ಮುಂದಿನ ಸಿಎಂ ಅಭ್ಯರ್ಥಿ ಪ್ರಶ್ನೆ; ಕೋಪಗೊಂಡ ಯಡಿಯೂರಪ್ಪ?
ದಾವಣಗೆರೆ, ಅಕ್ಟೋಬರ್ 19: ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪ್ರಚಾರದ ಭರಾಟೆ ಜೋರಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡುವೆ ಮಾತಿನ ಸಮರ ಜೋರಾಗಿದೆ.
ಈ ನಡುವೆ ಬಿಜೆಪಿಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. 2023ರ ವಿಧಾನಸಭೆ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ದಾವಣಗೆರೆಯಲ್ಲಿ ಘೋಷಣೆ ಮಾಡಿರುವುದು ಹಳೆಯ ವಿಚಾರ. ಆದರೀಗ ಈ ಹೇಳಿಕೆಯನ್ನು ನೆನಪು ಮಾಡಿಕೊಳ್ಳಲು ಕಾರಣವಿದೆ.
ಪ್ರಚಾರಕ್ಕಿಳಿಯದ ಯಡಿಯೂರಪ್ಪ: ಅಭ್ಯರ್ಥಿಗಳಲ್ಲಿ ಆತಂಕ
ರಾಜ್ಯದಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ನಡೆಯುತ್ತಲೇ ಇರುತ್ತದೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್ನಲ್ಲಿ ಈ ಲೆಕ್ಕಾಚಾರ ಶುರುವಾಗಿತ್ತು. ಆದರೀಗ ಈ ಲೆಕ್ಕಾಚಾರ ಬಿಜೆಪಿಯಲ್ಲೂ ಆರಂಭವಾಗಿದೆ. ದಾವಣಗೆರೆಗೆ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ್ದ ವೇಳೆ ಕಂದಾಯ ಸಚಿವ ಆರ್. ಅಶೋಕ ಮುಂದೆಯೂ ಬೊಮ್ಮಾಯಿ ಸಿಎಂ ಆದರೆ ಅಭ್ಯಂತರ ಏನಿಲ್ಲ ಎಂದಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಈಗ ಈ ವಿಚಾರ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಬೇಸರ ತರಿಸಿದೆಯಾ? ಎಂಬ ಅನುಮಾನಕ್ಕೆ ಹುಟ್ಟಿಕೊಂಡಿದೆ.
ಶಾಸಕ ತಿಪ್ಪಾರೆಡ್ಡಿಗೆ ನಮ್ಮಿಂದ ಅನ್ಯಾಯವಾಗಿದೆ; ಮಾಜಿ ಸಿಎಂ ಬಿಎಸ್ವೈ
ಮುಂದಿನ ಸಿಎಂ ಬಸವರಾಜ ಬೊಮ್ಮಾಯಿ ಎಂಬ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಯಡಿಯೂರಪ್ಪ, "ಇಂಥಹ ಹಗುರವಾದ ಪ್ರಶ್ನೆಗೆ ನಾನು ಉತ್ತರ ಕೊಡಲ್ಲ" ಎಂದಿದ್ದಾರೆ.
ಕೊನೆಗೂ ಉಪ ಚುನಾವಣೆ ಅಖಾಡಕ್ಕಿಳಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ!
ಈ ಹೇಳಿಕೆಯಿಂದಾಗಿ ಯಡಿಯೂರಪ್ಪಗೆ ಬೊಮ್ಮಾಯಿ ಮೇಲೆ ಬೇಸರವಿರುವ ವಿಚಾರ ಸ್ಪಷ್ಟವಾದಂತೆ ಕಾಣುತ್ತಿದೆ. ಬಸವರಾಜ ಬೊಮ್ಮಾಯಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದರೆ ಮುಖ್ಯಮಂತ್ರಿ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಅಲ್ವಾ? ಎಂಬ ಬಗ್ಗೆ ಈ ಪ್ರತಿಕ್ರಿಯೆಯನ್ನು ಮಾಜಿ ಮುಖ್ಯಮಂತ್ರಿಗಳು ನೀಡಿದ್ದಾರೆ.
ಯಡಿಯೂರಪ್ಪ ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. "ಇಂದು ಆಲಮಟ್ಟಿಗೆ ತೆರಳುತ್ತಿದ್ದೇನೆ. ಬುಧವಾರದಿಂದ ಚುನಾವಣಾ ಪ್ರಚಾರವನ್ನು ಆರಂಭಿಸುತ್ತೇನೆ. ನಾವು ಚುನಾವಣೆಯನ್ನು ಹಗುರವಾಗಿ ಪರಿಗಣಿಸಲ್ಲ. ಕಾರ್ಯಕರ್ತರು, ಮುಖಂಡರು ಶ್ರಮವಹಿಸಿ ಕೆಲಸ ಮಾಡಿದರೆ ಗೆಲವು ಸುಲಭವಾಗುತ್ತದೆ. ಎರಡು ಕ್ಷೇತ್ರಗಳಲ್ಲಿ ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ" ಎಂದು ಯಡಿಯೂರಪ್ಪ ಹೇಳಿದರು.
