರೆ. ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಹಾನಿಯಾಗಿರುವ ಬಗ್ಗೆ ಸರ್ವೇ ನಡೆಸಲಾಗುತ್ತಿದೆ. ಸಂತ್ರಸ್ತರ ಮನೆ ಬಾಗಿಲಿಗೆ ಪರಿಹಾರ ದೊರಕಿಸಿಕೊಡಲು ಕ್ರಮ ವಹಿಸಲಾಗುವುದು ಎಂದರು.
ಅತೀವೃಷ್ಠಿಯಿಂದ ಆದ ನಷ್ಟ?
ಪ್ರಸಕ್ತ ಪೂರ್ವ ವರ್ಷದಲ್ಲಿ ಅತಿವೃಷ್ಠಿಯಿಂದಾಗಿ ಇಬ್ಬರು ಮೃತಪಟ್ಟಿದ್ದರೆ, 36 ಜಾನುವಾರುಗಳಿಗೆ ಜೀವ ಹಾನಿಯಾಗಿದೆ. ಇದಕ್ಕೆ ಮಾರ್ಗಸೂಚಿ ಅನ್ವಯ ಪರಿಹಾರ ನೀಡಲಾಗಿದೆ. 4,813 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು, ಒಟ್ಟು 11,032 ರೈತರಿಗೆ 6.11 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಮುಂಗಾರು ಹಂಗಾಮಿನಲ್ಲಿ 3 ಜಾನುವಾರುಗಳು ಸಾವನ್ನಪ್ಪಿವೆ. 101 ಮನೆಗಳು ಸಂಪೂರ್ಣ ಹಾನಿ, 279 ಮನೆಗಳು ಭಾಗಶಃ ಹಾಗೂ 384 ಮನೆಗಳು ಸ್ವಲ್ಪ ಮಟ್ಟಿಗೆ ಕುಸಿದಿದ್ದು, ಒಟ್ಟು 764 ಮನೆಗಳಿಗೆ ಹಾನಿಯಾಗಿದೆ. ಸಂಪೂರ್ಣ ಮನೆ ಹಾಳಾದವರಿಗೆ 5 ಲಕ್ಷ ರೂಪಾಯಿ, ಭಾಗಶಃ ಹಾನಿಯಾಗಿದ್ದರೆ 3 ಲಕ್ಷ ರೂಪಾಯಿ, ಸ್ವಲ್ಪ ಮಟ್ಟಿಗೆ ಹಾಳಾಗಿದ್ದರೆ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಕಾಮಗಾರಿಗಳಿಗೆ ಮಂಜೂರಾದ ಹಣ?
ದಾವಣಗೆರೆ ಮಹಾನಗರ ಪಾಲಿಕೆಗೆ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ 125 ಕೋಟಿ ರೂಪಾಯಿ ಮಂಜೂರಾಗಿದೆ. ಕಾಮಗಾರಿಗಳಿಗೆ ನಿಗದಿಪಡಿಸಿದ 80 ಕೋಟಿ ರೂಪಾಯಿಗಳಲ್ಲಿ 60 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. ಶೇಕಡಾ 50ರಷ್ಟು ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ. ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯ ಜಿ ಪ್ಲಸ್ 1 ಮಾದರಿಯ 381 ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು, ಸದ್ಯದಲ್ಲಿಯೇ ಇದನ್ನು ಹಸ್ತಾಂತರಿಸಲು ಸಿದ್ಧತೆ ನಡೆಸಲಾಗಿದೆ ಎಂದರು.
ನಿವೇಶನಗಳಿಗೆ ಖರೀದಿಸಿದ ಒಟ್ಟು ಜಮೀನು?
