ತೀವ್ರ ಸ್ವರೂಪ ಪಡೆಯುತ್ತಾ ವಾಲ್ಮೀಕಿ ಸಮುದಾಯದ ಹೋರಾಟ?
ದಾವಣಗೆರೆ, ಜನವರಿ 09; ಮೀಸಲಾತಿ ವಿಚಾರದಲ್ಲಿನ ಹೋರಾಟ ರಾಜ್ಯದಲ್ಲಿ ದಿನ ಕಳೆದಂತೆ ಜೋರಾಗುತ್ತಿದೆ. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈಗ ವಾಲ್ಮೀಕಿ ಮಠದ ಪ್ರಸನ್ನನಾಂದಪುರಿ ಸ್ವಾಮೀಜಿ ಸಹ ಸರ್ಕಾರಕ್ಕೆ ಗಡುವು ಕೊಟ್ಟಿದ್ದಾರೆ.
ಈಗ ಮತ್ತೆ ವಾಲ್ಮೀಕಿ ಸಮುದಾಯದ ಶ್ರೀಗಳು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಮಾತ್ರವಲ್ಲ ಬೇಡಿಕೆ ಈಡೇರಿಸಲು ಗಡುವು ಕೊಟ್ಟಿದ್ದಾರೆ. ಈ ಬಾರಿ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಫೆಬ್ರವರಿ ತಿಂಗಳಲ್ಲಿ ವಾಲ್ಮೀಕಿ ಜಾತ್ರೆ ನಡೆಯಲಿದ್ದು ಈ ಜಾತ್ರೆಯಲ್ಲಿ ಬೇಡಿಕೆ ಈಡೇರಿಕೆಗೆ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂಬ ಮಾತು ಹೇಳಿರುವುದು ಈಗ ಬಿಜೆಪಿ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಸಚಿವ ಬಿ. ಶ್ರೀರಾಮುಲು, ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಸೇರಿದಂತೆ ಬಿಜೆಪಿಯಿಂದ ಆರಿಸಿ ಬಂದಿರುವ ಶಾಸಕರೂ ಸಹ ಶ್ರೀಗಳ ಹೋರಾಟಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ.
ಪಂಚಮಸಾಲಿ 2ಎ ಮೀಸಲಾತಿ: ಬೆಳಗಾವಿಯಲ್ಲಿ ಸಿಎಂ ಹೇಳಿದ್ದೇನು?
"ವಾಲ್ಮೀಕಿ ಸಮುದಾಯಕ್ಕೆ ಶೇಕಡಾ 7.5 ರಷ್ಟು ಮೀಸಲಾತಿ ನೀಡದಿದ್ದರೆ ರಾಜ್ಯ ಸರ್ಕಾರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಪೀಠದ ಆವರಣದಲ್ಲಿ ನಡೆದಿದ್ದ ವಾಲ್ಮೀಕಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಅಂದಿನ ಸಿಎಂ ಬಿ. ಎಸ್. ಯಡಿಯೂರಪ್ಪ ಭರವಸೆ ಕೊಟ್ಟಿದ್ದರು. ವಾಲ್ಮೀಕಿ ಸಮುದಾಯಕ್ಕೆ ಶೇಕಡಾ 7.5 ರಷ್ಟು ಮೀಸಲಾತಿ ನೀಡುವುದಾಗಿಯೂ ಹಾಗೂ ಸಮಾಜಕ್ಕೆ ನ್ಯಾಯ ಕೊಡಿಸುವುದಾಗಿ ಘೋಷಿಸಿದ್ದರು. ಆದರೆ ಇದುವರೆಗೆ ಬೇಡಿಕೆ ಈಡೇರಿಲ್ಲ" ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
2ಎ ಮೀಸಲಾತಿ; ಹೋರಾಟದ ಬಗ್ಗೆ ಬೆಂಗಳೂರಲ್ಲಿ ಜಂಟಿ ಅಧಿವೇಶನ
"ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಬಂದ ಮೇಲೆ ಮೀಸಲಾತಿ ಜಾರಿ ಮಾಡುತ್ತೇವೆ ಅಂತ ಯಡಿಯೂರಪ್ಪ ಹೇಳಿದ್ದರು. ಆದರೆ ಅವರು ವಾಲ್ಮೀಕಿ ಸಮುದಾಯದ ಜನರ ಕಿವಿ ಮೇಲೆ ಹೂ ಇಡುವಂತ ಕೆಲಸ ಮಾಡಿ ಮನೇಲಿ ಕುಳಿತಿದ್ದಾರೆ. ನಾಲ್ಕನೇ ಐತಿಹಾಸಿಕ ಜಾತ್ರೆಯಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳುತ್ತೇವೆ. ಫೆಬ್ರವರಿ 8 ಮತ್ತು 9ರಂದು ವಾಲ್ಮೀಕಿ ಮಠದಲ್ಲಿ ವಾಲ್ಮೀಕಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಸಮಾವೇಶದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಖಚಿತ. ಇದರಲ್ಲಿ ಅನುಮಾನವೇ ಬೇಡ. ಯಾವ ರೀತಿಯಲ್ಲಿ ಹೋರಾಟ ಮುಂದುವರಿಸಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ" ಎಂದು ಶ್ರೀಗಳು ಎಚ್ಚರಿಕೆ ನೀಡಿದರು.
