ಕೋವಿಡ್ ಕೇರ್ ಸೆಂಟರ್ಗಳಲ್ಲಿ ಲೋಪದೋಷವಾದರೆ ಅಧಿಕಾರಿಗಳೇ ಹೊಣೆ
ದಾವಣಗೆರೆ, ಜೂನ್ 1: ಕೋವಿಡ್ ಕೇರ್ ಸೆಂಟರ್ಗಳಲ್ಲಿನ ಸೋಂಕಿತರಿಗೆ ನೀಡಲಾಗುವ ಊಟ, ಉಪಹಾರ, ವೈದ್ಯಕೀಯ ನೆರವು, ಸ್ವಚ್ಛತೆ ಸೇರಿದಂತೆ ಎಲ್ಲ ಸೌಲಭ್ಯಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಇದರಲ್ಲಿ ಯಾವುದೇ ಲೋಪದೋಷ ಆಗಬಾರದು ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾವಣಗೆರೆ ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಲಾದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
"ವಿಧಿಯೇ ನಿನ್ನೆಷ್ಟು ಕ್ರೂರಿ'': ಸೋಂಕಿತನ ಅಂತ್ಯಸಂಸ್ಕಾರ ಮಾಡಿ ಭಾವುಕರಾದ ರೇಣುಕಾಚಾರ್ಯ
ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಬೇಕು ಎಂದು ಕಳೆದ ಬಾರಿ ಕೈಗೊಂಡ ಸಭೆಯಲ್ಲಿ ಸೂಚನೆ ನೀಡಲಾಗಿತ್ತು. ಆದರೆ ಇನ್ನೂ 2068 ಜನ ಹೋಂ ಐಸೋಲೇಷನ್ನಲ್ಲಿ ಇದ್ದಾರೆ ಎಂದು ಹೇಳುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ""ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಸದ್ಯ 1200 ಜನರನ್ನು ದಾಖಲಿಸಿ ಅಗತ್ಯ ಚಿಕಿತ್ಸೆ ಹಾಗೂ ಗುಣಮಟ್ಟದ ಊಟ ನೀಡಲಾಗುತ್ತಿದೆ. ಅಲ್ಲದೆ ಇಲ್ಲಿಗೆ ದೈಹಿಕ ಶಿಕ್ಷಣ ಹಾಗೂ ಯೋಗ ಶಿಕ್ಷಣ ನೀಡುವುದರ ಜೊತೆಗೆ ಸೌಲಭ್ಯ ಇರುವ ಕಡೆಗಳಲ್ಲಿ ಟಿ.ವಿ ಸಂಪರ್ಕ ಕಲ್ಪಿಸಿ, ಮನರಂಜನೆಗೂ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸೋಂಕು ದೃಢಪಟ್ಟವರಿಗೆ ಇನ್ನು ಮುಂದೆ ಹೋಂ ಐಸೋಲೇಷನ್ಗೆ ಅವಕಾಶ ನೀಡದೆ, ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ್ ಮಾತನಾಡಿ, ಕಳೆದ ವರ್ಷದಿಂದ ಇದುವರೆಗೂ 5.69 ಲಕ್ಷ ಪರೀಕ್ಷೆ ನಡೆಸಿದ್ದು, 42,394 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 37,724 ಮಂದಿ ಗುಣಮುಖರಾಗಿದ್ದು, 356 ಜನ ಮೃತಪಟ್ಟಿದ್ದಾರೆ.
ದಾವಣಗೆರೆ- 7812, ಹರಿಹರ- 2051, ಜಗಳೂರು- 901, ಚನ್ನಗಿರಿ- 2188, ಹೊನ್ನಾಳಿ- 2120 ಹಾಗೂ ಹೊರ ಜಿಲ್ಲೆಯ- 534 ಸಕ್ರಿಯ ಪ್ರಕರಣಗಳಿವೆ. ಒಟ್ಟು 2068 ಜನ ಹೋಂ ಐಸೋಲೇಷನ್ನಲ್ಲಿದ್ದು, 2246 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇ ತಿಂಗಳೊಂದರಲ್ಲೇ 16304 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಮಾಹಿತಿ ನೀಡಿದರು.
Recommended Video
ಕೊರೊನಾ ಎರಡನೆ ಅಲೆಯಲ್ಲಿ ಅಂದರೆ ಏಪ್ರಿಲ್ನಿಂದ ಈವರೆಗೆ 92 ಮರಣ ಸಂಭವಿಸಿದೆ. ಜಿಲ್ಲೆಯಲ್ಲಿ ಒಟ್ಟು 83 ಆಂಬ್ಯುಲೆನ್ಸ್ಗಳು ಕಾರ್ಯ ನಿರ್ವಹಿಸುತ್ತಿದ್ದು, ಹೊಸದಾಗಿ ಜಿಲ್ಲಾಡಳಿತದಿಂದ ದಾವಣಗೆರೆಗೆ 2, ಎಲ್ಲಾ ತಾಲ್ಲೂಕುಗಳಿಗೆ ತಲಾ ಒಂದರಂತೆ ಒಟ್ಟು 7 ಆಂಬ್ಯುಲೆನ್ಸ್ ಒದಗಿಸಲಾಗಿದೆ, ಮೃತದೇಹಗಳ ಸಾಗಣೆಗೆ ಜಿಲ್ಲಾಡಳಿತದಿಂದ 2 ಹಾಗೂ ಮಹಾನಗರ ಪಾಲಿಕೆಯಿಂದ 1 ಮುಕ್ತಿ ವಾಹನ ಕಾರ್ಯ ನಿರ್ವಹಿಸುತ್ತಿದೆ ಎಂದರು.