ಬಿಎಸ್ವೈ ಮತ್ತೊಮ್ಮೆ ಸ್ಪರ್ಧಿಸಬೇಕು: ಕಣ್ಣೀರು ಸುರಿಸುತ್ತಾ ಹೇಳಿದ ರೇಣುಕಾಚಾರ್ಯ...!
ದಾವಣಗೆರೆ, ಜುಲೈ 23: ಮಾಜಿ ಮುಖ್ಯಂಮತ್ರಿ ಬಿ. ಎಸ್. ಯಡಿಯೂರಪ್ಪನವರು ಇನ್ನೊಂದು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಇಂಗಿತ ವ್ಯಕ್ತಪಡಿಸಿದರು.
ಹೊನ್ನಾಳಿ ಪಟ್ಟಣದ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾತಿನ ಮಧ್ಯೆ ಗದ್ಗದಿತರಾದರು. ಅವರ ಕಣ್ಣಿನಲ್ಲಿ ನೀರು ತುಂಬಿಕೊಂಡು ಬಂದಿತ್ತು. ಮಾತಿನ ಮಧ್ಯೆ ಕಣ್ಣೀರು ಒರೆಸಿಕೊಳ್ಳುತ್ತಿದ್ದರು. "ಯಡಿಯೂರಪ್ಪ ಅವರು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದೇಳಿಲ್ಲ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಬೇಕೆಂಬ ಸಂಕಲ್ಪ ಮಾಡಿದ್ದಾರೆ. ಅವರ ಅಪೇಕ್ಷೆ ಇದೆ. ಕಾಂಗ್ರೆಸ್ ಇನ್ನು 20 ವರ್ಷ ಪ್ರತಿಪಕ್ಷ ಸ್ಥಾನದಲ್ಲಿ ಕೂರಲಿದೆ. ಮತ್ತೊಮ್ಮೆ 2023ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ರಾಜಕಾರಣ: ಚಾನ್ಸ್ ಕೊಟ್ಟರೆ ನೋಡೋಣ ಎಂದ ಮಲ್ಲಿಕಾರ್ಜುನ ಖರ್ಗೆ
ಲಕ್ಷಾಂತರ ಯುವಕರಿಗೆ ಯಡಿಯೂರಪ್ಪ ಮಾರ್ಗದರ್ಶನ ಅವಶ್ಯಕ. ರಾಜ್ಯದ ಉದ್ದಗಲ ಯಡಿಯೂರಪ್ಪ ಪ್ರವಾಸ ಮಾಡಲಿದ್ದಾರೆ. ಪರಿಶಿಷ್ಟ ಜಾತಿ, ವರ್ಗ ಸೇರಿದಂತೆ ಎಲ್ಲಾ ವರ್ಗದವರು ಬಿಜೆಪಿ ಹಾಗೂ ಯಡಿಯೂರಪ್ಪಗೆ ಬೆಂಬಲ ನೀಡಿದ್ದಾರೆ. ಬಿಎಸ್ ವೈ ಮಾಸ್ ಲೀಡರ್. ಚುನಾವಣೆಗೆ ಸ್ಪರ್ಧೆ ಮಾಡಲ್ಲ ಅಂದಿದ್ದಾರೆ. ವಿಜಯೇಂದ್ರ ಸ್ಪರ್ಧೆ ಬಗ್ಗೆ ರಾಷ್ಟ್ರೀಯ ನಾಯಕರು, ವರಿಷ್ಠರು ನಿರ್ಧಾರ ಮಾಡಲಿದ್ದಾರೆ. ನಮ್ಮ ಅಪೇಕ್ಷೆ ಯಡಿಯೂರಪ್ಪ ಮತ್ತೆ ಸ್ಪರ್ಧೆ ಮಾಡಬೇಕೆಂಬುದು ಎಂದು ತಿಳಿಸಿದರು.
