"ಸೋತ ಯೋಗೇಶ್ವರ್ ಗೆ ಮಂತ್ರಿಗಿರಿ"; ಚರ್ಚೆಗೆ ಕಾರಣವಾದ ರೇಣು ಟ್ವೀಟ್
ದಾವಣಗೆರೆ, ಫೆಬ್ರವರಿ 05: ಬಿಜೆಪಿಯಲ್ಲಿ ಸೋತ ಸಿಪಿ ಯೋಗೇಶ್ವರ್ ಗೆ ಮಂತ್ರಿಗಿರಿ ಕೊಡಿಸಲು ಡಿಸಿಎಂ ಅಶ್ವತ್ಥ ನಾರಾಯಣ್ ತಮ್ಮ ಸ್ಥಾನವನ್ನು ಬಿಟ್ಟು ಕೊಡಲಿ ಎಂದು ಫೇಸ್ ಬುಕ್ ನಲ್ಲಿ ಎಂ.ಪಿ. ರೇಣುಕಾಚಾರ್ಯ ಅವರು ಅಶ್ವತ್ಥ ನಾರಾಯಣ್ ಗೆ ಟಾಂಗ್ ನೀಡಿದ್ದಾರೆ.
"ಸಿಪಿ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದಿದ್ದಾರೆ. ಆ ಸಚಿವ ಸ್ಥಾನವನ್ನು ನೀಡಬೇಕು ಎಂದರೆ ಡಿಸಿಎಂ ಅಶ್ವತ್ಥ ನಾರಾಯಣ್ ತಮ್ಮ ಸ್ಥಾನವನ್ನು ತ್ಯಾಗ ಮಾಡಿ ಅವರಿಗೆ ನೀಡಲಿ. ನಾವು ಬಂಡಾಯ ಎದ್ದಿಲ್ಲ, ರೆಸಾರ್ಟ್ ರಾಜಕೀಯ ಮಾಡಿಲ್ಲ, ಪಕ್ಷದ ವಿರುದ್ಧ ಮಾತನಾಡಿಲ್ಲ. ನಾವು ನಮ್ಮ ಭಾವನೆ ವ್ಯಕ್ತಪಡಿಸಿದ್ದೇವೆ. ಈ ನಮ್ಮ ಭಾವನೆಗಳನ್ನು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ. ಅಲ್ಲದೆ ಅಂತಿಮವಾಗಿ ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ನಮ್ಮ ನಾಯಕ ಯಾವಾಗಲೂ ಬಿಎಸ್ವೈ" ಎಂದು ಹೊನ್ನಾಳಿ ಬಿಜೆಪಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಹೊನ್ನಾಳಿ "ಹೋರಿ' ರೇಣುಕಾಚಾರ್ಯ ಮೇಲೆ ಎಫ್ಐಆರ್ ದಾಖಲು
ರೇಣುಕಾಚಾರ್ಯ ಅವರು ಮಾಡಿರುವ ಟ್ವೀಟ್ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. "ಸೋತವರಿಗೆ ಮಂತ್ರಿ ಸ್ಥಾನ ನೀಡುತ್ತಾ ಹೋದರೆ ಪಕ್ಷಕ್ಕೆ ಮುಜುಗರವಾಗುತ್ತದೆ. ನಾಯಕತ್ವ, ಪಕ್ಷ ಮತ್ತು ಸರ್ಕಾರದ ವಿರುದ್ಧ ಯಾರೂ ದನಿ ಎತ್ತಿಲ್ಲ ಮತ್ತು ಎತ್ತುವುದಿಲ್ಲ. ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಕರಾವಳಿ ಭಾಗದವರಿಗೆ ಅವಕಾಶ ನೀಡಿ. ಪ್ರಾದೇಶಿಕ ಅಸಮತೋಲನ ಕಾಪಾಡಬೇಕಾಗಿದೆ" ಎಂದು ತಮ್ಮ ಅಧಿಕೃತ ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ಹಲವು ಚರ್ಚೆಗಳಿಗೆ ಕಾರಣವಾಗಿದೆ.