ಮನೆಗೆಲಸ ಮಾಡಿ ಮಗನ ಸಾಕುತ್ತಿದ್ದ ದಾವಣಗೆರೆಯ ಈಕೆ ಪಾಡು ಯಾರಿಗೂ ಬೇಡ
ದಾವಣಗೆರೆ, ಏಪ್ರಿಲ್ 11: ಭಾರತ ಲಾಕ್ ಡೌನ್ ಆದಾಗಿನಿಂದ ಬಡಜನರ ಪಾಡು ಹೇಳತೀರದಾಗಿದೆ. ಕೂಲಿ ಕಾರ್ಮಿಕರು, ನಿರ್ಗತಿಕರು, ವಲಸೆ ಬಂದಿರುವವರ ಕಥೆಯಂತೂ ಇನ್ನೂ ಕಷ್ಟಕರವಾಗಿದೆ.
ಹಾಗೆಯೇ ದಾವಣಗೆರೆಯ ಯಲ್ಲಮ್ಮ ನಗರದಲ್ಲಿರುವ ವೃದ್ಧೆ ಫಕೀರಮ್ಮ ಹಾಗೂ ಆತನ ಮಗ ರಾಜು ಕಳೆದ 15 ದಿನಗಳಿಂದ ಊಟ ಸಿಗದೆ ಪರದಾಡುವಂತಾಗಿದೆ. ರಾಜುಗೆ ಪಾರ್ಶ್ವವಾಯು ಇದ್ದು, ತಾಯಿ ಫಕೀರಮ್ಮ ಅವರೇ ಮನೆಗಳಿಗೆ ಕೆಲಸಕ್ಕೆ ಹೋಗಿ ಮಗನನ್ನು ನೋಡಿಕೊಳ್ಳುತ್ತಿದ್ದಳು. ಆದರೆ ಈಗ ಅದೂ ಸಾಧ್ಯವಾಗದೆ ಮನೆಯಲ್ಲಿ ಕೂರುವಂತಾಗಿದೆ. ಕೈಯಲ್ಲಿ ಕಾಸಿಲ್ಲದೆ, ತಿನ್ನಲು ಊಟವೂ ಇಲ್ಲದೇ ಕಷ್ಟ ಅನುಭವಿಸುತ್ತಿದ್ದಾರೆ.
ಸೈಟ್ ಮಾರಿ ಬಡವರಿಗೆ ಅನ್ನ ಕೊಡುತ್ತಿದ್ದಾರೆ ಕೋಲಾರದ ಈ ಸೋದರರು
ದುಸ್ಥಿತಿಯಲ್ಲಿರುವ ಮನೆಯಲ್ಲೇ ಈ ಅಮ್ಮ ಮಗ ಜೀವನ ಮಾಡುತ್ತಿದ್ದು, ಒಂದು ಹೊತ್ತಿನ ಊಟಕ್ಕೂ ಕಷ್ಟವಾಗಿಬಿಟ್ಟಿದೆ. ಒಂದೆಡೆ ಜಿಲ್ಲಾಡಳಿತ, ಯಾರೂ ಹಸಿವಿನಿಂದ ಇರಬಾರದು ಎಂದು ಶಪಥ ಮಾಡಿದೆ. ಇತ್ತ ಕಳೆದ 15 ದಿನಗಳಿಂದ ಸರಿಯಾಗಿ ಊಟವಿಲ್ಲದೆ ಈ ಇಬ್ಬರು ಹಸಿವಿನಿಂದ ನರಳುತ್ತಿದ್ದಾರೆ. ಜನ ಪ್ರತಿನಿಧಿಗಳೂ ಹೊರ ಬಾರದೆ ಮನೆಯಲ್ಲೇ ಕುಳಿತಿದ್ದಾರೆ.
ಈ ವೃದ್ಧೆ ಹಾಗೂ ಅನಾರೋಗ್ಯಕ್ಕೆ ಒಳಗಾಗಿ ಹಸಿವಿನಿಂದ ಕಂಗಾಲಾಗಿರುವ ಮಗನ ಪರಿಸ್ಥಿತಿ ನೋಡಿದರೆ ಎಂಥವರ ಕಣ್ಣಲ್ಲೂ ನೀರು ತುಂಬುತ್ತದೆ.