ಬಿಸಿಯೂಟ ತಯಾರಕರಿಂದ ಜನವರಿ 21ಕ್ಕೆ ಬೆಂಗಳೂರು ಚಲೋ
ದಾವಣಗೆರೆ, ಜನವರಿ 19: ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ, ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ಹೇಳಿದ್ದಾರೆ.
ಜನವರಿ 21 ಮತ್ತು 22ರಂದು ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಎರಡು ದಿನ ರಾಜ್ಯಾದ್ಯಂತ ಆಗಮಿಸುವ ಬಿಸಿಯೂಟ ತಯಾರಕರು ಧರಣಿ ನಡೆಸಲಿದ್ದಾರೆ. ಬರುವ ಬಜೆಟ್ ನಲ್ಲಿ ತಮಗೆ ಕನಿಷ್ಟ ವೇತನ ಜಾರಿಗೊಳಿಸಬೇಕು. ಕೆಲಸದ ಭದ್ರತೆ ಒದಗಿಸಬೇಕು. ಪಿಎಫ್., ಇ.ಎಸ್.ಐ. ಸೇವೆಯಿಂದ ನಿವೃತ್ತಿಯಾದಾಗ 2 ಲಕ್ಷ ರೂ. ಇಡುಗಂಟು, ಮಾಸಿಕ 3 ಸಾವಿರ ರೂಪಾಯಿ ಪಿಂಚಣಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಧರಣಿ ಮಾಡುವ ಮೂಲಕ ಒತ್ತಾಯಿಸಲಾಗುವುದು.
ಶಾಲೆಯಲ್ಲಿ ಅಡುಗೆ ನಿಲ್ಲಿಸಿ ರಾಜ್ಯದ ಎಲ್ಲಾ ಬಿಸಿಯೂಟ ತಯಾರಕರು ಜನವರಿ 20ರ ಸಂಜೆ ತಮ್ಮ ತಮ್ಮ ಊರುಗಳಿಂದ ಹೊರಟು ಹತ್ತಿರದ ರೈಲು ನಿಲ್ದಾಣಗಳಿಗೆ ಆಗಮಿಸಿ, ಬೆಂಗಳೂರಿಗೆ ಬಂದು ಎರಡು ದಿನ ನಡೆಯುವ ಧರಣಿ ಯಶಸ್ವಿಗೊಳಿಸುವಂತೆ ಸಂಘಟನೆಯ ರಾಜ್ಯಾಧ್ಯಕ್ಷ ಕಾಂ. ಹೊನ್ನಪ್ಪ ಮರೆಯಮ್ಮನವರ್, ರಾಜ್ಯ ಖಜಾಂಚಿ ಕಾಂ. ರುದ್ರಮ್ಮ ಬೆಳಲಗೆರೆ ಮತ್ತಿತರೆ ಮುಖಂಡರು ತಿಳಿಸಿದರು.