ಜಿಲ್ಲೆಗೆ 2021-22ನೇ ಸಾಲಿನಲ್ಲಿ ಸರ್ಕಾರದಿಂದ ಬಸವ ವಸತಿ ಯೋಜನೆಯಡಿ 6,158 ಮನೆಗಳು, ಅಂಬೇಡ್ಕರ್ ವಸತಿ ಯೋಜನೆಯಡಿ 1,915, ದೇವರಾಜ್ ಅರಸು ವಸತಿ ಯೋಜನೆಯಡಿ ವಿಶೇಷ ವರ್ಗದವರಿಗಾಗಿ 2,725 ಮನೆಗಳು ಸೇರಿದಂತೆ ಒಟ್ಟು 10, 798 ಮನೆಗಳನ್ನು ಮಂಜೂರು ಮಾಡಲಾಗಿದೆ. ನಿವೇಶನ ರಹಿತ ಕುಟುಂಬಗಳಿಗೆ ಸೈಟ್ ನೀಡಲು ದಾವಣಗೆರೆ ಮಹಾನಗರ ಪಾಲಿಕೆಗೆ 50 ಎಕರೆ ಆರು ಗುಂಟೆ ಜಮೀನನ್ನು ಖರೀದಿಸಲಾಗಿದೆ. ಹೊನ್ನಾಳಿ ಪುರಸಭೆ ವ್ಯಾಪ್ತಿಯಲ್ಲಿ 29 ಎಕರೆ 17 ಗುಂಟೆ ಸರ್ಕಾರಿ ಜಮೀನನ್ನು ಮೀಸಲಿಡಲಾಗಿದೆ. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಮಾಸಿಕ 2 ಸಾವಿರ ರೂಪಾಯಿ ಸಂಕಷ್ಟ ಭತ್ಯೆಯನ್ನು ನೀಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ತಾಲೂಕು ಮಟ್ಟದಲ್ಲಿ ಕೋವಿಡ್ ನಿರ್ವಹಣೆಗೆ ಕ್ರಮ
ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಸೋಂಕು ನಿರ್ವಹಣೆಗಾಗಿ 20 ಹಾಸಿಗೆಗಳ ತುರ್ತು ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗಿದೆ. ಜಗಳೂರು, ಚನ್ನಗಿರಿ, ಹರಿಹರ, ಹೊನ್ನಾಳಿಯಲ್ಲಿ ತಲಾ 25 ಹಾಸಿಗೆಗಳ ತುರ್ತು ನಿಗಾ ಘಟಕ ಪ್ರಾರಂಭಿಸಲಾಗಿದೆ. 25 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನಿನ್ನೆ ನನ್ನ ತಂದೆ ನಿಧನರಾದರು. ಆಗ ನನಗೆ ದಾವಣಗೆರೆ ಬರುವುದಕ್ಕೆ ಆಗುತ್ತದೆಯೋ ಇಲ್ಲವೋ ಎಂಬ ಅಳುಕು ಇತ್ತು. ಇದರಿಂದ ಮಾನಸಿಕವಾಗಿ ತೀವ್ರ ನೊಂದಿದ್ದೆ. ಕೊನೆಗೂ ತಂದೆಯ ಅಂತಿಮ ವಿಧಿವಿಧಾನಗಳನ್ನು ಮುಗಿಸಿ ದಾವಣಗೆರೆಗೆ ಬಂದಿದ್ದೇನೆ. ಜಿಲ್ಲೆಯ ಜನರ ಜೊತೆಗಿನ ಅವಿನಾವಭಾವ ಸಂಬಂಧ ಇದ್ದ ಕಾರಣಕ್ಕೆ ಇಲ್ಲಿಗೆ ಬರಲು ಸಾಧ್ಯ ಆಯ್ತು. ಇದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾ ಸಚಿವ ಬೈರತಿ ಬಸವರಾಜ್ ಭಾವುಕರಾದರು.
ಜಿಲ್ಲಾ ಉಸ್ತುವಾರಿ ಸಚಿವನಾಗಿ ಮೂರು ಬಾರಿ ಧ್ವಜಾರೋಹಣ ನೆರವೇರಿಸಲು ಅವಕಾಶ ಸಿಕ್ಕಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸುತ್ತಿದ್ದೇವೆ. ಜಿಲ್ಲೆಯ ಸೇವಕನಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಶ್ರಮಿಸುತ್ತೇನೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿಸಿದ್ದು ಖುಷಿ ತಂದಿದೆ. ಕಳೆದ ಎರಡು ವರ್ಷ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿರಲಿಲ್ಲ. ಇಂದು ಮಕ್ಕಳು ನಡೆಸಿಕೊಟ್ಟ ಕಾರ್ಯಕ್ರಮ ಸಂತಸ ತಂದಿದೆ ಎಂದು ಹೇಳಿದರು.