ಕರ್ನಾಟಕ ಬಂದ್: ದಾವಣಗೆರೆಯಲ್ಲಿ ಮಿಶ್ರ ಪ್ರತಿಕ್ರಿಯೆ
ದಾವಣಗೆರೆ, ಡಿಸೆಂಬರ್ 5: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಶನಿವಾರ ಕನ್ನಡಪರ ಸಂಘಟನೆಗಳಿಂದ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ದಾವಣಗೆರೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಂದ್ ಹಿನ್ನೆಲೆಯಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ, ಡಾ.ರಾಜ್ ಅಭಿಮಾನಿ ಸಂಘ, ಅಖಂಡ ಕರ್ನಾಟಕ ರಕ್ಷಣ ವೇದಿಕೆ, ಕರವೇ ನಾರಾಯಣಗೌಡ ಬಣ, ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣ, ಜಯ ಕರ್ನಾಟಕ, ಜೈ ಕಾರುನಾಡ ವೇದಿಕೆ, ಗಜ ಸೇನೆ, ಸುವರ್ಣ ಕರ್ನಾಟಕ ವೇದಿಕೆ, ಕರವೇ ಸ್ವಾಭಿಮಾನಿ ಬಣ, ಕರ್ನಾಟಕ ಕದಂಬ ಸೇನೆ, ಕನ್ನಡ ನಾಡು ಸಮರ ಸೇನೆ, ದಾವಣಗೆರೆ ಕಟ್ಟಡ ಕಾರ್ಮಿಕರ ಅಸಂಘಟಿತ ವೇದಿಕೆ, ವಿಷ್ಣು ಸೇನಾ ಸಮಿತಿ, ಸುವರ್ಣ ಕರ್ನಾಟಕ ಹಿತ ರಕ್ಷಣಾ ವೇದಿಕೆ ಸೇರಿದಂತೆ ಒಟ್ಟು 27ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು.
ಕರ್ನಾಟಕ ಬಂದ್: ಚಿತ್ರದುರ್ಗದಲ್ಲಿ ಅರೆಬೆತ್ತಲೆ ಪ್ರತಿಭಟನೆ
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪ್ರತಿಕೃತಿ ದಹಿಸಿ, ರಾಜ್ಯ ಸರ್ಕಾರದ ನಡೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕನ್ನಡಪರ ಹೋರಾಟಗಾರರು, ಎಸಿ ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿಗಳ ಮುಖಾಂತರ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರದಲ್ಲಿ ಕೆಲ ಅಂಗಡಿ, ಮುಗ್ಗಟ್ಟುಗಳನ್ನು ಬಂದ್ ಮಾಡಿ ಕೆಲ ವ್ಯಾಪಾರಸ್ಥರು ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲ ವ್ಯಾಪಾರಸ್ಥರು ಎಂದಿನಂತೆ ವ್ಯಾಪಾರ ನಡೆಸುತ್ತಿದ್ದ ದೃಶ್ಯ ನಗರಾದ್ಯಂತ ಸಾಮಾನ್ಯವಾಗಿತ್ತು. ಬಂದ್ಗೆ ಬೆಂಬಲ ವ್ಯಕ್ತಪಡಿಸಿ ವಿನಾಯಕ ಮತ್ತು ಮೈಲಾರಲಿಂಗೇಶ್ವರ ನಗರ ಸಾರಿಗೆಗಳು ಸಂಚಾರ ಸ್ಥಗಿತಗೊಳಿಸಿದ್ದರೆ, ಸರ್ಕಾರಿ ಸಿಟಿ ಬಸ್ ಗಳು, ಆಟೋ ಸಂಚಾರ ಎಂದಿನಂತೆಯೇ ಇತ್ತು.
ಪೆಟ್ರೋಲ್ ಬಂಕ್ಗಳು, ಸಿನಿಮಾ ಮಂದಿರ, ಬ್ಯಾಂಕ್ ಗಳ ಸೇವೆ ನಿತ್ಯದಂತೆಯೇ ಮುಂದುವರೆದಿತ್ತು. ಹೀಗಾಗಿ ಯಾವುದೇ ಸೇವೆಯಲ್ಲಿ ವ್ಯತ್ಯಯವಾಗದೇ ಜನ ಜೀವನ ಸಹಜ ಸ್ಥಿತಿಯಲ್ಲಿ ಮುಂದುವರೆಯಿತು.