'ಅವ್ನಿಗೆ ಬುದ್ದಿ ಇಲ್ಲ': ಎಂಟಿಬಿ ನಾಗರಾಜ್ ಹೇಳಿಕೆಗೆ ಭೈರತಿ ಬಸವರಾಜ್ ಗರಂ!
ದಾವಣಗೆರೆ, ಮೇ21: 'ಬಿಜೆಪಿಗೆ ಬಂದು ತಪ್ಪು ಮಾಡಿದ್ವಿ' ಎಂಬ ಸಚಿವ ಎಂ.ಟಿ.ಬಿ. ನಾಗರಾಜ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು "ಅವ್ನಿಗೆ ಬುದ್ದಿ ಇಲ್ಲ'' ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಚನ್ನಗಿರಿಯಲ್ಲಿ ನೆರೆ ಹಾನಿ ವೀಕ್ಷಣೆಗೆ ಬಂದ ವೇಳೆ ಎಂಟಿಬಿ ನಾಗರಾಜ್ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ, ಆ ರೀತಿಯಲ್ಲಾ ಮಾತನಾಡಬಾರದಿತ್ತು. ನಾನು ಇಷ್ಟೇ ಹೇಳೋದು ಎಂದು ಬೈರತಿ ಹೇಳಿದರು.
ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ
ಸಚಿವ ಸಂಪುಟದಲ್ಲಿ ವಲಸಿಗ ಸಚಿವರನ್ನ ಕೈಬಿಡುವ ಆತಂಕದ ಕುರಿತು ಕೇಳಿದ ಪ್ರಶ್ನೆಗೆ, "ನಮ್ಮನ್ನು ಸಂಪುಟದಿಂದ ಕೈಬಿಡಲ್ಲ ಅನ್ನೋ ವಿಶ್ವಾಸ ಇದೆ. ವಲಸೆ ಬಂದವರನ್ನ ಪಕ್ಷ ಆ ರೀತಿ ನಡೆಸಿಕೊಳ್ಳಲ್ಲ ಅನ್ನೋ ಭರವಸೆ ಇದೆ. ಪಕ್ಷ ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೆ ಅನ್ನೋ ವಿಶ್ವಾಸ ಇದೆ," ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ವೇಳೆ ಯಾರನ್ನು ಕೈಬಿಡಬೇಕು, ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕೆಂಬುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರಮಾಧಿಕಾರ. ಯಾರೂ ಪ್ರಶ್ನೆ ಮಾಡಲು ಆಗದು. ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ ಎಂದು ಭೈರತಿ ಬಸವರಾಜ್ ತಿಳಿಸಿದರು.
ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದ ಮಾಡಾಳು ವಿರೂಪಾಕ್ಷಪ್ಪ...!
ಪಕ್ಷ ನನ್ನನ್ನು ಗುರುತಿಸಿ ಸಚಿವ ಸ್ಥಾನ ನೀಡಿದ್ರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದ್ದಾರೆ. ಚನ್ನಗಿರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಮಾತು ಹೇಳುವ ಮೂಲಕ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ.
ಸಿಎಂ ದೆಹಲಿಗೆ ಹೋಗುತಿದ್ದಂತೆ ಸಚಿವ ಸ್ಥಾನ ಆಸೆ ಬಿಚ್ಚಿಟ್ಟಿರುವ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು, ಬಿಜೆಪಿ ಪಕ್ಷವು ನನ್ನನ್ನು ಶಾಸಕನಾಗಿ ಮಾಡಿದೆ. ಸಾಬೂನು ಮಾರ್ಜಕ ಮಂಡಳಿ ಅಧ್ಯಕ್ಷರನ್ನಾಗಿಸಿದೆ. ನಾನೊಬ್ಬ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷಕ್ಕೆ, ಸಿಎಂಗೆ ಮುಜುಗರ ಆಗುವಂತ ಕೆಲಸ ಮಾಡಲ್ಲ. ಒಂದು ವೇಳೆ ಪಕ್ಷವು ಸಚಿವ ಸ್ಥಾನ ನೀಡಿದ್ರೆ ಉತ್ತಮ ಕೆಲಸ ಮಾಡುತ್ತೇನೆ ಎಂದು ಹೇಳಿದರು.