ಮಳೆ ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತಕ್ಕೆ ಸಂಸದ ಸಿದ್ದೇಶ್ವರ ಸೂಚನೆ
ದಾವಣಗೆರೆ, ಆಗಸ್ಟ್ 09: ದಾವಣಗೆರೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಮುಂದಿನ ಒಂದು ವಾರದಲ್ಲಿ ಅತೀ ಹೆಚ್ಚು ಮಳೆ ಬೀಳುವ ಸಂಭವವಿರುವುದರಿಂದ ಜಿಲ್ಲಾಡಳಿತ, ತಾಲೂಕು ಮಟ್ಟದ ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಸಿದ್ದವಿರಬೇಕು ಎಂದು ಸಂಸದ ಜಿ.ಎಂ ಸಿದ್ದೇಶ್ವರ ಅವರು ಸೂಚಿಸಿದರು.
ವಿಡೀಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಈಗಾಗಲೇ ಬೆಳೆ ಹಾನಿ, ಮನೆ ಹಾನಿ ಆಗಿರುವವರಿಗೆ ತಕ್ಷಣ ಪರಿಹಾರ ಒದಗಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದರು.
ಶಾಮನೂರು ಶಿವಶಂಕರಪ್ಪಗೆ ಕೋವಿಡ್ ಸೋಂಕು
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದೆ, ಅದರೊಂದಿಗೆ ಹೆಚ್ಚು ಮಳೆಯಾಗುತ್ತಿರುವುದರಿಂದ ಎರಡೂ ಪರಿಸ್ಥಿತಿಗಳನ್ನು ಒಟ್ಟಾಗಿ ನಿಭಾಯಿಸಬೇಕಾಗಿದೆ. ಈಗಾಗಲೇ ತುಂಗಾ ನದಿಗೆ ಸಾಕಷ್ಟು ನೀರು ಬಂದಿದ್ದು, ಕೆಲವೇ ದಿನಗಳಲ್ಲಿ ಭದ್ರಾ ನೀರು ಸೇರಲಿದೆ. ಹಾಗಾಗಿ ನದಿ ಪಾತ್ರದಲ್ಲಿರುವ ಜನ-ಜಾನುವಾರುಗಳು ಪ್ರವಾಹಕ್ಕೆ ಒಳಗಾಗದಂತೆ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಮುಖ್ಯ
ಪ್ರವಾಹಕ್ಕೆ ಸಿಲುಕುವ ಕುಟುಂಬಗಳನ್ನು ತಕ್ಷಣ ಸ್ಥಳಾಂತರಿಸಿ ಅವರನ್ನು ಕಾಳಜಿ ಕೇಂದ್ರಗಳಿಗೆ ಕಳುಹಿಸಬೇಕು, ಈ ಹಿಂದಿನ ದಿನಗಳಲ್ಲಿ ಪ್ರವಾಹ ಉಂಟಾದರೆ ಕಾಳಜಿ ಕೇಂದ್ರಗಳನ್ನು ಮಾಡಿದಂತೆ ಮಾಡಲು ಬರುವುದಿಲ್ಲ. ಏಕೆಂದರೆ ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಮುಖ್ಯವಾಗಿರುವುದರಿಂದ ಸುಸಜ್ಜಿತ ಸ್ಥಳಗಳನ್ನು ಗುರುತಿಸಬೇಕು ಸಮುದಾಯ ಭವನ, ಹಜ್ ಭವನ, ಗುರು ಭವನಗಳನ್ನು ಗುರುತಿಸಿ ಒಂದೇ ಕಡೆ ಅಡುಗೆ ವ್ಯವಸ್ಥೆ ಮಾಡಿ ಅಲ್ಲಿಂದ ಚಿಕ್ಕ ಚಿಕ್ಕ ವಾಹನಗಳ ಮೂಲಕ ಆಹಾರ ಮತ್ತು ನೀರನ್ನು ಸರಬರಾಜು ಮಾಡಬೇಕು ಎಂದು ತಿಳಿಸಿದರು.
ಯೂರಿಯಾಗೆ ಯಾವುದೇ ತೊಂದರೆ ಇಲ್ಲ
ದಾವಣಗೆರೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿದೆ, ಕೆಲವೆಡೆ ಯೂರಿಯಾ ಅಭಾವದ ದೂರುಗಳಿವೆ. ಆದರೆ ಯೂರಿಯಾಗೆ ಯಾವುದೇ ತೊಂದರೆ ಇಲ್ಲ. ಬೇಡಿಕೆ ಸಲ್ಲಿಸಿ ಪೂರೈಸಲು ವ್ಯವಸ್ಥೆ ಮಾಡಲಾಗುವುದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ಎಂದರು.
