ದಂಡ ಹಾಕಿದ ದಾವಣಗೆರೆ ಪೊಲೀಸರು: ರಸ್ತೆಯಲ್ಲಿ ಪ್ರತಿಭಟಿಸಿದ ವೃದ್ಧ
ದಾವಣಗೆರೆ, ಮೇ 3: ಕೊರೊನಾ ಸೋಂಕು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಜನತಾ ಲಾಕ್ಡೌನ್ ಜಾರಿಗೊಳಿಸಿದ್ದು, ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಿದೆ. ಅನಾವಶ್ಯಕವಾಗಿ ತಿರುಗಾಡುವುದಕ್ಕೆ ನಿರ್ಬಂಧಿಸಿದೆ.
Recommended Video
ಆದರೆ, ಔಷಧಿ ತರಲು ಹೋದಾಗ ದಂಡ ಹಾಕಿದ್ದಕ್ಕೆ ರಸ್ತೆಯಲ್ಲೇ ಕುಳಿತು ವೃದ್ಧರೊಬ್ಬರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ದಾವಣಗೆರೆ ನಗರದ ರೈಲ್ವೆ ನಿಲ್ದಾಣದ ಸಮೀಪದ ಪಿ.ಬಿ ರಸ್ತೆಯಲ್ಲಿ ನಡೆದಿದೆ.
ಕಾಯಿಪೇಟೆಯ ಬಸವರಾಜ್ ಎಂಬ ವೃದ್ಧ ಪೊಲೀಸರ ವರ್ತನೆ ಖಂಡಿಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾನೆ. ತನ್ನ ಪುತ್ರನೊಂದಿಗೆ ಬಸವರಾಜ್ ಆಸ್ಪತ್ರೆಯಿಂದ ಬಂದು ಮೆಡಿಕಲ್ ಅಂಗಡಿಗೆ ಔಷಧಿ ತರಲು ತೆರಳುತ್ತಿದ್ದರು. ಈ ವೇಳೆ ರೈಲ್ವೆ ಸ್ಟೇಷನ್ ಮುಂಭಾಗದಲ್ಲಿ ಪೊಲೀಸರು ಹಿಡಿದು ಬೈಕ್ಗೆ 500 ರೂಪಾಯಿ ದಂಡ ಹಾಕಿದ್ದಾರೆ.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವೃದ್ಧ, ನಮಗ್ಯಾಕೆ ದಂಡ ಹಾಕುತ್ತಿದ್ದೀರಿ, ನಾವು ಔಷಧಿ ತರಲು ಹೋಗುತ್ತಿದ್ದೇವೆ ಎಂದು ರಶೀದಿ ತೋರಿಸಿದರೂ ಕೇಳದ ಪೊಲೀಸರು 500 ರೂಪಾಯಿ ದಂಡ ವಿಧಿಸಿದ್ದಾರೆ.
ಇದರಿಂದ ಕೆರಳಿದ ವೃದ್ಧ ನಡು ರಸ್ತೆಯಲ್ಲಿ ಕುಳಿತು ಕೆಲಕಾಲ ಪ್ರತಿಭಟನೆ ನಡೆಸಿದರು. ಅಲ್ಲದೇ, ಆತನ ಮಗ ಕೂಡ ಪೊಲೀಸರೊಂದಿಗೆ ನಮಗ್ಯಾಕೆ ದಂಡ ಹಾಕಿದ್ದೀರಿ ಎಂದು ವಾಗ್ವಾದ ನಡೆಸಿದ್ದು, ಪೊಲೀಸರಿಗೆ ತಮ್ಮನ್ನು ಒಂದು ಬಾರಿ ಬಿಟ್ಟು ಬಿಡುವಂತೆ ಮನವಿ ಮಾಡಿಕೊಂಡರು. ಆದರೆ, ಅವರ ಮಾತನ್ನು ಕೇಳದ ಪೊಲೀಸರು, ಇಲ್ಲವೇ ಇಲ್ಲ ಏನೇ ಆದರೂ ದಂಡ ಕಟ್ಟಿಯೇ ಹೋಗುವಂತೆ ಎಚ್ಚರಿಕೆ ನೀಡಿದ್ದಾರೆ.
ಬಳಿಕ ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಅರವಿಂದ್ ಕೂಡ ದಂಡ ಕಟ್ಟುವಂತೆ ವಾರ್ನಿಂಗ್ ಮಾಡಿದ್ದು, ವೃದ್ಧ ತಮ್ಮನ್ನು ಇದೊಂದು ಬಾರಿ ಬಿಡುವಂತೆ ಮನವಿ ಮಾಡಿದರೂ ಕೇಳಿಲಿಲ್ಲ. ಆದರೆ, ನಾನು ನಿಜವಾಗಿಯೂ ಔಷಧಿ ತರಲು ಹೋಗುತ್ತಿದ್ದೇವೆ. ಬೇಕಾದರೆ ತಾನು ರಶೀದಿ ನೋಡಿ ಹೇಳಿದರು. ಒಟ್ಟಿನಲ್ಲಿ ವೃದ್ಧ ಎಷ್ಟೇ ಬೇಡಿಕೊಂಡರೂ ಬಿಡದೇ ಪೊಲೀಸರು ದಂಡ ಕಟ್ಟಿಸಿಕೊಂಡೇ ಬಿಟ್ಟರು.