"ಜೆಡಿಎಸ್ ನಲ್ಲಿ ಪ್ರಾಮಾಣಿಕರಿಗೆ ಅವಕಾಶವಿಲ್ಲ": ರಮೇಶ್ ಬಾಬು
ದಾವಣಗೆರೆ, ಮಾರ್ಚ್ 7: ಕಳೆದ 40 ವರ್ಷಗಳಿಂದ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದ ಮಾಜಿ ಎಂಎಲ್ಸ್ ರಮೇಶ ಬಾಬು ಇಂದು ದಾವಣಗೆರೆಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ ವಿಚಾರವನ್ನು ಖಚಿತ ಪಡಿಸಿ ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ದಾವಣಗೆರೆಯಲ್ಲಿ ರಾಜೀನಾಮೆ ನಿರ್ಧಾರ ಪ್ರಕಟಿಸಿದ ರಮೇಶ ಬಾಬು, "ನಿನ್ನೆಯೇ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ಇಷ್ಟರಲ್ಲಿ ಬೇರೊಂದು ಪಕ್ಷದ ಜೊತೆ ಗುರ್ತಿಸಿಕೊಳ್ಳುವೆ. ಅಲ್ಲದೆ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಆಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ" ಎಂದರು.
ಜೆಡಿಎಸ್ನಲ್ಲಿ ಈಗ ಪಕ್ಷ ಬಿಡುವ ಪರ್ವ: ರಮೇಶ್ ಬಾಬು ರಾಜೀನಾಮೆ
"ಜೆಡಿಎಸ್ ಪಕ್ಷದಲ್ಲಿ ಪ್ರಾಮಾಣಿಕರಿಗೆ ಅವಕಾಶವಿಲ್ಲ. ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಪ್ರಾದೇಶಿಕ ಪಕ್ಷದ ಅಗತ್ಯವಿದೆ ಎಂಬ ಕಾರ್ಯಕರ್ತರ ನಂಬಿಕೆಗೆ ಇಂದು ಅನ್ಯಾಯವಾಗುತ್ತಿದೆ. ಆದ್ದರಿಂದ ಜೆಡಿಎಸ್ ಪಕ್ಷದ ನಿಷ್ಠರು ಪಕ್ಷ ಬಿಡುತ್ತಿದ್ದಾರೆ. ಜೆಡಿಎಸ್ ಪಕ್ಷ ಪ್ರಾದೇಶಿಕ ಪಕ್ಷದ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಬೇರೆ ಪಕ್ಷದಿಂದ ಅವಕಾಶ ಬಂದರೆ ಪರಿಗಣಿಸುತ್ತೇನೆ. ನನ್ನ ಮುಂದಿನ ಹಾದಿ ಮುಕ್ತವಾಗಿದೆ. ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ" ಎಂದು ಜೆಡಿಎಸ್ ಪಕ್ಷದ ಮೇಲಿನ ತಮ್ಮ ಅಸಮಾಧಾನ ಹೊರ ಹಾಕಿದರು.