ವಾಲ್ಮೀಕಿ ಜಾತ್ರೆಯಲ್ಲಿ ಸಿಎಂ ಮೇಲೆ ಮುನಿಸಿಕೊಂಡರಾ ಸಚಿವ ಶ್ರೀರಾಮುಲು...
Recommended Video
ದಾವಣಗೆರೆ, ಫೆಬ್ರವರಿ 10: ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ನಡೆದ "ವಾಲ್ಮೀಕಿ ಜಾತ್ರೆ'ಗೆ ಸಂಭ್ರಮದ ತೆರೆಬಿದ್ದಿದೆ. ಆದರೆ ಜಾತ್ರಾ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದ ಸಚಿವ ಬಿ.ಶ್ರೀರಾಮುಲು ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಬಂದಾಗ ಇಲ್ಲದಿದ್ದದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮದ ವೇದಿಕೆಗೆ ಬಂದಾಗ ಇದ್ದ ಸಚಿವ ಶ್ರೀರಾಮುಲು, ಸಿಎಂ ಬರುವುದಕ್ಕೂ ಮುನ್ನವೇ ಕಾರ್ಯಕ್ರಮದಿಂದ ನಾಪತ್ತೆಯಾಗಿದ್ದು ಯಾವ ಕಾರಣಕ್ಕಾಗಿ ಎಂಬುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
"ನನಗೂ ಡಿಸಿಎಂ ಆಗುವ ಆಸೆ ಇತ್ತು" ಎಂದ ಶ್ರೀರಾಮುಲು
ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ವೇದಿಕೆ ತುದಿಯಲ್ಲಿ ಇದ್ದ ಸ್ವಾಗತ ಸಮಿತಿ ಅಧ್ಯಕ್ಷ ಶ್ರೀರಾಮುಲು, ಸಿದ್ದರಾಮಯ್ಯ ಸೇರಿದಂತೆ ಜೊತೆಗೆ ಬಂದಂತಹ ಶಾಸಕರನ್ನು ಮುಖಂಡರನ್ನು ಸ್ವಾಗತಿಸಿದರು. ಅವರೆಲ್ಲಾ ಆಸೀನರಾಗಿ ಕಾರ್ಯಕ್ರಮ ನಡೆಯುತ್ತಿರುವಾಗಲೇ ಶ್ರೀರಾಮುಲು ವೇದಿಕೆಯಿಂದ ಕೆಳಗಿಳಿದರು. ಅಷ್ಟರಲ್ಲಿ ಸಿಎಂ ಯಡಿಯೂರಪ್ಪನವರ ಹೆಲಿಕಾಪ್ಟರ್ ಆಗಮಿಸಿತು.
ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿದ್ದಾಗಲೇ ಆಗಮಿಸಿದ ಸಿಎಂ ಯಡಿಯೂರಪ್ಪ ಮಠದ ಕೊಠಡಿಯಲ್ಲಿ ವಿಶ್ರಾಂತಿಗೆಂದು ಹೋದರು. ಸಿದ್ದರಾಮಯ್ಯ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮಕ್ಕೆ ಆಗಮಿಸಿದರು.
ಕಳೆದ ಎರಡು ದಿನಗಳ ಹಿಂದೆ ಡಿಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದ ಶ್ರೀರಾಮುಲು, ಇಂದು ಯಡಿಯೂರಪ್ಪನವರು ಭಾಗವಹಿಸಿದ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ವಾಲ್ಮೀಕಿ ಸಮುದಾಯದ ಕಾರ್ಯಕ್ರಮದಲ್ಲಿ ಸ್ವತಃ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದ ಸಚಿವ ಶ್ರೀರಾಮುಲು ಅವರು ಸಿಎಂ ಯಡಿಯೂರಪ್ಪನವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಿಎಂ ಯಡಿಯೂರಪ್ಪ ವೇದಿಕೆಗೆ ಆಗಮಿಸಿದಾಗ ಶ್ರೀರಾಮುಲು ಹೋಗಿದ್ದು ಎಲ್ಲಿಗೆ ಎಂಬುದು ಸಭೆಯಲ್ಲಿ ಗುಸು ಗುಸು ಚರ್ಚೆಯೂ ನಡೆದಿದೆ.
ಧಾರ್ಮಿಕ ಸಭೆಯಲ್ಲಿ ಇದ್ದ ಶ್ರೀರಾಮುಲು ಹೋಗಿದ್ದು ಎಲ್ಲಿಗೆ ಯಡಿಯೂರಪ್ಪನವರು ಬರುವಾಗ ತಮ್ಮ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳನ್ನು ಸ್ವಾಗತಿಸಬೇಕಿತ್ತು. ಆದರೆ ಯಡಿಯೂರಪ್ಪನವರು ಬರುವುದಕ್ಕೆ ಮುನ್ನವೇ ಶ್ರೀರಾಮುಲು ಹೋಗಿದ್ದರು.
ಮಠದ ಆವರಣದಲ್ಲಿ ಅರ್ಧ ಗಂಟೆ ವಿರಮಿಸುವ ವೇಳೆಯಲ್ಲಿ ಶ್ರೀರಾಮುಲು ಅಲ್ಲಿರಲಿಲ್ಲ. ಸಿಎಂ ಯಡಿಯೂರಪ್ಪನವರ ಮೇಲೆ ಶ್ರೀರಾಮುಲು ಮುನಿಸಿಕೊಂಡಿದ್ದಾರಾ? ಅಥವಾ ಮಗಳ ಮದುವೆ ಕರೆಯೋಲೆ ನೆಪದಲ್ಲಿ ಕಾರ್ಯಕ್ರಮದಿಂದ ದೂರವುಳಿದರಾ? ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು.