ದಾವಣಗೆರೆ; ಬೀದಿನಾಟಕದ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳ 9ನೇ ದಿನದ ಮುಷ್ಕರ
ದಾವಣಗೆರೆ, ಜುಲೈ 7: ಶಿಷ್ಯ ವೇತನಕ್ಕಾಗಿ ವೈದ್ಯ ವಿದ್ಯಾರ್ಥಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ 9ನೇ ದಿನವಾದ ಇಂದೂ ಮುಂದುವರೆಯಿತು.
Recommended Video
ನಗರದ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ಜೆಜೆಎಂ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳು ಬೆಳಗ್ಗೆಯಿಂದ ಮುಷ್ಕರ ನಡೆಸಿದರಲ್ಲದೇ, ಸಂಜೆ ಮಳೆಯಲ್ಲಿ ನೆನೆಯುತ್ತಾ, ಶಿಷ್ಯ ವೇತನಕ್ಕಾಗಿ ತಮ್ಮ ಹೋರಾಟ, ವನವಾಸ, ಸಂಕಟವನ್ನು ಚಿತ್ರಿಸುವ ಬೀದಿ ನಾಟಕ ಪ್ರದರ್ಶಿಸಿ ಸರ್ಕಾರದ ಗಮನ ಸೆಳೆದರು.
ದಾವಣಗೆರೆ: ಶಿಷ್ಯ ವೇತನಕ್ಕಾಗಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ
ವೈದ್ಯರಾಗಬೇಕೆಂಬ ಕನಸು ಕಟ್ಟಿಕೊಂಡು ಮೆರಿಟ್ ನಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಸೀಟ್ ಪಡೆದು, ಇನ್ನೇನು ವೈದ್ಯರಾಗುವ ಕೊನೆ ಹಂತಕ್ಕೆ ಬಂದ ಸಮಯದಲ್ಲಿ ಶಿಷ್ಯವೇತನಕ್ಕಾಗಿ ಪರದಾಡುವ, ಹೋರಾಟಕ್ಕಿಳಿಯುವ ಪ್ರಸಂಗಗಳನ್ನು ನಾಟಕದ ಮೂಲಕ ತೋರಿಸಿ ಪ್ರಸ್ತುತ ತಮ್ಮ ಸಮಸ್ಯೆಗಳನ್ನು ವಿದ್ಯಾರ್ಥಿಗಳು ನಾಟಕದ ಮುಖೇನ ಪ್ರದರ್ಶಿಸಿದರು.
ಈ ವೇಳೆ ಮಾತನಾಡಿದ ವೈದ್ಯ ವಿದ್ಯಾರ್ಥಿಗಳು, ಈ ಹಿಂದೆ ನಡೆದ ಸಂಧಾನಗಳೆಲ್ಲಾ ವಿಫಲವಾಗಿವೆ. ಸರ್ಕಾರ ಮಧ್ಯಸ್ಥಿಕೆ ವಹಿಸಿದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. 230 ವಿದ್ಯಾರ್ಥಿಗಳ 16 ತಿಂಗಳ 8 ಕೋಟಿ ಶಿಷ್ಯವೇತನ ಬಾಕಿಯಿದ್ದು ಜೆಜೆಎಂ ಕಾಲೇಜು ಆಡಳಿತ ಮಂಡಳಿ ನೀಡುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಆಡಳಿತ ಮಂಡಳಿ ತಾನು ನೀಡುವುದಿಲ್ಲವೆಂದು ಸರ್ಕಾರಕ್ಕೆ ಮನವಿ ಮಾಡಿದೆ. ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ವಿದ್ಯಾರ್ಥಿಗಳಿಗೆ ಕೇವಲ ಭರವಸೆ ನೀಡಿದ್ದಾರೆ. ಆದರೆ ನಮ್ಮ ಖಾತೆಗೆ ಶಿಷ್ಯವೇತನ ಬರುವವರೆಗೂ ನಾವು ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.