ಮಂತ್ರಿ ಸ್ಥಾನಕ್ಕಾಗಿ ದಾವಣಗೆರೆ ಜಿಲ್ಲೆಯ ಬಿಜೆಪಿ ಶಾಸಕರಲ್ಲಿ ಭಾರಿ ಪೈಪೋಟಿ
ದಾವಣಗೆರೆ, ನವೆಂಬರ್ 12: ದಾವಣಗೆರೆ ಜನ ಪ್ರತಿನಿಧಿಗಳು ಹಾಗೂ ಮುಖಂಡರ ನಿಯೋಗ ದಾವಣಗೆರೆ ಜಿಲ್ಲೆ ಅಭಿವೃದ್ಧಿ ವಿಚಾರವಾಗಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ.
ದೂಡಾಗೆ ಅನುದಾನ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ ಸಿದ್ದೇಶ್ವರ್ ನೇತೃತ್ವದಲ್ಲಿ ಶಾಸಕರಾದ ಎಸ್.ವಿ ರಾಮಚಂದ್ರ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮನವಿ ಪತ್ರ ನೀಡಿದರು.
ಹಬ್ಬದ ಖರೀದಿ ಭರಾಟೆಯಲ್ಲಿ ನಿಯಮ ಮರೆತವರಿಗೆ ಬಿತ್ತು ದಂಡ
ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ್ ನೇತೃತ್ವದ ನಿಯೋಗವು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದ ನಂತರ ಮಾತನಾಡಿದ ಸಂಸದ ಜಿ.ಎಂ ಸಿದ್ದೇಶ್ವರ್, ಜಿಲ್ಲೆಗೆ 125 ಕೋಟಿ ರೂ. ಹಣ ಬಿಡುಗಡೆ ವಿಳಂಬ ಆಗಿತ್ತು. ಹಣ ಬಿಡುಗಡೆ ಮಾಡುವಂತೆ ಸಿಎಂ ಅವರಲ್ಲಿ ಮನವಿ ಮಾಡಲಾಗಿದೆ ಎಂದರು.
ಕೊರೊನಾವೈರಸ್ ಹಿನ್ನೆಲೆ ಹಣ ಬಿಡುಗಡೆ ವಿಳಂಬ ಆಗಿದೆ, ಹಂತ ಹಂತವಾಗಿ ಹಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ತಿಳಿಸಿದರು.
ಇನ್ನು ಅಡಗೂರು ಎಚ್. ವಿಶ್ವನಾಥ್ ಅವರಿಗೆ ಮಂತ್ರಿ ಸ್ಥಾನ ನೀಡುವ ವಿಚಾರವಾಗಿ ಸಚಿವ ಭೈರತಿ ಬಸವರಾಜ ಹೇಳಿಕೆ ನೀಡಿದ್ದು, ನಮ್ಮ ಶಾಸಕರಾದ ರವೀಂದ್ರನಾಥ ಸೇರಿದಂತೆ ಅನೇಕರು ಮಂತ್ರಿ ಸ್ಥಾನದ ಆಕಾಂಕ್ಷಿ ಇದ್ದಾರೆ. ಎಲ್ಲರಿಗೂ ಮಂತ್ರಿ ಆಗಬೇಕು ಎಂಬ ಆಸೆ ಇರುತ್ತದೆ ಎಂದು ತಿಳಿಸಿದರು.
ಪಕ್ಷಕ್ಕೆ ಬಂದವರನ್ನು ಈಗಾಗಲೇ ಸಿಎಂ ಯಡಿಯೂರಪ್ಪ ಮಂತ್ರಿ ಮಾಡಿದ್ದಾರೆ. ಮುನಿರತ್ನ ಅವರನ್ನು ಮಂತ್ರಿ ಮಾಡುವುದಾಗಿಯೂ ಹೇಳಿದ್ದಾರೆ. ಘೋಷಣೆ ಮಾಡಿದಂತೆ ಮಂತ್ರಿ ಮಾಡುತ್ತಾರೆ, ಆ ನಂಬಿಕೆ ನಮಗಿದೆ ಎಂದು ಸಚಿವ ಭೈರತಿ ಬಸವರಾಜ್ ಹೇಳಿದರು.
ದಾವಣಗೆರೆ ಜಿಲ್ಲೆಯ ಶಾಸಕರ ನಡುವೆ ಮಂತ್ರಿಗಿರಿ ಪೈಪೋಟಿ ಶುರುವಾಗಿದ್ದು, ಈ ಕುರಿತು ಸಂಸದ ಜಿ.ಎಂ ಸಿದ್ದೇಶ್ವರ್ ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದು, ಜಿಲ್ಲೆಯ ಶಾಸಕರ ಅಸಮಾಧಾನ ಬಿಚ್ಚಿಟ್ಟರು.
ಸಿಎಂ ದೆಹಲಿ ಹೋಗುವ ವಿಚಾರ ಗೊತ್ತಿಲ್ಲ, ದಾವಣಗೆರೆ ಜಿಲ್ಲೆಯ ೬ ಜನ ಶಾಸಕರಿಗೆ ನಾನು ಒಂದು ಮಾತು ಹೇಳಿದ್ದೆ, 6 ಜನರಲ್ಲಿ ನೀವೇ ಚರ್ಚಿಸಿ, ಒಬ್ಬರು ಮಂತ್ರಿ ಸ್ಥಾನಕ್ಕೆ ಫೈನಲ್ ಮಾಡಿಕೊಳ್ಳಿ ಎಂದಿದ್ದೆ. ಆದರೆ ಆರೂ ಜನ ಮಂತ್ರಿ ಆಗಬೇಕು ಅಂದರೆ ಏನು ಮಾಡೋದು? ಎಂದು ಜಿಲ್ಲೆಯ ಮಂತ್ರಿ ಸ್ಥಾನ ಆಕಾಂಕ್ಷಿಗಳ ಪೈಪೋಟಿ ಕುರಿತು ಹೇಳಿದ ಜಿ.ಎಂ ಸಿದ್ದೇಶ್ವರ್, ಜಿಲ್ಲೆಯ 6 ಜನ ಶಾಸಕರಲ್ಲಿ ಒಬ್ಬರಿಗೆ ಮಂತ್ರಿ ಸ್ಥಾನ ಕೊಟ್ಟರೆ ಸ್ವಾಗತ ಮಾಡುವುದಾಗಿ ಹೇಳಿದರು.