ಸರ್ಕಾರದ ವಿರುದ್ಧ ಆಕ್ರೋಶಗೊಂಡು ವಾಲ್ಮೀಕಿ ಶ್ರೀಗಳು ಕಣ್ಣೀರು ಹಾಕಿದ್ದು ಯಾಕೆ?
ನಾಲ್ಕನೇ ವಾಲ್ಮೀಕಿ ಜಾತ್ರೆಯ ವಿಚಾರವಾಗಿ ಪೂರ್ವಭಾವಿ ಸಭೆ ಕರೆದು ಚರ್ಚಿಸಲಾಗಿದೆ. ಕಾರ್ಯಕ್ರಮ ಯಾವ ರೀತಿಯಲ್ಲಿ ಇರಬೇಕು. ಮೀಸಲಾತಿಯನ್ನು ಪಡೆಯಲು ಸಮಾಜದ ಶಾಸಕರು, ಸಚಿವರು, ಮಾಜಿ ಶಾಸಕರು, ಮಾಜಿ ಸಚಿವರು, ಸಮಾಜದ ಮುಖಂಡರ ಜೊತೆ ಸುದೀರ್ಘವಾಗಿ ಚರ್ಚಿಸಿ, ಹೋರಾಟದ ರೂಪುರೇಷೆ ತಯಾರಿಸಲು ನಿರ್ಧರಿಸಲಾಗುತ್ತದೆ.
"ರಾಜ್ಯ ಸರ್ಕಾರಕ್ಕೆ ನಮ್ಮ ಕೊನೆಯ ಗಡುವು ನೀಡುತ್ತಿದ್ದೇವೆ. ಫೆಬ್ರವರಿ 9ರೊಳಗೆ ವಾಲ್ಮೀಕಿ ಜಾತ್ರೆಯಲ್ಲಿ ನಾಯಕ ಜನಾಂಗಕ್ಕೆ 7.5 ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿ. ಘೋಷಣೆ ಮಾಡದಿದ್ದರೆ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನ ಮಾಡಿರುವುದಾಗಿ" ಸ್ವಾಮೀಜಿಗಳು ತಿಳಿಸಿದರು.
"ಈ ಬಾರಿಯ ವಾಲ್ಮೀಕಿ ಜಾತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರಿಗೆ ಆಹ್ವಾನ ನೀಡಲಾಗುವುದು. ಅವರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುವ ವಿಶ್ವಾಸ ಇದೆ. ನಮ್ಮ ಸಮುದಾಯದ ವಿಚಾರ, ಬೇಡಿಕೆಯನ್ನು ಈಡೇರಿಸುವಲ್ಲಿ ಸರ್ಕಾರದಿಂದ ಪದೇ ಪದೇ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ" ಎಂದು ಶ್ರೀಗಳು ದೂರಿದರು.
ಕಳೆದ ಬಾರಿಯ ಜಾತ್ರೆಯ ವೇಳೆ ಬಿ. ಎಸ್. ಯಡಿಯೂರಪ್ಪರ ಎದುರು ನಾನು ಸತ್ತರೂ ಪರವಾಗಿಲ್ಲ, ನಮ್ಮ ಸಮುದಾಯಕ್ಕೆ ಶೇಕಡಾ 7.5 ರಷ್ಟು ಮೀಸಲಾತಿ ನೀಡಬೇಕು. ಇದು ನನ್ನ ಬಯಕೆ ಮತ್ತು ಬೇಡಿಕೆ ಎಂಬ ಮಾತುಗಳನ್ನು ಶ್ರೀಗಳು ಆಡಿದ್ದರು. ಬಿ. ಎಸ್. ಯಡಿಯೂರಪ್ಪರ ಭರವಸೆ ಹಾಗೂ ಮನವೊಲಿಕೆ ಬಳಿಕ ಸುಮ್ಮನಾಗಿದ್ದರು. ಆದರೆ ಈಗ ಸಮಾವೇಶದಲ್ಲಿ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿರುವುದು ಭಾರೀ ಕುತೂಹಲ ಕೆರಳಿಸಿದೆ.
Recommended Video