ಡಿಸೆಂಬರ್ 09ರಂದು ಖರ್ಗೆ ನೀಡಲಿರುವ ಸಿಹಿ ಸುದ್ದಿ ನಂಗೊತ್ತು ಎಂದ ರೇಣುಕಾ
ದಾವಣಗೆರೆ, ಡಿಸೆಂಬರ್ 05: ಕರ್ನಾಟಕದ ಉಪಚುನಾವಣೆ ಫಲಿತಾಂಶ ಡಿಸೆಂಬರ್ 09ರಂದು ಹೊರ ಬರಲಿದ್ದು, ಎಲ್ಲರ ಕುತೂಹಲ ಕೆರಳಿಸಿದೆ. ಸರ್ಕಾರದ ಅಳಿವು ಉಳಿವಿನ ಪ್ರಶ್ನೆ, ಕಾಂಗ್ರೆಸ್ -ಜೆಡಿಎಸ್ ಸಂಭಾವ್ಯ ಮೈತ್ರಿ, ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಗುವ ಯೋಗ ಇದೆಯೇ? ಎಂಬ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ. ಡಿಸೆಂಬರ್ 09ರ ನಂತರ ಸಿಹಿ ಸುದ್ದಿ ನೀಡುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿರುವುದು ಕುತೂಹಲ ಮೂಡಿಸಿದ್ದು, ಅನೇಕ ಮಂದಿ ಪ್ರತಿಕ್ರಿಯಿಸಿದ್ದಾರೆ. ಎಂಪಿ ರೇಣುಕಾಚಾರ್ಯ ಅವರಂತೂ ಖರ್ಗೆ ಅವರು ಏನು ಹೇಳುತ್ತಾರೆ ನಂಗೊತ್ತು ಎಂದಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು ಉಪ ಚುನಾವಣೆ ನಂತರ ಪ್ರತಿಪಕ್ಷದ ಸ್ಥಾನ ಕಳೆದುಕೊಳ್ಳಲಿದ್ದಾರೆ. ಇದನ್ನೇ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಿಹಿ ಸುದ್ದಿ ಎಂದು ಭಾವಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಡಿಸೆಂಬರ್ 9ರ ನಂತರ ಗುಡ್ ನ್ಯೂಸ್: ಮಲ್ಲಿಕಾರ್ಜುನ್ ಖರ್ಗೆ
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಉಪ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ. ಯಾವ ನಾಯಕನೂ ಅವರ ಜೊತೆಗಿಲ್ಲ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂಬುದು ಖರ್ಗೆ ಸೇರಿದಂತೆ, ಹಲವು ಕಾಂಗ್ರೆಸ್ ನಾಯಕರ ನಿರೀಕ್ಷೆಯಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನವರನ್ನು ನೋಡಿದರೆ ಅನುಕಂಪ ಬರುತ್ತಿದೆ. ಖರ್ಗೆ ಸೋತು ಹೋಗಿದ್ದಾರೆ. ದಲಿತ ಎಂಬ ಕಾರ್ಡ್ ಇಟ್ಟುಕೊಂಡು ಮುಖ್ಯಮಂತ್ರಿ ಸ್ಥಾನ ಬಯಸಿದ್ದಾರೆ. ಏನಾದರೂ ಮಾಡಿ ಜೆಡಿಎಸ್ ವರಿಷ್ಠ ದೇವೇಗೌಡರ ಮನವೊಲಿಸಿ, ಮೈತ್ರಿ ಸರ್ಕಾರ ಮಾಡಿಕೊಂಡು ಮುಖ್ಯಮಂತ್ರಿಯಾಗಬೇಕೆಂಬ ಬಯಕೆ ಅವರಿಗಿದೆ ಎಂದು ಹೇಳಿದರು.
ಯಡಿಯೂರಪ್ಪ ಅವರನ್ನು ಹದ ಮಾಡುವುದಾಗಿ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಹೇಳಿರುವುದಕ್ಕೆ ತರಾಟೆಗೆ ತೆಗೆದುಕೊಂಡ ರೇಣುಕಾಚಾರ್ಯ, ರಾಜ್ಯ-ದೇಶ ಏನು ಅವರಪ್ಪನ ಆಸ್ತೀನಾ? ಎಂದು ಕೇಳಿದ್ದಾರೆ. ನಿಂಬೆಹಣ್ಣು ಹಿಡಿದು ವಾಮ ಮಾರ್ಗದಿಂದ ಕುತಂತ್ರ ಮಾಡಿದರೂ ಅವರು ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಹುಚ್ಚುಚ್ಚಾಗಿ ಹೇಳಿಕೆ ನೀಡುತ್ತಿದ್ದಾರೆ. ಇದೆಲ್ಲ ನಡೆಯುವುದಿಲ್ಲ ಎಂದರು.