ದಾವಣಗೆರೆ; ಕಾರಿನ ಗಾಜು ಒಡೆದು ವರ್ತಕನ ನಗದು, ಚಿನ್ನಾಭರಣ ಲೂಟಿ
ದಾವಣಗೆರೆ, ನವೆಂಬರ್ 5: ದುಷ್ಕರ್ಮಿಗಳು ಕಾರಿನ ಗಾಜು ಒಡೆದು 2.50 ಲಕ್ಷ ಹಾಗೂ 150 ಗ್ರಾಂ ಚಿನ್ನದ ಆಭರಣವನ್ನು ದೋಚಿ ಪರಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಮಲ್ಲಿಕಾರ್ಜುನ್ ಎಂಬುವರು ನಗರದ ಗುಂಡಿ ಮಹಾದೇವಪ್ಪನವರ ವೃತ್ತದ ಬಳಿ ಕಾರು ನಿಲ್ಲಿಸಿ ತಿಂಡಿ ತಿನ್ನಲು ಹೋಗಿದ್ದಾರೆ. ತಿಂಡಿ ತಿಂದು ಬರುವಷ್ಟರಲ್ಲಿ ಕಾರಿನ ಹಿಂಬದಿಯ ಗಾಜು ಒಡೆದು ನಗದು ಹಾಗೂ ಚಿನ್ನಾಭರಣವನ್ನು ದೋಚಿದ್ದಾರೆ. ಬ್ಯಾಡಗಿ ಪಟ್ಟಣದ ಮಲ್ಲಿಕಾರ್ಜುನ್ ಚಿನ್ನ, ಹಣ ಕಳೆದುಕೊಂಡವರು. ಚಿನ್ನಾಭರಣ ವರ್ತಕರಾದ ಮಲ್ಲಿಕಾರ್ಜುನ್ ನಗರದ ಚೌಕಿಪೇಟೆಯ ಮಳಿಗೆಯೊಂದರಲ್ಲಿ ಚಿನ್ನಾಭರಣವನ್ನು ಖರೀದಿಸಿ ವಾಪಸ್ ತೆರಳುವ ವೇಳೆ ಈ ಘಟನೆ ನಡೆದಿದೆ.
ನಟಿ, ಮಾಜಿ ಸಚಿವೆ ಉಮಾಶ್ರೀ ಮನೆ ಕಳ್ಳತನ: ಕಳ್ಳರಿಗೆ ಬಲೆ ಬೀಸಿದ ಪೊಲೀಸರು
ಮಲ್ಲಿಕಾರ್ಜುನ್ ಬ್ಯಾಡಗಿಯಲ್ಲಿ ಚಿನ್ನಾಭರಣ ವರ್ತಕರಾಗಿದ್ದು, ದಾವಣಗೆರೆಯ ಚೌಕಿಪೇಟೆಗೆ ನಿಯಮಿತವಾಗಿ ಬಂದು ಚಿನ್ನಾಭರಣ ಖರೀದಿಸಿ ಹೋಗುತ್ತಿದ್ದರು. ಇದನ್ನು ಗಮನಿಸಿಯೇ ಈ ಕೃತ್ಯ ಎಸಗಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಎಸ್ ಪಿ ಎಂ.ರಾಜೀವ್ ಹಾಗೂ ಎಸ್ಐ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Recommended Video
ವರ್ತಕರು ಬೆಳಿಗ್ಗೆಯಿಂದ ಸಂಜೆಯವರೆಗೂ ಯಾರನ್ನು ಭೇಟಿ ಮಾಡಿದ್ದರು ಎಂಬುದನ್ನು ಪರಿಶೀಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಎಎಸ್ ಪಿ ಎಂ.ರಾಜೀವ್ ತಿಳಿಸಿದ್ದಾರೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.