ದಾವಣಗೆರೆಯಲ್ಲಿ ತಟ್ಟೆ ಬಾರಿಸಿ ವೈದ್ಯಕೀಯ ವಿದ್ಯಾರ್ಥಿಗಳ ಹೋರಾಟ
ದಾವಣಗೆರೆ, ಜುಲೈ 9: ಶಿಷ್ಯ ವೇತನಕ್ಕಾಗಿ ಆಗ್ರಹಿಸಿ ದಾವಣಗೆರೆಯ ಜೆಜೆಎಂ ವೈದ್ಯಕೀಯ ವಿದ್ಯಾರ್ಥಿಗಳು ಬೀದಿಗಿಳಿದು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಇಂದು ಕೂಡ ತಟ್ಟೆ ಬಾರಿಸಿ ಸದ್ದು ಮಾಡುವ ಮುಖೇನ ಹೋರಾಟ ಮಾಡಿದರು.
Recommended Video
ಜಯದೇವ ವೃತ್ತದಲ್ಲಿ ಕಳೆದ 11 ದಿನಗಳಿಂದಲೂ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸುತ್ತಾ ಶಿಷ್ಯ ವೇತನಕ್ಕಾಗಿ ವಿದ್ಯಾರ್ಥಿಗಳು ಬಿಗಿಪಟ್ಟು ಹಿಡಿದಿದ್ದಾರೆ. ಇಂದೂ ತಟ್ಟೆ ಮತ್ತು ಚಪ್ಪಾಳೆ ಬಾರಿಸಿ ವಿಭಿನ್ನವಾಗಿ ಸರ್ಕಾರದ ಗಮನ ಸೆಳೆದರು. ಸರ್ಕಾರ ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಿಲ್ಲ. ನಮ್ಮ ಕೂಗು ಸರ್ಕಾರಕ್ಕೆ ತಲುಪಬೇಕಿದೆ. ಅದಕ್ಕಾಗಿ ತಟ್ಟೆ ಬಾರಿಸುವ ಮೂಲಕ ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು.
ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುವುದು ನಮ್ಮಿಂದ ಆಗದು; ಶಾಮನೂರು ಶಿವಶಂಕರಪ್ಪ
ಪಿಜಿ ವಿದ್ಯಾರ್ಥಿ ರಾಹುಲ್ ಮಾತನಾಡಿ, ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ನಮಗೆ ಕೇಂದ್ರ ಸರ್ಕಾರ ಚಪ್ಪಾಳೆ ತಟ್ಟಿ ದೀಪ ಹಚ್ಚುವ ಮೂಲಕ ಅಭಿನಂದಿಸಿತ್ತು. ಇದೀಗ ಸರ್ಕಾರದ ಮಾದರಿಯಲ್ಲಿಯೇ 11 ಗಂಟೆಗೆ 11 ನಿಮಿಷಗಳ ಕಾಲ ತಟ್ಟೆ ಬಾರಿಸುವ ಮೂಲಕ ನಮ್ಮ ಹಕ್ಕನ್ನು ಪ್ರತಿಪಾದಿಸಿದ್ದೇವೆ. 11 ದಿನವಾದರೂ ನಮ್ಮ ಕೂಗನ್ನು ಕೇಳಿಸಿಕೊಳ್ಳದೆ ಮೌನ ವಹಿಸಿರುವ ಸರ್ಕಾರಕ್ಕೆ ಈಗಲಾದರೂ ನಮ್ಮ ಕೂಗು ಕೇಳಿಸಲಿ ಎಂದು ತಟ್ಟೆ ಬಡಿಯುವ ಮೂಲಕ ಪ್ರತಿಭಟಿಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಷ್ಯವೇತನದ ಕುರಿತು ಶಾಮನೂರು ಶಿವಶಂಕರಪ್ಪ ಅವರು ಆಡಳಿತ ವತಿಯಿಂದ ವೇತನ ನೀಡಲಾಗುವುದಿಲ್ಲ ಎಂದು ಸ್ಪಷ್ಟೀಕರಿಸಿ ಪತ್ರವನ್ನು ನೀಡಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಫೇಸ್ ಬುಕ್ ಮೂಲಕ ಸರ್ಕಾರದ ವತಿಯಿಂದ ವೇತನ ನೀಡುವುದಿಲ್ಲ ಎನ್ನುತ್ತಿದ್ದಾರೆ. ವಿದ್ಯಾರ್ಥಿಗಳು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಸತತವಾಗಿ 11 ದಿನದಿಂದ ಪ್ರತಿಭಟಿಸುತ್ತಲೇ ಇದ್ದೇವೆ. ಕೋವಿಡ್ ವಾರಿಯರ್ಸ್ ಗಳಾಗಿ ಪ್ರಾಣದ ಹಂಗನ್ನು ತೊರೆದು ದುಡಿಯುತ್ತಿದ್ದೇವೆ. ಇಷ್ಟು ಸಣ್ಣ ವಿಚಾರವನ್ನು ಬಗೆಹರಿಸುವುದಕ್ಕೆ ಸರ್ಕಾರದ ವತಿಯಿಂದ ಆಗುತ್ತಿಲ್ಲ. ಇನ್ನು ಎರಡು ದಿನದೊಳಗಾಗಿ ಸರ್ಕಾರ ನಮಗೆ ಪರಿಹಾರ ನೀಡದಿದ್ದಲ್ಲಿ, ಕೋವಿಡ್ ಹೊರತುಪಡಿಸಿ ಉಳಿದ ಎಲ್ಲಾ ವೈದ್ಯಕೀಯ ಸೇವೆಗಳನ್ನು ನಿಲ್ಲಿಸಿ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು.