ನಾಲ್ಕು ಎಕರೆ ಮೆಕ್ಕೆಜೋಳ ಬೆಳೆಗೆ ಕಳೆನಾಶಕ ಸಿಂಪಡಿಸಿದ ಕಿಡಿಗೇಡಿಗಳು
ದಾವಣಗೆರೆ, ಜುಲೈ 22: ಮಳೆಯಿಲ್ಲದಿದ್ದರೂ ಕಷ್ಟಪಟ್ಟು ಸಾಲ ಮಾಡಿ ಬೆಳೆದ ಮೆಕ್ಕೆಜೋಳದ ಫಸಲಿಗೆ ದುಷ್ಕರ್ಮಿಗಳು ಕಳೆ ನಾಶಕ ಸಿಂಪಡಿಸಿ ನಾಶಪಡಿಸಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಟಿ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಟಿ ಗೊಲ್ಲರಹಟ್ಟಿ ಗ್ರಾಮದ ಯರ್ರಪ್ಪ ಎಂಬುವರು ನಾಲ್ಕು ಎಕರೆಯಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಬೆಳೆ ಚೆನ್ನಾಗಿ ನೆಲವೂರಿತ್ತು. ಇದನ್ನು ನೋಡಿ ಸಹಿಸಲಾಗದ ದುಷ್ಕರ್ಮಿಗಳು ರಾತ್ರೋರಾತ್ರಿ ಬೆಳೆಗೆ ಕಳೆ ನಾಶಕ ಔಷಧಿ ಸಿಂಪಡಿಸಿದ್ದಾರೆ.
ಮಕ್ಕಳ ಎಡವಟ್ಟಿಗೆ ಲಕ್ಷಾಂತರ ರೂಪಾಯಿಯ ತಂಬಾಕು ಬೆಳೆ ನಾಶ
ಔಷಧಿ ಸಿಂಪಡಿಸಿದ ನಂತರ ಬೆಳೆ ನೆಲಕಚ್ಚುತ್ತಿದ್ದು, ಕಷ್ಟಪಟ್ಟು ಬೆಳೆದ ಬೆಳೆ ನಾಶವಾಗುತ್ತಿದೆ ಎಂದು ಬಡ ರೈತ ಅಳಲು ತೋಡಿಕೊಂಡಿದ್ದಾರೆ.
ಮೆಕ್ಕೆಜೋಳ ಹುಲ್ಲು ಜಾತಿಗೆ ಸೇರಿದ ಬೆಳೆಯಾಗಿದ್ದು, ಕಳೆನಾಶಕ ಸಿಂಪಡಿಸಿರುವುದರಿಂದ ಸಂಪೂರ್ಣ ಒಣಗಿ ಹೋಗುತ್ತಿದೆ. ಇನ್ನೇನು ಎರಡು ತಿಂಗಳಲ್ಲಿ ಫಸಲು ಕೈಗೆ ಬರುತ್ತಿತ್ತು. ಆದರೆ ಕಿಡಿಗೇಡಿಗಳ ಈ ಕೃತ್ಯಕ್ಕೆ ಬೆಳೆ ಸಂಪೂರ್ಣ ನಾಶವಾಗಿದೆ.
ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.