ಮೊಮ್ಮಗನ ಕಾರು ಅಪಘಾತದ ಬಗ್ಗೆ ಸ್ಪಷ್ಟನೆ ಕೊಟ್ಟ ಶಾಸಕ ರವೀಂದ್ರನಾಥ
ದಾವಣಗೆರೆ, ಫೆಬ್ರವರಿ 24: ದಾವಣಗೆರೆ ಹೊರವಲಯದ ಶಾಮನೂರಿನಲ್ಲಿ ನಿನ್ನೆ ತಡ ರಾತ್ರಿ ಶಾಸಕ ಎಸ್.ಎ. ರವೀಂದ್ರನಾಥ ಅವರ ಮೊಮ್ಮಗನ ಕಾರು ಅಪಘಾತವಾಗಿದ್ದು, ಈ ಕುರಿತು ಶಾಸಕರು ಸ್ಪಷ್ಟನೆ ನೀಡಿದ್ದಾರೆ.
ಅವರ ಮೊಮ್ಮಗ ಅರುಣ್ ಕುಮಾರ್ ಇನೋವಾ ಕಾರನ್ನು ಅತಿ ವೇಗವಾಗಿ ಓಡಿಸಿ ಅಪಘಾತ ಮಾಡಿರುವುದಾಗಿ ಸ್ಥಳೀಯರು ತಿಳಿಸಿದ್ದರು. ಜೊತೆಗೆ ಅವರು ಮದ್ಯಪಾನ ಮಾಡಿರುವುದಾಗಿಯೂ ಆರೋಪಿಸಿದ್ದರು.
ಶಾಮನೂರಿನಲ್ಲಿ ಅಪಘಾತ ಮಾಡಿದ ಶಾಸಕರ ಮೊಮ್ಮಗ
ಇದಕ್ಕೆ ಉತ್ತರಿಸಿರುವ ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರವೀಂದ್ರನಾಥ್, "ಅಪಘಾತವಾದ ಕಾರು ನನ್ನದೇ. ಕಾರಿನ ಟೈರ್ ಸಿಡಿದ ಕಾರಣ ಅಪಘಾತವಾಗಿದೆ. ನನ್ನ ಮೊಮ್ಮಗನ ಮದುವೆ ಇದ್ದ ಕಾರಣ ಸ್ನೇಹಿತರನ್ನು ಕರೆಯಲು ಹೋಗಿದ್ದರು. ಆ ಸಂದರ್ಭ ಈ ಅವಘಡ ಸಂಭವಿಸಿದೆ. ಅಲ್ಲದೆ ಮಾರ್ವಾಡಿ ಸಮಾಜದ ಕಾರ್ಯಕ್ರಮಕ್ಕೆ ಹೋಗಿದ್ದರು. ಮನೆಗೆ ವಾಪಸ್ಸು ಬರುವಾಗ ಹೀಗೆ ಆಗಿದೆ" ಎಂದು ಸ್ಪಷ್ಟನೆ ನೀಡಿದ್ದಾರೆ.
"ಮಾರ್ವಾಡಿ ಸಮಾಜದ ಕಾರ್ಯಕ್ರಮದಲ್ಲಿ ಮದ್ಯ ಹಾಗೂ ಮಾಂಸ ಇರುವುದಿಲ್ಲ. ಅಪಘಾತವಾಗಿದ್ದರಿಂದ ಮದ್ಯಪಾನ ಮಾಡಿದ್ದಾರೆ ಎಂದು ಹೇಳುತ್ತಾರೆ" ಎಂದು ಹೇಳಿದ್ದಾರೆ. ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರವೀಂದ್ರನಾಥ್ ಅವರ ಪುತ್ರಿ ಪಾಲಿಕೆ ಸದಸ್ಯೆ ವೀಣಾ ನಂಜಪ್ಪ ಅವರ ಮಗ ಅರುಣ್ ಕುಮಾರ್ ಅವರ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮನೆಯೊಂದರ ಬಳಿ ನಿಂತಿತ್ತು.