ಡಿಸಿಎಂ ಸ್ಥಾನ, ಆ ಗೊಂದಲ ಬೇಡವೇ ಬೇಡ ಎಂದ ರೇಣುಕಾಚಾರ್ಯ
ದಾವಣಗೆರೆ, ಡಿಸೆಂಬರ್ 16: "ಡಿಸಿಎಂ ಸ್ಥಾನದ ಅವಶ್ಯಕತೆ ಇಲ್ಲ, ಸಿಎಂ ಒಬ್ಬರೇ ಸಾಕು" ಎಂದು ಡಿಸಿಎಂ ಸ್ಥಾನ ನೀಡುವುದರ ಬಗ್ಗೆ ದಾವಣಗೆರೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ದಾವಣಗೆರೆಯ ಶಾಮನೂರು ಕಲ್ಯಾಣ ಮಂಟಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಬಿಜೆಪಿ ಜಾತಿಗೆ ಸೀಮಿತವಾದ ಪಕ್ಷ ಅಲ್ಲ, ಈಗಾಗಲೇ ಮೂರು ಡಿಸಿಎಂ ಸ್ಥಾನಗಳನ್ನು ನೀಡಿದ್ದು ಗೊಂದಲಗಳು ಎದ್ದಿವೆ. ಇದರಿಂದ ಕೇವಲ ಸಿಎಂ ಅಷ್ಟೇ ಸಾಕು" ಎಂದಿದ್ದಾರೆ.
ಸಿಎಂ ಒಬ್ಬರೇ ಸಾಕು, ಡಿಸಿಎಂ ಬೇಡ
"ಸಿಎಂ ಒಬ್ಬರೇ ಸಾಕು, ಯಾವುದೇ ಡಿಸಿಎಂ ಸ್ಥಾನ ಸೃಷ್ಟಿ ಮಾಡುವುದು ಬೇಡ. ಇದರಿಂದ ಕೇವಲ ಗೊಂದಲಗಳು ಸೃಷ್ಟಿಯಾಗುತ್ತವೆ ಎನ್ನುವುದು ನನ್ನ ಅಭಿಪ್ರಾಯ. ಕೇವಲ ಸಿಎಂ ಒಬ್ಬರದ್ದೇ ಆಡಳಿತ ಇದ್ದರೆ ಯಾವುದೇ ಮನಸ್ತಾಪವಾಗುವುದಿಲ್ಲ" ಎಂದು ಹೇಳಿದರು.
"ನಾನೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ"
"ಬಿಜೆಪಿ ಸರ್ಕಾರದಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ಅವಕಾಶ ಕೊಟ್ಟಿದ್ದಾರೆ. ಆದರೆ ದಾವಣಗೆರೆ, ಚಿತ್ರದುರ್ಗಕ್ಕೆ ಅವಕಾಶ ಸಿಕ್ಕಿಲ್ಲ. ನಾನೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ಮೂರು ಬಾರಿ ಶಾಸಕನಾಗಿದ್ದೇನೆ, ಸಮರ್ಥವಾಗಿ ನಿಭಾಯಿಸುವ ಕೆಲಸ ಮಾಡುತ್ತೇನೆ. ಸಚಿವ ಸ್ಥಾನಕ್ಕೆ ಹಾದಿಬೀದಿಯಲ್ಲಿ ಕೇಳುವುದಿಲ್ಲ" ಎಂದರು.. ಅಲ್ಲದೆ ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್ ಗೆ ಬಿಟ್ಟ ವಿಚಾರ, ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಾರೆ, ಇನ್ನು ಮೂರೂವರೆ ವರ್ಷ ಬಿಜೆಪಿ ಅಧಿಕಾರದಲ್ಲಿರುತ್ತದೆ ಎಂದರು.
ಡಿಸೆಂಬರ್ 09ರಂದು ಖರ್ಗೆ ನೀಡಲಿರುವ ಸಿಹಿ ಸುದ್ದಿ ನಂಗೊತ್ತು ಎಂದ ರೇಣುಕಾ
ರಾಹುಲ್ ಗಾಂಧಿ ರಾಜಕೀಯ ಬಚ್ಚಾ
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ತಮ್ಮನ್ನು "ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ" ಎಂದು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, "ರಾಹುಲ್ ಗಾಂಧಿ ರಾಜಕೀಯದಲ್ಲಿ ಇನ್ನೂ ಬಚ್ಚಾ. ಅವರು ಸಾವರ್ಕರ್ ಗೆ ಹೋಲಿಕೆ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್, ನಾಯಕತ್ವ ಇಲ್ಲದೆ ಸತ್ತು ಹೋಗಿದೆ. ಅಂಥವರು ಸಾವರ್ಕರ್ ಬಗ್ಗೆ ಮಾತನಾಡುವುದು ಸರಿಯಲ್ಲ" ಎಂದು ಕಿಡಿಕಾರಿದರು.
ನಾನೇ ರಾಜಾಹುಲಿ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ ಯಡಿಯೂರಪ್ಪ
ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು
ಉಪಚುನಾವಣೆಯಲ್ಲಿ 12 ಕ್ಷೇತ್ರ ಗೆದ್ದಿದ್ದು ಅಮಿತ್ ಶಾ ಹಾಗೂ ಮೋದಿಯ ವರ್ಚಸ್ಸಿನಿಂದ ಎಂದು ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, "ಆ ಪುಣ್ಯಾತ್ಮ ಮೈಸೂರಿನಲ್ಲಿ ಬಿಎಸ್ ವೈ ಎಂದು ಹಾಡಿಹೊಗಳಿದ್ದ. ಯಡಿಯೂರಪ್ಪ ರಾಜ್ಯ ಕಂಡ ಅಪ್ರತಿಮ ಹೋರಾಟಗಾರ, ಅವರು 15 ಕ್ಷೇತ್ರದ ಉಪಚುನಾವಣೆ ಪ್ರಚಾರ ನಡೆಸಿದ್ದಾರೆ. 12 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ ಎಂದಿದ್ದರು. ಆದರೆ ಈಗ ಅಮಿತ್ ಶಾ, ಮೋದಿ ವರ್ಚಸ್ಸು ಎಂದು ಹೇಳಿಕೊಂಡಿದ್ದಾರೆ. ಈ ರೀತಿ ಹೇಳಿಕೆಯಿಂದ ಪಕ್ಷದಲ್ಲಿ ಗೊಂದಲ ಉಂಟು ಮಾಡಬಾರದು" ಎಂದು ಮಾತನಾಡಿದರು.