"ಬೆಳ್ಳಿ ಬೆಡಗು" ಆಹ್ವಾನ ಸಂದರ್ಭ ಅನಂತ ಕುಮಾರ್ ನೆನೆದ ಮೋದಿ
ದಾವಣಗೆರೆ, ಡಿಸೆಂಬರ್ 11: ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮದಲ್ಲಿರುವ ವೀರ ಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಜನವರಿ 13 ಮತ್ತು 14ರಂದು ನಡೆಯುವ ಬೆಳ್ಳಿ ಬೆಡಗು ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮಿಗಳು ಆಹ್ವಾನಿಸಿದ್ದಾರೆ.
2020ರ ಜನವರಿ 13 ಮತ್ತು 14ರ ಮಕರ ಸಂಕ್ರಾತಿ ಹಬ್ಬದ ದಿನದಂದು ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಆವರಣದಲ್ಲಿ ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮಿಗಳು ಹಾಗೂ ಸಮಾಜದ ಮುಖಂಡರ ನೇತೃತ್ವದಲ್ಲಿ ಹರ ಜಾತ್ರೆ ಹಾಗೂ ಬೆಳ್ಳಿ ಬೆಡಗು ಕಾರ್ಯಕ್ರಮವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ನೆರವೇರಿಸಬೇಕು ಎಂದು ಶ್ರೀ ವಚನಾನಂದ ಮಹಾಸ್ವಾಮಿಗಳು ದೆಹಲಿಗೆ ತೆರಳಿ ಆಮಂತ್ರಣ ನೀಡಿದ್ದಾರೆ.
ಉಪ ಚುನಾವಣೆ ಫಲಿತಾಂಶ; ಪ್ರಧಾನಿ ಮೋದಿ ಏನಂದ್ರು?
"ಪ್ರಧಾನಿಗಳು 15 ನಿಮಿಷಗಳನ್ನು ನಮ್ಮೊಂದಿಗೆ ಕಳೆದರು. ಮೋದಿಯವರಿಗೆ ವಿಭೂತಿ, ಇಷ್ಟಲಿಂಗ ನೀಡಿದ್ದೇವೆ. ಮೋದಿಯವರು ಖಂಡಿತವಾಗಿ ಕಾರ್ಯಕ್ರಮಕ್ಕೆ ಬರುವುದಾಗಿ ಭರವಸೆ ನೀಡಿದ್ದಾರೆ" ಎಂದು ಶ್ರೀ ಮಠದ ವಚನಾನಂದ ಸ್ವಾಮೀಜಿಗಳು ತಿಳಿಸಿದರು. ಅಲ್ಲದೆ ಈ ಸಂದರ್ಭದಲ್ಲಿ ದಿವಂಗತ ಅನಂತ ಕುಮಾರ್ ಅವರನ್ನು ನೆನಪಿಸಿಕೊಂಡು, ಕರ್ನಾಟಕದಿಂದ ತಮ್ಮನ್ನು ಭೇಟಿಯಾಗಲು ಯಾರೇ ಬಂದರು ಅವರನ್ನು ಅನಂತ ಕುಮಾರ್ ತಮ್ಮ ಬಳಿ ಕರೆದುಕೊಂಡು ಬರುತ್ತಿದ್ದರು ಎಂದು ಮೋದಿ ನೆನಪಿಸಿಕೊಂಡಿದ್ದಾಗಿ ಸ್ವಾಮೀಜಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸಂಸದರಾದ ಜಿ.ಎಂ.ಸಿದ್ದೇಶ್ವರ, ಶಾಸಕ ಮುರುಗೇಶ ನಿರಾಣಿ, ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಹಾಗೂ ರಾಜ್ಯ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಬಿ. ನಾಗನಗೌಡರು ಉಪಸ್ಥಿತರಿದ್ದರು.