ದಾವಣಗೆರೆ; ತುಂಬಿ ಹರಿದ ತುಂಗಭದ್ರೆಯಿಂದ ರೈತರಲ್ಲಿ ಸಂತಸ
ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಜೂನ್, ಆಗಸ್ಟ್ ತಿಂಗಳಿನಲ್ಲಿ 273 ಮನೆಗಳು ಭಾಗಶಃ ಹಾನಿಯಾಗಿದೆ, ಅವರಿಗೆ 11 ಲಕ್ಷ ರೂ. ಪರಿಹಾರ ನೀಡಲಾಗಿದೆ ಹಾಗೂ 785 ಎಕರೆ ಬೆಳೆಹಾನಿ ಆಗಿದ್ದು, 1681 ರೈತರಿಗೆ 1.14 ಕೋಟಿ ಪರಿಹಾರ ನೀಡಲಾಗಿದೆ ಎಂದರು. ಈ ವಾರದಲ್ಲಿ 2 ಮನೆಗಳಿಗೆ ಹಾನಿಯಾಗಿದ್ದು, ಸೋಮವಾರ ಆ ಕುಟುಂಬಗಳಿಗೆ ತಲಾ ರೂ 25 ಸಾವಿರ ಪರಿಹಾರ ನೀಡಲಾಗುವುದು ಎಂದರು.
ಉಕ್ಕಡಗಾತ್ರಿಯ ಕೆಲ ಪ್ರದೇಶ ಮುಳುಗಡೆ
ಹೊನ್ನಾಳಿ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ, ತಾಲೂಕಿನಲ್ಲಿ 500 ಎಕರೆ ಮೆಕ್ಕೆಜೋಳ ಹಾನಿಯಾಗಿದ್ದು, ಹೊಲಗಳಲ್ಲಿ ಬಹಳಷ್ಟು ನೀರು ನಿಂತಿದ್ದು ಹಾನಿ ಪ್ರಮಾಣ ಅಂದಾಜಿಸಲು ಒಂದೆರಡು ದಿನ ಹಿಡಿಯುತ್ತದೆ ಎಂದರು. ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ ಮಾಹಿತಿ ನೀಡಿ, ಅತಿಯಾದ ಮಳೆಯಿಂದ ಸಾರಥಿ-ಚಿಕ್ಕಬಿದರೆ ಸಂಪರ್ಕ ಕಡಿತಗೊಂಡಿದ್ದು, ಜನಸಂಚಾರ ಬಂದ್ ಮಾಡಲಾಗಿದೆ ಹಾಗೂ ಆ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹರಿಹರ ತಾಲ್ಲೂಕು ಉಕ್ಕಡಗಾತ್ರಿಯ ಕೆಲ ಪ್ರದೇಶ ಮುಳುಗಡೆಯಾಗಿದ್ದು, ಸ್ನಾನ ಘಟ್ಟದವರಗೆ ನೀರು ಬಂದಿರುವ ಮಾಹಿತಿ ಇದೆ ಎಂದಾಗ, ತಹಶೀಲ್ದಾರ್ ಪ್ರತಿಕ್ರಿಯಿಸಿ ಉಕ್ಕಡಗಾತ್ರಿ ಸಂಪರ್ಕ ರಸ್ತೆ ಬಂದ್ ಆಗಿದೆ ಆದರೆ ಯಾವುದೇ ತೊಂದರೆ ಇಲ್ಲ ಎಂದರು.
ಅಗಸ್ಟ್ ತಿಂಗಳ ಯೂರಿಯಾ ಕೋಟಾ ಬರಬೇಕಿದೆ
ದಾವಣಗೆರೆ ತಹಶೀಲ್ದಾರ್ ಗಿರೀಶ್ ಮಾಹಿತಿ ನೀಡಿ, ಆನಗೋಡು ಪ್ರದೇಶದಲ್ಲಿ 4.8 ಮಿ.ಮೀ ಮಳೆಯಾಗಿದ್ದು, ಈ ಹಿಂದೆ ಹಾನಿಗೊಳಗಾಗಿದ್ದ 42 ಮನೆಗಳಿಗೆ 1 ಕೋಟಿ 32 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದರು. ಇತ್ತಿಚಿಗೆ 2 ಮನೆಗಳಿಗೆ ಹಾನಿಯಾಗಿದೆ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಕೃಷಿ ಇಲಾಖೆ ಅಧಿಕಾರಿ ಮಾಹಿತಿ ನೀಡಿ ಸ್ವಲ್ಪ ಮಟ್ಟಿಗಿನ ಯೂರಿಯಾ ಕೊರತೆ ಇದೆ. ಆನಗೋಡು, ಅಣಜಿ, ಆಲೂರುಗಳ ಬೆಳೆಹಾನಿ ಪ್ರದೇಶಗಳ ಪಟ್ಟಿ ಮಾಡಲಾಗಿದೆ ಎಂದರು, ಜುಲೈ ತಿಂಗಳ ಕೋಟಾ ಯೂರಿಯಾ ಬಂದಿದ್ದು, ಅಗಸ್ಟ್ ತಿಂಗಳ ಕೋಟಾ ಬರಬೇಕಿದೆ ಎಂದರು.