ರೇಣುಕಾಚಾರ್ಯ ಪ್ರತಿಕ್ರಿಯೆ; "2023ರ ವಿಧಾನಸಭೆ ಚುನಾವಣೆ ನೇತೃತ್ವ ಸಿಎಂ ಬೊಮ್ಮಯಿ ವಹಿಸಲಿದ್ದಾರೆಂದು ಈಗಾಗಲೇ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಚುನಾವಣೆ ನೇತೃತ್ವ ಅಂದರೆ ಅರ್ಥ ಮುಂದಿನ ಸಿಎಂ ಎಂಬುದೇ ಆಗಿದೆ. ಕಳೆದ ಬಾರಿ ಬಿಎಸ್ವೈ ಚುನಾವಣೆ ನೇತೃತ್ವ ವಹಿಸಿದ್ದರು. ಅವರೇ ಸಿಎಂ ಆದರು. ಈಗಲೂ ಹಾಗೇ , ಚುನಾವಣೆ ನೇತೃತ್ವ ವಹಿಸಿದವರೆ ಮುಂದಿನ ಸಿಎಂ ಆಗುತ್ತಾರೆ" ಎಂದು ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹೇಳಿದರು.
"ಮಾಜಿ ಸಿಎಂ ಯಡಿಯೂರಪ್ಪರನ್ನು ಯಾರೂ ಸೈಡ್ ಲೈನ್ ಮಾಡಿಲ್ಲ, ಮಾಡುವ ಪ್ರಶ್ನೆಯೂ ಇಲ್ಲ. ಉಪಚುನಾವಣೆಯ ಪ್ರಚಾರಕ್ಕೆ ಬಿಎಸ್ವೈ ಆಗಮಿಸುತ್ತಿದ್ದಾರೆ. ಅವರನ್ನು ಪಕ್ಷವಾಗಲಿ, ವರಿಷ್ಠರಾಗಲಿ ಸೈಡ್ ಲೈನ್ ಮಾಡಿಲ್ಲ" ಎಂದು ಎಂ.ಪಿ. ರೇಣುಕಾಚಾರ್ಯ ಸ್ಪಷ್ಟಪಡಿಸಿದರು.
ಸುಧಾಕರ್ ಮತ್ತು ತಮ್ಮ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದ ರೇಣುಕಾಚಾರ್ಯ, "ಸುಧಾಕರ್ ಹಾಗೂ ನನ್ನ ನಡುವೆ ಯಾವುದೇ ವೈಯುಕ್ತಿಕ ಭಿನ್ನಾಭಿಪ್ರಾಯವಿಲ್ಲ. ಕೋವಿಡ್ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ" ಎಂದರು.
ಬೊಮ್ಮಾಯಿ ವಿರುದ್ಧ ಟಗರು ಆರೋಪ; ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯರ ಬಗ್ಗೆ ಮಾತನಾಡಿದ ರೇಣುಕಾಚಾರ್ಯ, "ಪ್ರತಿಪಕ್ಷದ ನಾಯಕರಿಗೆ ವಿರೋಧಿಸಲು ಯಾವುದೇ ವಿಷಯಗಳಿಲ್ಲ. ವಿರೋಧಕ್ಕಾಗಿ ವಿರೋಧ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಸಚಿವ ಆಂಜನೇಯ ವಿರುದ್ದ ಹಲವು ಭ್ರಷ್ಟಾಚಾರದ ಆರೋಪಗಳಿದ್ದವು. ಅದರಲ್ಲಿ ಸಿದ್ದರಾಮಯ್ಯ ಕೈವಾಡ ಇತ್ತು ಎಂದು ಹೇಳಬಹುದಾ?" ಎಂದು ಪ್ರಶ್ನಿಸಿದರು.
Recommended Video
"ಸಿದ್ದರಾಮಯ್ಯ ಟಿಪ್ಪು ಜಯಂತಿ ಜಾರಿಗೊಳಿಸಿದರು. ಅದು ರಾಜಕೀಯ ಪ್ರೇರಿತ ಎಂಬುದು ಮನದಟ್ಟಾಗಿದೆ. ಉಪಚುನಾವಣೆಯಲ್ಲಿ ವಿರೋಧಿಗಳ ಗಿಮಿಕ್ ನಡೆಯಲ್ಲ. ನಾನು ಮೂಲತಃ ಜೆಪಿ ಚಳವಳಿಯಿಂದ ಬಂದವನು. ಪಿಯು ಅಧ್ಯಯನ ಸಂದರ್ಭದಲ್ಲಿ ಆರ್ಎಸ್ಎಸ್ ಸಂಪರ್ಕಕ್ಕೆ ಬಂದೆ. ರಾಮಮಂದಿರ ರಥ ಯಾತ್ರೆಯಿಂದ ಸಂಪೂರ್ಣ ಬಿಜೆಪಿಯಲ್ಲಿ ತೊಡಗಿಸಿಕೊಂಡೆ. ದೇಶದಲ್ಲಿ ಹಿಂದುತ್ವ ರಕ್ಷಣೆ ಮಾಡಿದ್ದು ಆರ್ಎಸ್ಎಸ್. ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಗೆ ಪ್ರಯತ್ನಿಸುತ್ತಿದ್ದಾರೆ" ಎಂದು ಆರೋಪಿಸಿದರು.