ರೇಣುಕಾಚಾರ್ಯ ಸುಮಾರ ಮನುಷ್ಯ: ಶಾಮನೂರು ಶಿವಶಂಕರಪ್ಪ
ದಾವಣಗೆರೆ, ಏಪ್ರಿಲ್ 08: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯರ ಮಾತಿಗೆ ಮಾತು ಕೊಡಬಾರದು. ಆತ ಸುಮಾರ(ಕೆಟ್ಟ) ಮನುಷ್ಯ ಎಂದು ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ.
ಕೊರೊನಾ ಸೋಂಕು ಹರಡಿಸುವ ತಬ್ಲೀಘಿಗಳನ್ನು ಗುಂಡಿಟ್ಟು ಕೊಲ್ಲಬೇಕು ಎಂದು ನಿನ್ನೆ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಹೇಳಿಕೆ ಕೊಟ್ಟಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದಾವಣಗೆರೆ ಶಾಸಕ ಶಾಮನೂರ ಶಿವಶಂಕರಪ್ಪ , ಆತನದ್ದು ದೊಡ್ಡ ಕಥೆಯಿದೆ. ಆತನ ಗುಣ ಸುಮಾರು, ಹಾಗಾಗಿ ಇಂತಹ ಹೇಳಿಕೆ ನೀಡುತ್ತಾನೆ. ಆ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದರು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಜನರು ಜನಕ್ಕೆ ಸಹಾಯ ಮಾಡಿ. ಯಾರೇ ತೊಂದರೆ ಅನುಭವಿಸಿದರು ಕೂಡಾ, ಅವರ ಕಷ್ಟಕ್ಕೆ ಸ್ಥಿತಿವಂತರು ಮುಂದೆ ಬರಬೇಕು ಎಂದು ಇದೇ ವೇಳೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಲಾಕ್ ಡೌನ್ ಇದ್ದರೂ ಸಹ ಆಹಾರ ಕಿಟ್ ವಿತರಣೆ ಮಾಡುತ್ತಿದ್ದ ದಾವಣಗೆರೆಯ ವಿಠ್ಠಲ ಮಂದಿರದ ರಸ್ತೆಯಲ್ಲಿ ನೂರಾರು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಲಾಕ್ ಡೌನ್ ಆದೇಶ ಉಲ್ಲಂಘಿಸಿರುವ ಘಟನೆ ಬುಧವಾರ ನಡೆದಿದೆ.
ಹುಸೇನಿಯಾ ಫೌಂಡೇಷನ್ ವತಿಯಿಂದ ಇಂದು ಕೊರೊನಾ ವಾರಿಯರ್ಸ್ ಗೆ ಸನ್ಮಾನ ಹಾಗೂ ಬಡ ಜನರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಶಾಸಕ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದ್ದರು.
ಹುಸೇನಿಯಾ ಫೌಂಡೇಷನ್ ನ ಕಾರ್ಯಕರ್ತರು ಲಾಕ್ ಡೌನ್ ಉಲ್ಲಂಘಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಿಟ್ ವಿತರಣೆ ಮಾಡುತ್ತಿದ್ದರು.
ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದ್ದರೂ ಕೂಡ ಆದೇಶವನ್ನು ಬ್ರೇಕ್ ಮಾಡಿದ ಜನರು ಗುಂಪು ಸೇರಿದ್ದರು. ಹುಸೇನಿಯಾ ಫೌಂಡೇಷನ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕಿಟ್ ವಿತರಿಸಿ ಸಹಾಯ ಹಸ್ತ ಚಾಚಿರುವುದು ಸಂತಸದ ಸಂಗತಿಯಾದರೂ ಸಹ ಸಾಮಾಜಿಕ ಅಂತರ ಕಾಯ್ದುಕೊಂಡು ಕಿಟ್ ವಿತರಿಸಿರುವುದು ಸಾರ್ವಜನಿಕ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.