ಕಂದಾಯ ಮತ್ತು ಕೃಷಿ ಇಲಾಖೆಯಿಂದ ಅಂದಾಜು ನಷ್ಟ ಸಿದ್ದ
ರಾಜನಹಳ್ಳಿ ಸಮೀಪ ಹೊಳೆಯಲ್ಲಿ ಮರದ ಮೇಲೆ ಸಿಲುಕಿರುವ ಕೋತಿಗಳನ್ನು ಸುರಕ್ಷಿತವಾಗಿ ದಂಡೆಗೆ ತಲುಪಿಸಲು ಸಂಸದರು ಸೂಚಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ಶಿವಪ್ರಸಾದ್, ಈಗಾಗಲೇ ಬೋಟ್ ಮೂಲಕ ಹಗ್ಗದ ಸಹಾಯದಿಂದ ಕೋತಿಗಳನ್ನು ರಕ್ಷಿಸುವ ಕಾರ್ಯ ಆರಂಭವಾಗಿದೆ ಎಂದರು.
ಚನ್ನಗಿರಿ ತಹಶೀಲ್ದಾರ್ ಪುಟ್ಟರಾಜು ಮಾಹಿತಿ ನೀಡಿ, ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಉಬ್ರಾಣಿ ಭಾಗದಲ್ಲಿ 13 ಮನೆಗಳಿಗೆ ಹಾನಿಯಾಗಿದೆ ಈ ಕುರಿತು ಪ್ರಸ್ತಾವನೆ ಸಿದ್ದಪಡಿಸಲಾಗಿದೆ. 58 ಎಕರೆ ಮಕ್ಕೆಜೋಳ ಹಾನಿಗೀಡಾಗಿದ್ದು, ಕಂದಾಯ ಮತ್ತು ಕೃಷಿ ಇಲಾಖೆಯಿಂದ ಅಂದಾಜು ನಷ್ಟ ಸಿದ್ದಪಡಿಸಲಾಗುತ್ತಿದೆ ಎಂದರು.
ಎಂಥದ್ದೇ ಪರಿಸ್ಥಿತಿ ಬಂದರೂ ನಿಭಾಯಿಸಲು ನಮ್ಮ ತಂಡ ಸಿದ್ಧ: ಡಿಸಿ
ಜಗಳೂರು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮಾಹಿತಿ ನೀಡಿ, ನಮ್ಮಲಿ ಯಾವುದೇ ಬೆಳೆ ಹಾನಿ ಆಗಿಲ್ಲ ಉತ್ತಮ ಮಳೆಯಾಗಿದೆ ಎಂದರು. ತಹಶೀಲ್ದಾರ್ ಮಾಹಿತಿ ನೀಡಿ, ಉತ್ತಮ ಮಳೆಯಿಂದ ಕೆರೆಗಳಿಗೆ ನೀರು ಬಂದಿದೆ, ಕೆಲ ಜಮೀನುಗಳು ಜಲಾವೃತವಾಗಿವೆ. ಆ ಜಮೀನಿನ ರೈತರ ಪಟ್ಟಿಮಾಡಿ ಕೃಷಿ ಇಲಾಖೆಗೆ ಸಲ್ಲಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಎಂಥದ್ದೇ ಪರಿಸ್ಥಿತಿ ಬಂದರೂ ನಿಭಾಯಿಸಲು ನಮ್ಮ ತಂಡ ಸಿದ್ಧವಿದೆ. ಪ್ರವಾಹ ಮತ್ತು ಕೋವಿಡ್ ನಿಂದ ಜನರಿಗೆ ಯಾವುದೇ ತೊಂದರೆಯಾಗದಂತೆ ತಮ್ಮ ಮಾರ್ಗದರ್ಶನದಂತೆ ನಮ್ಮ ತಂಡ ಕಾರ್ಯನಿರ್ವಹಿಸಲಿದೆ ಎಂದರು. ಸಭೆಯಲ್ಲಿ ಸಂಸದರ ಆಪ್ತ ಕಾರ್ಯದರ್ಶಿ ದೇವರಾಜ್ ಇದ್ದರು.