ಸಿದ್ದರಾಮಯ್ಯಗೆ ಸರಳ ಪ್ರಶ್ನೆ ಕೇಳಿದ ಎಂ.ಪಿ ರೇಣುಕಾಚಾರ್ಯ
ದಾವಣಗೆರೆ ಮೇ 28: ಕಾಂಗ್ರೆಸ್ ಪಕ್ಷದಲ್ಲಿ ಮೂಲೆ ಗುಂಪು ಮಾಡಲು ಮಹಾನಾಯಕ ನಿಮಗೆ ಖೆಡ್ಡ ತೋಡುತ್ತಿರುವುದು ಜಗಜ್ಜಾಹೀರವಾಗಿದೆ. ಅಭದ್ರತೆಯಲ್ಲಿರುವ ನಿಮಗೆ ಆರ್.ಎಸ್.ಎಸ್, ಸಂಘಪರಿವಾರ, ಬಿಜೆಪಿ, ಮೋದಿ ಭಜನೆ ಮಾಡದಿದ್ದರೆ ಕ್ಯಾರೆ ಅನ್ನುವವರು ಇಲ್ಲ ಎಂದು ಕಾಂಗ್ರೆಸ್ ಗುರಿಯಾಗಿಸಿಕೊಂಡು ಶಾಸಕ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅವರು ಸರಣಿ ಟ್ವೀಟ್ ಮಾಡಿದ್ದಾರೆ.
'ನಮ್ಮ ಸಂಘಟನೆಯ ಮೂಲವನ್ನು ಪ್ರಶ್ನಿಸುವ ಮಾನ್ಯ ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷದ ಮೂಲ ಯಾವುದು ಎಂದು ಸ್ವಲ್ಪ ಬಿಡಿಸಿ ಹೇಳಿದರೆ ಅಸಲಿ ಕಥೆ ದೇಶದ ಜನತೆಗೆ ಗೊತ್ತಾಗುತ್ತೆ. ಇಲ್ಲದಿದ್ದರೆ, ನಾವು ಬಿಚ್ಚಿಡಬೇಕಾಗುತ್ತದೆ. ಆರ್.ಎಸ್.ಎಸ್ ಈ ನೆಲದ ಮೂಲ ಅಲ್ಲ ಎಂದು ನಮಗೆ ನಿಮ್ಮಿಂದಾಗಲೀ ಇಲ್ಲವೇ ನಕಲಿ ಕಾಂಗ್ರೆಸ್ ಪಕ್ಷದಿಂದ ಪ್ರಮಾಣಪತ್ರ ಬೇಕಾಗಿಲ್ಲ. ನಮ್ಮ ಸಂಘಟನೆಯ ಹಿನ್ನಲೆ ಏನೆಂಬುದು ಶತಕೋಟಿ ಭಾರತೀಯರಿಗೆ ಗೊತ್ತಿರವಾಗ ನಿಮ್ಮಿಂದ ಇಂತಹ ಟೀಕೆ ಅನಿರೀಕ್ಷಿತವಲ್ಲ' ಎಂದಿದ್ದಾರೆ.
ಸಿದ್ದರಾಮಯ್ಯಗೆ ಸರಳ ಪ್ರಶ್ನೆ ಕೇಳಿದ ರೇಣುಕಾಚಾರ್ಯ
ಜೊತೆಗೆ 'ಆರ್.ಎಸ್.ಎಸ್ ಈ ನೆಲದ ಮೂಲದಿಂದಲೇ ಬೆಳೆದು ಇಂದು ವಿಶ್ವದಲ್ಲೇ ಅತ್ಯಂತ ದೊಡ್ಡ ಸಂಘಟನೆಯಾಗಿ ಬೆಳೆದು ನಿಂತಿದೆ. ನೀವು ಟೀಕೆ ಮಾಡದಷ್ಟು ಎತ್ತರಕ್ಕೆ ಬೆಳೆಯುತ್ತದೆ RSS, ಅನುಮಾನ ಬೇಡ. ಸದಾ ಬದಲಾವಣೆ ಬಯಸುವ ನಮ್ಮ ಪರಿವಾರದಲ್ಲಿ ಹೊಸ ತಲೆಮಾರಿನ ನಾಯಕರನ್ನು ಬೆಳೆಸುತ್ತಲೇ ಬಂದಿದ್ದಾರೆ. ಎರಡು ದಶಕಗಳಿಂದ ಒಂದೇ ಪರಿವಾರದ ಕಪಿಮುಷ್ಟಿಯಲ್ಲಿರುವ ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ಹಿಡಿಯುವ "ಸ್ವದೇಶಿ "ಯಾರೊಬ್ಬರೂ ಇಲ್ಲವೇ?' ಎಂದು ಪ್ರಶ್ನೆ ಮಾಡಿದ್ದಾರೆ
'ಮಾನ್ಯ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯನವರೇ ನನ್ನದೊಂದು ಸರಳ ಪ್ರಶ್ನೆ. ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಇಂದು ಯಾರ ಸುಪರ್ದಿಯಲ್ಲಿದೆ? ಸ್ವದೇಶೀಯೋ ಅಥವಾ ವಿದೇಶೀಯೋ...! "ಇಟಲಿ" ಅನುಮತಿ ಇಲ್ಲದೆ ಈವರೆಗೂ ಎಷ್ಟು ಸ್ವಂತ ನಿರ್ಧಾರ ತೆಗೆದುಕೊಳ್ಳಾಗಿದೆ' ಎಂದು ಕುಟುಕಿದ್ದಾರೆ.
