ಶಾಸಕ ಎಂ.ಪಿ ರೇಣುಕಾಚಾರ್ಯ ಸಮಯಪ್ರಜ್ಞೆ: ನಿಟ್ಟುಸಿರುಬಿಟ್ಟ 45 ಸೋಂಕಿತರು!
ದಾವಣಗೆರೆ, ಮೇ 18: ದಾವಣಗೆರೆ ಜಿಲ್ಲೆ ಹೊನ್ನಾಳಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಮತ್ತೆ ಮತ್ತೆ ಕಾಡಲಾರಂಭಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ರಾತ್ರೋರಾತ್ರಿ ಪ್ರಾಣವಾಯು ಖಾಲಿಯಾದ ಹಿನ್ನೆಲೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.
Recommended Video
ಇಂದು(ಮಂಗಳವಾರ) ಸಹ ಮತ್ತೆ ಆಮ್ಲಜನಕ ಕೊರತೆ ಸಮಸ್ಯೆ ತಲೆದೋರಿತ್ತು. ಶಾಸಕ ಎಂ.ಪಿ ರೇಣುಕಾಚಾರ್ಯರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದಂತಾಗಿದೆ.
ತಾಲೂಕು ಪಂಚಾಯಿತಿಯಲ್ಲಿ ಹೊನ್ನಾಳಿಯ ಅಧಿಕಾರಿಗಳ ಸಭೆಗೆ ಶಾಸಕ ರೇಣುಕಾಚಾರ್ಯ ಅವರು ಆಗಮಿಸುತ್ತಿದ್ದಂತೆ, ಆಸ್ಪತ್ರೆಯಿಂದ ಆಮ್ಲಜನಕ ಖಾಲಿಯಾಗಿದೆ ಎಂಬ ಮಾಹಿತಿ ಬಂದಿದೆ. ಸಭೆ ಮೊಟಕು ಮಾಡಿ ಕೂಡಲೇ ಹರಿಹರದ ದಿ ಸದರನ್ ಗ್ಯಾಸ್ ಸಂಸ್ಥೆಗೆ ಹೊರಟರು.
45 ಜನರು ಆಕ್ಸಿಜನ್ ಬೆಡ್ ನಲ್ಲಿದ್ದು, ಕೇವಲ ಒಂದೂವರೆ ಗಂಟೆಗೆ ಆಗುವಷ್ಟು ಮಾತ್ರ ಆಕ್ಸಿಜನ್ ಸಿಲಿಂಡರ್ ಇತ್ತು. ಹೇಗಾದರೂ ಮಾಡಿ ಜನರ ಪ್ರಾಣ ಉಳಿಸಲೇಬೇಕೆಂದು ಪಣ ತೊಟ್ಟ ಶಾಸಕರು ದಿ ಸದರನ್ ಗ್ಯಾಸ್ ಸಂಸ್ಥೆಗೆ ಬರುವ ಮಾರ್ಗ ಮಧ್ಯೆ ಜಗಳೂರಿಗೆ ಆಮ್ಲಜನಕ ಸಿಲಿಂಡರ್ ಕೊಂಡೊಯ್ಯಲಾಗುತ್ತಿತ್ತು.
ಹೊನ್ನಾಳಿಯಲ್ಲಿ ಪರಿಸ್ಥಿತಿ ಗಂಭೀರವಾಗಿದ್ದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಿಲಿಂಡರ್ ಗಳನ್ನು ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಪೊಲೀಸ್ ಎಸ್ಕಾರ್ಟ್ ಮೂಲಕ ಕಳುಹಿಸಿಕೊಡಲಾಯಿತು. ಒಟ್ಟಿನಲ್ಲಿ ಹೊನ್ನಾಳಿಯಲ್ಲಿ ಪದೇ ಪದೇ ಈ ಸಮಸ್ಯೆ ಉಂಟಾಗುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಆಕ್ಸಿಜನ್ ಸಿಕ್ಕ ಕಾರಣ ರೋಗಿಗಳು ನಿಟ್ಟುಸಿರು ಬಿಟ್ಟಿದ್ದಾರೆ.