ದುಗ್ಗಮ್ಮನ ಜಾತ್ರೆಯಲ್ಲಿ ಅರೆ ಬೆತ್ತಲೆ ಹರಕೆ; ತರಾಟೆ ತೆಗೆದುಕೊಂಡ ಡಿಸಿ
ದಾವಣಗೆರೆ, ಮಾರ್ಚ್ 4: ಎರಡು ವರ್ಷಗಳಿಗೊಮ್ಮೆ ನಡೆಯುವ ದಾವಣಗೆರೆಯ ನಗರ ದೇವತೆ ದುಗ್ಗಮ್ಮನ ಜಾತ್ರೆ ಅದ್ಧೂರಿಯಾಗಿ ಸಾಗಿದೆ. ಜಾತ್ರೆಯಲ್ಲಿ, ಭಕ್ತರು ದೇವಿಯ ಕೃಪೆಗೆ ಪಾತ್ರರಾಗಲು ತಮ್ಮ ಹರಕೆಗಳನ್ನೂ ತೀರಿಸುತ್ತಿದ್ದಾರೆ. ಆದರೆ ಹರಕೆ ತೀರಿಸಲು ಮಕ್ಕಳು ಹಾಗೂ ಮಹಿಳೆಯರು ಅರೆ ಬೆತ್ತಲೆಯಾಗಿ ಬೇವಿನ ಸೀರೆ ಉಟ್ಟು ದೇವಸ್ಥಾನ ಪ್ರದಕ್ಷಿಣೆ ಮಾಡುತ್ತಿದ್ದಾಗ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್ ಪಿ ಹನುಮಂತರಾಯ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ.
ದಾವಣಗೆರೆ ನಗರ ದೇವತೆ ದುಗ್ಗಮ್ಮ ದೇವಸ್ಥಾನದ ರಸ್ತೆಯಲ್ಲಿ ಮಕ್ಕಳನ್ನು ಬೆತ್ತಲೆ ಮಾಡಿ ನೀರು ಹಾಕಿ ಬೇವಿನ ಸೀರೆ ಉಡಿಸುತ್ತಿದ್ದ ಪೋಷಕರಿಗೆ ಅವರು ಬುದ್ಧಿ ಹೇಳಿದ್ದಲ್ಲದೇ, ಈ ರೀತಿ ಮೂಢ ನಂಬಿಕೆಯಿಂದ ಮಕ್ಕಳಿಗೆ ಹಿಂಸೆ ನೀಡಬಾರದು ಎಂದು ತಿಳಿಹೇಳಿದರು. ಎಸ್ ಪಿ ಹನುಮಂತರಾಯ ಅವರು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೂ ಕ್ಲಾಸ್ ತೆಗೆದುಕೊಂಡರು.
ದುಗ್ಗಮ್ಮನ ಜಾತ್ರೆಯಲ್ಲಿ ಬಾಡೂಟಕ್ಕೆ ಬೆಣ್ಣೆ ನಗರಿ ರೆಡಿ, ಕೋಣ ಬಲಿ ನಡೆಯದಂತೆ ಕಟ್ಟೆಚ್ಚರ
ಜಾತ್ರೆಯಲ್ಲಿ ದೇವರ ಕೋಣದ ಬಲಿ ತಡೆಯಲು ಡಿಸಿ, ಎಸ್ಪಿ ಸೇರಿದಂತೆ ಅಧಿಕಾರಿಗಳು ದೇವಸ್ಥಾನದ ಎದುರು ಇಡೀ ರಾತ್ರಿ ಜಾಗರಣೆ ಮಾಡಿದ್ದರು. ಸರ್ಕಾರದ ಆದೇಶದಂತೆ ದೇವಿಗೆ ಬಿಟ್ಟ ಕೋಣದ ರಕ್ತವನ್ನು ಸಿರಿಂಜ್ ನಿಂದ ತೆಗೆದು ದೇವಿಗೆ ಅರ್ಪಣೆ ಮಾಡಿದ್ದಲ್ಲದೆ, ಧಾನ್ಯದಲ್ಲಿ ಬೆರೆಸಿ ಇಡೀ ನಗರಕ್ಕೆ ಚರಕ ಚೆಲ್ಲಿದರು. ದುರ್ಗಾಂಬಿಕಾ ದೇವಿ ಜಾತ್ರೆಯಲ್ಲಿ ದೇವಿಗೆ ಕೋಣ ಬಲಿ ಕೊಡುವುದು ಇಲ್ಲಿನ ಸಂಪ್ರದಾಯವಾಗಿದ್ದು, ಈ ಬಾರಿ ಬಲಿಯನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ.
ದೇವಸ್ಥಾನ ಧರ್ಮದರ್ಶಿ ಸಮಿತಿಯ ಸಹಕಾರದೊಂದಿಗೆ ಜಿಲ್ಲಾಡಳಿತ ಕೋಣ ಬಲಿಯನ್ನು ತಡೆಯಿತು. ದೇವಸ್ಥಾನದ ಸುತ್ತಲು ಒಂದು ನೂರು ಮೀಟರ್ ಪ್ರದೇಶದಲ್ಲಿ ಯಾವುದೇ ಪ್ರಾಣಿ ಬಲಿ ನಡೆಯದಂತೆ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿತ್ತು. ದೇವಸ್ಥಾನದ ಸುತ್ತಮುತ್ತ ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆ ವಹಿಸಿದ್ದರು. ಅಲ್ಲದೆ ರಾತ್ರಿಯಿಡಿ ಭಕ್ತರು ದೀಡ್ ನಮಸ್ಕಾರ, ಉರುಳುಸೇವೆ, ಮೇವಿನ ಸೀರೆ ಉಟ್ಟು ನಗರ ದೇವತೆಗೆ ಹರಕೆ ತೀರಿಸಿದರು.