ದಾವಣಗೆರೆಯಲ್ಲಿ ಹಾಲಿಗಾಗಿ ಮುಗಿಬಿದ್ದ ಜನರು
ದಾವಣಗೆರೆ. ಏಪ್ರಿಲ್ 05: ಉಚಿತವಾಗಿ ಹಾಲು ನೀಡುತ್ತಿದ್ದಾರೆಂಬ ಮಾಹಿತಿಯಿಂದಾಗಿ ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿಂದು ಸಾರ್ವಜನಿಕರು ಗುಂಪು ಗುಂಪಾಗಿ ಸಾಮಾಜಿಕ ಅಂತರವಿಲ್ಲದೆ ನಗರಸಭೆಗೆ ಮುತ್ತಿಗೆ ಹಾಕಿದ್ದರಿಂದ ಅಧಿಕಾರಿಗಳು ಕೆಲಕಾಲ ಆತಂಕಗೊಂಡ ಘಟನೆ ನಡೆದಿದೆ.
ಸ್ಥಳಕ್ಕೆ ಹರಿಹರ ತಹಶೀಲ್ದಾರ್ ಕೆ.ಬಿ ರಾಮಚಂದ್ರಪ್ಪ ಆಗಮಿಸಿ ನಂತರ ಮಾತನಾಡಿದರು. ""ಅಪಾಯ ಮಟ್ಟದ ಕೊರೊನಾ ಸೋಂಕನ್ನು ನಿಯಂತ್ರಣ ಮಾಡುವುದಕ್ಕೆ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಅನ್ವಯ ಕೇವಲ ಬಡ ಮತ್ತು ಮಧ್ಯಮ ವರ್ಗದವರಿಗೆ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಅಕ್ಕಿ, ಗೋಧಿ ವಿತರಿಸುವುದರ ಜೊತೆಗೆ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮತ್ತು ಅನಧಿಕೃತ ಕೊಳಚೆ ಪ್ರದೇಶದ ಕುಟುಂಬಗಳಿಗೆ, ವಲಸೆ ಕುಟುಂಬಗಳಿಗೆ ಪ್ರತಿದಿನ ಹಾಲು ಪೂರೈಸಲು ಆದೇಶಿಸಿರುತ್ತಾರೆ'' ಎಂದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬರುವ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ವಲಸೆ ಕಾರ್ಮಿಕರಿಗೆ ಹಾಲು ಪೂರೈಸಲು ಸರ್ಕಾರದ ಮತ್ತು ಜಿಲ್ಲಾಧಿಕಾರಿಗಳು ಆದೇಶದಂತೆ ಏಪ್ರಿಲ್ 2 ರಿಂದ 14 ವರೆಗೆ ಉಚಿತ ಹಾಲು ವಿತರಣೆ ಮಾಡಲಾಗುತ್ತಿದೆ. ಲಾಕ್ ಡೌನ್ ಆದೇಶವಾಗಿರುವುದು ಕೊರೊನಾ ವೈರಸ್ ನ್ನು ತಡೆಗಟ್ಟುವ ಉದ್ದೇಶದಿಂದ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದಿರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು. ಮಹಾಮಾರಿ ಕೊರೊನಾ ವೈರಸ್ ನಿಂದ ತತ್ತರಿಸಿರುವ ಬಡ, ಮಧ್ಯಮ ಮತ್ತು ವಲಸೆ ಕಾರ್ಮಿಕರ ಕುಟುಂಬಗಳಿಗೆ ಈಗಾಗಲೇ ಸಂಘ ಸಂಸ್ಥೆಗಳು ಊಟ ಆಹಾರ ಪದಾರ್ಥಗಳನ್ನು ನೀಡುತ್ತಿದ್ದಾರೆ.
ನಿರ್ಗತಿಕರಿಗೆ ಸಹಾಯ ಹಸ್ತ ಚಾಚುವರು ತಾಲ್ಲೂಕು ಕಚೇರಿಯ ಸಹಾಯವಾಣಿ 08192-272959, 9141827465, 9480803234, ತಹಶೀಲ್ದಾರ್, ಸಿಪಿಐ ಮತ್ತು ಪೌರಾಯುಕ್ತರ ಗಮನಕ್ಕೆ ತಂದು ಆಹಾರ ಮತ್ತು ಊಟವನ್ನು ನೀಡಬೇಕೆಂದು ತಿಳಿಸಿದರು.