ದುಡ್ಡಿದ್ದವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ: ಕೆ.ಎಸ್. ಈಶ್ವರಪ್ಪ
ದಾವಣಗೆರೆ, ನವೆಂಬರ್ 27: ವಿಧಾನ ಪರಿಷತ್ ಚುನಾವಣೆಯಲ್ಲಿ ಕಣಕ್ಕಿಳಿಸಿರುವ ಅಭ್ಯರ್ಥಿಗಳಿಗೂ ಹಾಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧನೇ ಇಲ್ಲ. ದುಡ್ಡಿನ ಲೆಕ್ಕದ ಆಧಾರದ ಮೇಲೆ ಕಾಂಗ್ರೆಸ್ನವರು ಅಭ್ಯರ್ಥಿಗಳ ಆಯ್ಕೆ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.
ಅನೇಕ ಕಡೆ ಆ ಪಕ್ಷಕ್ಕೂ ಹಾಗೂ ಅಭ್ಯರ್ಥಿಗಳಿಗೂ ಯಾವುದೇ ಸಂಬಂಧನೇ ಇಲ್ಲ. ಇದನ್ನು ನೋಡಿದರೆ ಕಾಂಗ್ರೆಸ್ ಯಾವ ರೀತಿ ಚುನಾವಣೆ ಎದುರಿಸುತ್ತದೆ ಎಂಬುದು ಗೊತ್ತಾಗುತ್ತದೆ. ಮತದಾರರು ಈ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜಕಾರಣದ ಗಂಧ ಗಾಳಿ ಗೊತ್ತಿಲ್ಲದವರು ಕಾಂಗ್ರೆಸ್ನ ಅಭ್ಯರ್ಥಿಗಳಾಗಿದ್ದಾರೆ. ಗ್ರಾಮೀಣ ಪ್ರದೇಶದ ಸಮಸ್ಯೆಯ ಅರಿವೇ ಅವರಿಗೆ ಇಲ್ಲ. ಕಾಂಗ್ರೆಸ್ ನಾಯಕರು ಈ ಬಗ್ಗೆ ಯೋಚಿಸಬೇಕು. ರಾಜ್ಯದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ನಗರಸಭೆ ಸೇರಿದಂತೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಕಾಂಗ್ರೆಸ್ ಸೋಲಿಸಿ ಬಿಜೆಪಿ ಗೆಲ್ಲಿಸುವಂತೆ ಮನವಿ ಮಾಡಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತದೆ ಎಂಬ ವಿಶ್ವಾಸ ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಹುತೇಕ ಕಡೆ ಕಾಂಗ್ರೆಸ್ ವಿರುದ್ಧ ಜೆಡಿಎಸ್ನವರೇ ಗೆದ್ದಿದ್ದಾರೆ. ಕಾಂಗ್ರೆಸ್ ಬೆಂಬಲಿಸಲು ಜೆಡಿಎಸ್ಗೆ ಇಷ್ಟವಿಲ್ಲ. ಹಾಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತಾರೆ ಎಂದುಕೊಂಡಿದ್ದೇವೆ ಎಂದು ಈಶ್ವರಪ್ಪ ಹೇಳಿದರು.
ಈಗಾಗಲೇ ಕಾಂಗ್ರೆಸ್ನ್ನು ರಾಜ್ಯದಲ್ಲಿ ಜನರು ಹೊರ ಹಾಕಿದ್ದಾರೆ. ಬಿಜೆಪಿಯನ್ನು ಜೆಡಿಎಸ್ನವರು ಬೆಂಬಲಿಸುವ ವಿಶ್ವಾಸವನ್ನು ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ. ನೋಡೋಣ, ಜೆಡಿಎಸ್ನವರು ಏನು ಮಾಡುತ್ತಾರೆ ಎಂದು ಕಾದು ನೋಡೋಣ. 25 ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಕಣಕ್ಕಿಳಿದಿದೆ. ಉಳಿದೆಡೆ ಯಾರಿಗೆ ಬೆಂಬಲಿಸುತ್ತಾರೆ ಎಂಬುದನ್ನು ಆ ಪಕ್ಷದ ನಾಯಕರು ನಿರ್ಧಾರ ಮಾಡಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇನ್ನು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಕ್ಷದ ನಾಯಕರು ತೀರ್ಮಾನಿಸುತ್ತಾರೆ ಎಂದಷ್ಟೇ ಈಶ್ವರಪ್ಪ ಹೇಳಿದರು.
ಅಧಿಕಾರಿಗಳ ಭ್ರಷ್ಟಾಚಾರ, ಲಂಚ ಇಂದು ನಿನ್ನೆಯದಲ್ಲ. ಇದು ಕಾಂಗ್ರೆಸ್ ಕಾಲದ ಬಳುವಳಿ. ಅಧಿಕಾರಿಗಳಿಗೆ ಭಯ ಇಲ್ಲದ ಕಾರಣ ಇಷ್ಟೊಂದು ಅಕ್ರಮ ಹಣ ಸಂಪಾದನೆ ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಿಗಿ ಮಾಡಿದ್ದೇವೆ. ಎಸಿಬಿ ದಾಳಿ ನಡೆಸಿದಾಗ ಭ್ರಷ್ಟಾಚಾರದ ಹಣ, ಬಂಗಾರ ಸಿಗುತ್ತಿದೆ.
ಎಸಿಬಿ ಇನ್ನು ಬಿಗಿಯಾಗಿ ಕೆಲಸ ಮಾಡಲು ಸಂಪೂರ್ಣ ಅಧಿಕಾರ ನೀಡಬೇಕಿದೆ. ಭ್ರಷ್ಟಾಚಾರ ಮಾಡಿದವರು ಹಾಗೂ ಲಂಚ ಪಡೆದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ರಾಜ್ಯಕ್ಕೆ ಒಳಿತಾಗುತ್ತದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
Recommended Video