ಈ ಐವರಲ್ಲಿ ಒಬ್ಬರು ಸಿಎಂ ಆಗುವ ಸಾಧ್ಯತೆ: ಎಸ್.ಎ. ರವೀಂದ್ರನಾಥ್ ಭವಿಷ್ಯ
ದಾವಣಗೆರೆ, ಜುಲೈ 26: "ರಾಷ್ಟ್ರೀಯ ಬಿಜೆಪಿ ನಾಯಕರಿಗೆ ಕೊಟ್ಟ ಮಾತಿನಂತೆ ಬಿ.ಎಸ್. ಯಡಿಯೂರಪ್ಪ ನಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಶಿಸ್ತಿಗೆ ಅಭಿನಂದನೆ ಸಲ್ಲಿಸುತ್ತೇನೆ,'' ಎಂದು ಬಿಜೆಪಿ ಹಿರಿಯ ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದ್ದಾರೆ.
ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಎಸ್.ಎ. ರವೀಂದ್ರನಾಥ್, "ಬಿಜೆಪಿ ಶಿಸ್ತಿನ ಪಾರ್ಟಿ ಎಂಬುದನ್ನು ತೋರಿಸಿದ್ದಾರೆ. ಹೊಸ ಸಿಎಂ ಯಾರೇ ಆದರೂ ಬೆಂಬಲ ನೀಡುತ್ತೇವೆ,'' ಎಂದು ಹೇಳಿದರು.
"ಎರಡು ವರ್ಷ ಸಿಎಂ ಆಗಿರುತ್ತೇನೆ ಎಂದು ವರಿಷ್ಠರ ಬಳಿ ಮೊದಲೇ ಬಿ.ಎಸ್. ಯಡಿಯೂರಪ್ಪ ಒಪ್ಪಿಕೊಂಡಿದ್ದರು. ಬಿಜೆಪಿ ಅಂದರೆ ಲಿಂಗಾಯತರ ಪಾರ್ಟಿ. ಇದರಲ್ಲಿ ಯಾವುದೇ ಗೊಂದಲವಿಲ್ಲ. ರಾಜ್ಯದಲ್ಲಿ ಐವರು ಹಿರಿಯರಿದ್ದಾರೆ. ಪ್ರಹ್ಲಾದ್ ಜೋಷಿ, ಮುರುಗೇಶ್ ನಿರಾಣಿ, ಸಂತೋಷ್ ಜೀ, ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ ಸಿಎಂ ರೇಸಿನಲ್ಲಿದ್ದಾರೆ,'' ಎಂದು ತಿಳಿಸಿದರು.
"ಇವರಲ್ಲಿ ಅಥವಾ ಇವರನ್ನು ಬಿಟ್ಟು ಬೇರೆಯವರೂ ಸಿಎಂ ಆಗಬಹುದು. ನಾನು 5 ಬಾರಿ ಸೋತು, 5 ಬಾರಿ ಗೆದ್ದಿದ್ದೇನೆ. ನಮಗೂ ಸಿನಿಯಾರಿಟಿ ಇದೆ. ಸಚಿವ ಸ್ಥಾನ ನಿಭಾಯಿಸುವ ಶಕ್ತಿ ಇದೆ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗಲೂ ಲಿಂಗಾಯತರು ಬಿಜೆಪಿಗೆ ಬೆಂಬಲಿಸಿದರು. ಕೆಜೆಪಿಯಿಂದ 6 ಶಾಸಕರು ಮಾತ್ರ ಗೆಲುವು ಸಾಧಿಸಿದರು. ಆಗಲೂ ಲಿಂಗಾಯತರೂ ಬಿಜೆಪಿ ಜತೆಗಿದ್ದರು. ಈಗಲೂ ಈ ಸಮುದಾಯ ಬಿಜೆಪಿ ಜೊತೆಗಿದೆ,'' ಎಂದರು.
Recommended Video
ಇದರಿಂದ ಬಿಜೆಪಿ ಸಂಘಟನೆಗೆ ಯಾವುದೇ ಸಮಸ್ಯೆ ಆಗಲ್ಲ. ಯಡಿಯೂರಪ್ಪ ಬೆಂಬಲಿಸಿದ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ನೂರಾರು ಸ್ವಾಮೀಜಿಗಳಿಗೆ ಅಪಮಾನ ಮಾಡಿದಂತೆ ಆಗಲ್ವಾ? ಎಂಬ ಪ್ರಶ್ನೆಗೆ, "ಹಣ ಇದ್ದವರು ಅಧಿಕಾರದಲ್ಲಿ ಇದ್ದವರನ್ನು ಬೆಂಬಲಿಸುತ್ತಾರೆ. ಹೊಸ ಸಿಎಂ ಬಂದರೆ ಅವರಿಗೂ ಹಾರ ಹಾಕಿ ಸ್ವಾಗತಿಸುತ್ತಾರೆ,'' ಎಂದು ಹೇಳುವ ಮೂಲಕ ಪರೋಕ್ಷವಾಗಿ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಟಾಂಗ್ ನೀಡಿದರು.