ದಾವಣಗೆರೆ: 64ನೇ ವರ್ಷದ ಜಯದೇವ ರಥೋತ್ಸವಕ್ಕೆ ಚಾಲನೆ ನೀಡಿದ ಮುರುಘಾ ಶರಣರು
ದಾವಣಗೆರೆ, ಸೆಪ್ಟೆಂಬರ್ 16: ಶಿಕ್ಷಣ ಪ್ರೇಮ ತೋರಿಸಿದ ಮೊದಲ ಮಠಾಧೀಶ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಎಂದು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಬಣ್ಣಿಸಿದರು.
ದಾವಣಗೆರೆ ನಗರದ ಬಸವ ಕೇಂದ್ರ ಶಿವಯೋಗಾಶ್ರಮದಲ್ಲಿ ಜಯದೇವ ಶ್ರೀಗಳ 64ನೇ ವರ್ಷದ ಸರಳ ರಥೋತ್ಸವ, ಶ್ರೀಗಳ ಭಾವಚಿತ್ರ ವಚನ ಗ್ರಂಥ ಮೆರವಣಿಗೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಕನ್ನಡ ಚಿತ್ರರಂಗಕ್ಕೆ ಮಸಿ ಬಳಿದ ಸರ್ಕಾರ: ಕೆಪಿಸಿಸಿ ವಕ್ತಾರ ಆರೋಪ
'ಮೂರು ಸಂಗತಿಗಳ ಮೂಲಕ ಜಗತ್ತಿನ ಇತಿಹಾಸವನ್ನು ತಿಳಿಯುತ್ತೇವೆ. ಪೌರಾಣಿಕ ಪುರುಷರು ಅಥವಾ ಕಾಲ್ಪನಿಕ ಲೋಕದ ದೇವಾನು ದೇವತೆಗಳ ಕಥೆಗಳು ಮೊದಲನೆಯದ್ದು. ರಾಜ ಮಹಾರಾಜರ ಯುದ್ಧ, ಆಡಳಿತ, ಸಾಮ್ರಾಜ್ಯಗಳ ವಿವರಗಳು ಎರಡನೆಯದ್ದು. ಸಾಮಾಜಿಕ ಸತ್ಪುರುಷರ ಸಾಧನೆಗಳು ಮೂರನೆಯದ್ದು. ಸತ್ಪುರುಷರನ್ನು ಸಮಾಜ ಸುಧಾರಕರು, ದಾರ್ಶನಿಕರು ಎಂದು ಕರೆಯಬಹುದು. ಅಂತಹವರ ಸಾಲಿನಲ್ಲಿ ಜಯದೇವ ಶ್ರೀಗಳಿದ್ದಾರೆ' ಎಂದರು.
ನಿರಂತರ ಕ್ರಿಯಾಶೀಲರಾಗಿದ್ದ ಸ್ವಾಮೀಜಿ 19ನೇ ಶತಮಾನದಲ್ಲಿ ಪ್ರಸಾದ ಕೇಂದ್ರಗಳನ್ನು ತೆರೆದು ಶಿಕ್ಷಣಕ್ಕೆ ಒತ್ತು ನೀಡಿದರು. ತಮ್ಮ ಬಟ್ಟೆಯನ್ನು ತಾವೇ ಹೊಲಿದುಕೊಳ್ಳುವಷ್ಟು ಸರಳ ಜೀವನ ನಡೆಸಿದರು. ಚಿತ್ರದುರ್ಗದ ಮಠದಲ್ಲಿ ಅವರು ಬಳಸಿದ ವಸ್ತುಗಳೂ ಸೇರಿದಂತೆ ದೊಡ್ಡ ಮ್ಯೂಸಿಯಂ ಆರಂಭಗೊಳ್ಳುತ್ತಿದೆ. ಹಿಂದಿನ ಕಾಲದ ಪಾತ್ರೆ, ಸೌಟು, ಮಂಚದಿಂದ ಹಿಡಿದು ಎಲ್ಲ ವಸ್ತುಗಳಿವೆ. ಅವುಗಳನ್ನು ನೋಡಲು 2-3 ಗಂಟೆಗಳು ಬೇಕಾಗುತ್ತದೆ. ಅಷ್ಟೊಂದು ವೈವಿಧ್ಯಗಳಿವೆ. ಮುಂದಿನ ತಿಂಗಳು ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.
ಜೀವನೋತ್ಸಾಹ ಕಳೆದುಕೊಂಡರೆ ಯುವಕರು ಕೂಡ ಮುದುಕರಂತೆ ಆಗುತ್ತಾರೆ. ಜೀವನೋತ್ಸಾಹ ಇದ್ದರೆ ಮುದುಕರೂ ಯುವಕರಂತಿರುತ್ತಾರೆ. ಆದರ್ಶದಿಂದ ಸಮಾಜಕ್ಕಾಗಿ ಬದುಕಿದವರು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಗಳಾಗುತ್ತಾರೆ. ತನಗಾಗಿ ಬದುಕಿದವರು ಕಾಲಗರ್ಭದಲ್ಲಿ ಹೇಳ ಹೆಸರಿಲ್ಲದಾಗುತ್ತಾರೆ. ಮೊದಲನೇ ಸಾಲಿಗೆ ಸೇರಿದವರು ಜಯದೇವ ಶ್ರೀಗಳು ಎಂದು ತಿಳಿಸಿದರು.
Recommended Video
ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, 'ಕಾಯ ಶುದ್ಧಿಗೆ ಕಾಯಕ ಮಾಡಬೇಕು. ಕೊರೊನಾದಿಂದ ದೂರ ಇರಲು ದೈಹಿಕ ಚಟುವಟಿಕೆ ಮತ್ತು ಎಚ್ಚರಿಕೆ ಇರಬೇಕು. ಅನ್ನದಾಸೋಹಿ, ಜ್ಞಾನ ದಾಸೋಹಿ ಆಗಿದ್ದ ಜಯದೇವ ಶ್ರೀಗಳನ್ನು ಕೊರೊನಾ ಕಾರಣದಿಂದ ಸರಳವಾಗಿ ನೆನಪಿಸುವ ಕಾರ್ಯ ಮಾಡಲಾಗುತ್ತಿದೆ' ಎಂದು ಹೇಳಿದರು. ವೈದ್ಯ ಡಾ.ಎಸ್.ಎಂ ಎಲಿ. ರೋಶನ್, ಬಕ್ಕಪ್ಪ ಉಪಸ್ಥಿತರಿದ್ದರು.