ಹೋರಾಟಕ್ಕೆ ಸ್ಫೂರ್ತಿ ತುಂಬಿದವರು ಯಡಿಯೂರಪ್ಪ
ಯಡಿಯೂರಪ್ಪ ಎದ್ದು ನಿಂತು ಮಾತನಾಡಲು ಶುರು ಮಾಡಿದರೆ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಪ್ರತಿಪಕ್ಷದ ನಾಯಕರು ಆಲಿಸುತ್ತಾರೆ. ನಾವು ಯಾವಾಗಲೂ ಕರೆದರೂ ಯಡಿಯೂರಪ್ಪ ಬರುತ್ತಾರೆ. ಹೋರಾಟಕ್ಕೆ ಸ್ಫೂರ್ತಿ ತುಂಬಿದವರು ಯಡಿಯೂರಪ್ಪ ಅವರು. ಈಶ್ವರಪ್ಪ, ಅನಂತಕುಮಾರ್, ಡಿ. ಹೆಚ್. ಶಂಕರಮೂರ್ತಿ ಸೇರಿದಂತೆ ಹಲವರು ಪಕ್ಷ ಕಟ್ಟಿದ್ದಾರೆ. ಅವರು ನೀಡಿರುವ ಕೊಡುಗೆ ಅಪಾರ. ಯಡಿಯೂರಪ್ಪ ಅವರ ಜೊತೆ ನಾವೆಲ್ಲರೂ ಇರುತ್ತೇವೆ. ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ ಅನ್ನೋದು ಯಡಿಯೂರಪ್ಪರ ಮಾತು. ಅವರೊಬ್ಬ ಜಾತ್ಯತೀತ ವ್ಯಕ್ತಿ ಎಂದು ಹೇಳಿದರು.
ರಮೇಶ್ ಕುಮಾರ್ ಸತ್ಯ ಒಪ್ಪಿಕೊಂಡಿದ್ದಾರೆ
ರಮೇಶ್ ಕುಮಾರ್ ಗಾಂಧಿ ಕುಟುಂಬದ ಹೆಸರೇಳಿ ನಾಲ್ಕು ತಲೆಮಾರು ಕುಳಿತು ತಿನ್ನುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರೆಲ್ಲ ಅವರ ಪರ ನಿಲ್ಲಬೇಕು ಎಂದಿದ್ದಾರೆ. ಈ ವಿಚಾರದಲ್ಲಿ ರಮೇಶ್ ಕುಮಾರ್ ಹೇಳಿಕೆ ಸತ್ಯವಾಗಿದೆ. ಇವರೇ ನಾಲ್ಕು ತಲೆಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡಿದ್ದರೆ ಅಂದರೆ , ಅವರು ಇನ್ನೆಷ್ಟು ಮಾಡಿಕೊಂಡಿರಬೇಕು, ಅದಕ್ಕೆ ಇದು ಬಹುಲಕ್ಷ ಕೋಟಿ ಅವ್ಯವಹಾರ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಉಪ್ಪು ತಿಂದವನೂ ನೀರು ಕುಡಿಯಲೇ ಬೇಕು, ಕಾನೂನಿಗೆ ತಲೆಬಾಗಬೇಕು ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ
ಈಗಾಗಲೇ ಕಾಂಗ್ರೆಸ್ ನಾಯಕರ ಬೀದಿ ಜಗಳ ಜಗತ್ ಜಾಹೀರಾಗುತ್ತಿದೆ, ಒಂದು ಕಡೆ ಸಿದ್ದರಾಮಯ್ಯ, ಇನ್ನೊಂದು ಕಡೆ ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಅಲ್ವ, ಇವರು ಮುಖ್ಯಮಂತ್ರಿಯಾಗುವುದು. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ. ಮತ್ತೊಮ್ಮೆ ರಾಜ್ಯದಲ್ಲಿ ನರೇಂದ್ರ ಮೋದಿ ವರ್ಚಸ್ಸು ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲಿದೆ. ಎಂದು ಹೇಳಿದರು.
ಪ್ರತಿಭಟನೆ ಹೆಸರಲ್ಲಿ ಗುಜರಿ ಕಾರಿಗೆ ಬೆಂಕಿ
ಸೋನಿಯಾ ಗಾಂಧಿ ವಿರುದ್ಧ ಇಡಿ ತನಿಖೆಗೆ ಅರ್ಜಿ ಸಲ್ಲಿಸಿರುವವರು ಸುಬ್ರಹ್ಮಣ್ಯ ಸ್ವಾಮಿ ಹೊರೆತು ನರೇಂದ್ರ ಮೋದಿಯಲ್ಲ ಅಥವಾ ಬಿಜೆಪಿಯಲ್ಲ. ಆದರೆ ತನಿಖೆಗೆ ಅಡ್ಡಿ ಪಡಿಸುತ್ತಿದ್ದಾರೆ. ಪುಡಿರೌಡಿಗಳ ಜೊತೆಯಾಗಿ ಯುವ ಕಾಂಗ್ರೆಸ್ ನಾಯಕನ ನೇತೃತ್ವದಲ್ಲಿ ಗುಜರಿ ಕಾರುಗಳನ್ನು ತಂದು ಸುಡುತ್ತಿದ್ದಾರೆ. ದೇಶದ ಜನ ಇವರನ್ನು ಈಗಾಗಲೇ ಗುಜರಿಗೆ ಕಳುಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.