ಗ್ರಾಮಗಳಿಗೆ ಭೇಟಿ ಜನರ ಕುಂದು ಕೊರತೆಗೆ ಪರಿಹಾರ
ಸದ್ಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ನಿರತರಾಗಿರುವ ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ನಿರಂತ ವಾಗ್ದಾಳಿ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳ ತಂಡ ಗ್ರಾಮಗಳಿಗೆ ಭೇಟಿ ನೀಡಿ ಕುಂದು ಕೊರತೆ ಆಲಿಸಿ ಅಲ್ಲಿಯೇ ಪರಿಹಾರ ಸೂಚಿಸುವುದು ಈ ಕಾರ್ಯಕ್ರಮದ ವೈಶಿಷ್ಟ್ಯವಾಗಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಇಂದು ಶಾಸಕ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಚಾಲನೆ ನೀಡಿದರು. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಅಧಿಕಾರಿಗಳು ಹಾಗೂ ಶಾಸಕರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಎತ್ತಿನ ಗಾಡಿಯಲ್ಲಿ ಗ್ರಾಮದ ತುಂಬಾ ಶಾಸಕರು ಸೇರಿದಂತೆ ಡಿಸಿ, ಸಿಇಓ ಅಧಿಕಾರಿಗಳನ್ನು ಕೂರಿಸಿಕೊಂಡು ಮೆರವಣಿಗೆ ಮಾಡಿದ ಗ್ರಾಮೀಣ ದರ್ಶನ ಮಾಡಿದರು.
ಡಿಸಿಗಳಿಂದ ಗ್ರಾಮ ಪಂಚಾಯಿತಿಗೆ ಭೇಟಿ
ಹಳ್ಳಿಯ ಜನರು ಸಣ್ಣಪುಟ್ಟ ಸಮಸ್ಯೆ ಎದುರಾದಾಗಾಲೂ ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿಗೆ ಅಲೆಯುವ ಪರಿಸ್ಥಿತಿಯಿದೆ. ಇದನ್ನು ತಪ್ಪಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ. 'ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ' ಯೋಜನೆಯ ಅನುಸಾರ ಡಿಸಿಗಳು ಪ್ರತಿ ತಿಂಗಳ ಮೂರನೇ ಶನಿವಾರ ಒಂದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಹಳ್ಳಿಯ ಜನರ ಅಹವಾಲು ಸ್ವೀಕರಿಸಿ ಸಮಸ್ಯೆ ಇತ್ಯರ್ಥ ಪಡಿಸಬೇಕು.
ಅರ್ಹ ಕುಟುಂಬಗಳಿಗೆ ಬಿಪೆಎಲ್ ಕಾರ್ಡ್ ಹಂಚಿಕೆ
ಜಿಲ್ಲಾಧಿಕಾರಿಗಳ ನಡೆ ಹಳ್ಳೆ ಕಡೆ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ. ಫವತಿ ಖಾತೆ, ಪಹಣಿ ತಿದ್ದುಪಡಿ, ಭೂ ಒತ್ತುವರಿ ತೆರವು, ಪಿಂಚಣಿ, ಆಶ್ರಯ ಯೋಜನೆ, ಸ್ಮಶಾನ, ಮತದಾರರ ಪಟ್ಟಿ ಪರಿಷ್ಕರಣೆ, ಬರ, ಪ್ರವಾಹ ಪರಿಶೀಲನೆ ಹಾಗೂ ಪರಿಹಾರ ನೀಡುವುದು, ಅರ್ಹ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಹಂಚಿಕೆ, ಪೋಡಿ ಪ್ರಕರಣ ಇತ್ಯರ್ಥ, ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದ ಅಡೆತಡೆ ನಿವಾರಣೆ ಸಂಬಂಧ ಡಿಸಿಗಳ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.