ಪೆಟ್ರೋಲ್ನಿಂದ ಬರುವ ಹಣ ಮೋದಿ ಖಾತೆಗೆ ಹೋಗುತ್ತೆ: ಕೆ.ಎಚ್. ಮುನಿಯಪ್ಪ
ದಾವಣಗೆರೆ, ಜೂನ್ 12: "ಪೆಟ್ರೋಲ್ ಹಾಗೂ ಡೀಸೆಲ್ನಿಂದ ಬರುವ ಹಣ ಪ್ರಧಾನಿ ನರೇಂದ್ರ ಮೋದಿ ಅಕೌಂಟ್ಗೆ ಹೋಗುತ್ತದೆ. ಮೋದಿಯವರದ್ದು ಬೇರೊಂದು ಅಕೌಂಟ್ ಇದೆ. ಹೆಚ್ಚಿನ ಹಣ ಆ ಅಕೌಂಟ್ಗೆ ಹೋಗುತ್ತದೆ. ಆದರೆ ಈ ಹಣ ಬಡವರಿಗಾಗಲಿ, ದೇಶದ ಜನರ ಕಲ್ಯಾಣಕ್ಕೆ ಬಳಕೆಯಾಗಲ್ಲ'' ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಆರೋಪಿಸಿದರು.
ದಾವಣಗೆರೆ ತಾಲ್ಲೂಕಿನ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಆನಗೋಡು ಬಳಿಯಿರುವ ಪೆಟ್ರೋಲ್ ಬಂಕ್ ಮುಂದೆ ತೈಲ ಬೆಲೆ ಏರಿಕೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ""ಹಿಂದೆ ನಾವು ಅಧಿಕಾರಿದಲ್ಲಿದ್ದಾಗ ಪೆಟ್ರೋಲ್ 50- 60 ರೂ. ಇತ್ತು. ಆಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರ 120 ರೂಪಾಯಿ ಇತ್ತು. ಆದರೆ, ಈಗ 50 ರೂ. ಸಿಗುತ್ತದೆ. ಇಲ್ಲಿ ಮಾತ್ರ ಬೆಲೆ ಡಬಲ್ ಆಗಿದೆ. ಇದರಿಂದ ಮೋದಿ ಜನಸಾಮಾನ್ಯರ ಮೇಲೆ ಹೊರೆ ಹಾಕಿದ್ದಾರೆ. ಮೋದಿಯವರು ಈ ದೇಶದ ಬಡ ಜನರಿಗೆ ದೊಡ್ಡ ಹೊರೆಯಾಗಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಮಧ್ಯಮ ಕುಟುಂಬದ ಜನರ ಜೀವನ ಅಸ್ತವ್ಯಸ್ತವಾಗಿದ್ದು, ಇಂತಹ ಲಾಕ್ಡೌನ್ ಸಮಯದಲ್ಲಿ ತೈಲ ಬೆಲೆ ದರವನ್ನು 100ರ ಗಡಿ ದಾಟಿಸಿದ್ದು, ವಾಹನ ಸವಾರರಿಗೆ ತುಂಬಾ ದೊಡ್ಡ ಸಮಸ್ಯೆಯಾಗಿದೆ. ಈ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ತೈಲ ಬೆಲೆಗಳು ಹಾಗೂ ದಿನ ಬಳಕೆಯ ದರಗಳನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.
ಸರ್ಕಾರ ಪತನದಂಚಿನಲ್ಲಿ
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ""ಸಿಎಂ ಬಿ.ಎಸ್ ಯಡಿಯೂರಪ್ಪರನ್ನು ಬಹುತೇಕ ಕೆಳಗಿಳಿಸುವ ಪ್ರಯತ್ನಕ್ಕೆ ಕೈಹಾಕಿರುವುದರಿಂದ ರಾಜ್ಯ ಸರ್ಕಾರ ಪತನದ ಅಂಚಿನಲ್ಲಿದೆ. ಜನರು ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವಾಗ ರಾಜಕೀಯ ಒಳಜಗಳ ಒಳ್ಳೆಯ ಬೆಳವಣಿಗೆ ಅಲ್ಲ. ರಾಜಕೀಯ ಏನೇ ಇರಲಿ. ವಿಪಕ್ಷವಾಗಿ ನಾವು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದೇವೆ. ಕೊರೊನಾದಿಂದ ಸಾವು-ನೋವುಗಳು ಸಂಭವಿಸುತ್ತಿವೆ. ರಾಜಕಾರಣ ಮಾಡುತ್ತಾ ಒಳಜಗಳದಲ್ಲಿ ನಿರತರಾದರೆ ದೇಶಕ್ಕೆ ಏನು ಸಂದೇಶ ನೀಡಿದಂತಾಗುತ್ತದೆ'' ಎಂದು ಪ್ರಶ್ನಿಸಿದರು.
Recommended Video
ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಹಾಕಿಸಿಕೊಳ್ಳಬೇಡಿ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ನ ಯಾವ ನಾಯಕರು ಹೇಳಿಲ್ಲ. ರಾಜ್ಯ ಸರ್ಕಾರ ಲಸಿಕೆ ಸಮರ್ಪಕವಾಗಿ ನೀಡುತ್ತಿಲ್ಲ ಎಂದಷ್ಟೇ ಹೇಳಿದ್ದೇವೆ. ಲಸಿಕೆ ನೀಡಿಕೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಮನುಷ್ಯನನ್ನು ಬದುಕಿಸಲು ವ್ಯಾಕ್ಸಿನ್ ನೀಡುತ್ತೇವೆ ಎಂದರೆ ಯಾರು ಬೇಡ ಎನ್ನುತ್ತಾರೆ. ಸುಳ್ಳು ಸುದ್ದಿ ಸರಿಯಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಆರೋಪಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದರು.