ಕೋವಿಡ್ ಮಾರ್ಗಸೂಚಿ ಪಾಲಿಸದಿದ್ದರೆ ಮಾರ್ಕೆಟ್ ಬಂದ್: ಎಂಪಿಆರ್ ಎಚ್ಚರಿಕೆ
ದಾವಣಗೆರೆ, ಮೇ 6: ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ದಿಢೀರ್ ಭೇಟಿ ನೀಡಿದರು. ಬೆಳ್ಳಂಬೆಳಿಗ್ಗೆ ಎಂಟ್ರಿ ಕೊಟ್ಟ ಅವರು ಕೋವಿಡ್ ನಿಯಮಾವಳಿ ಪಾಲಿಸದಿದ್ದರೆ ಮಾರ್ಕೆಟ್ ಬಂದ್ ಮಾಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಅಲ್ಲಿದ್ದ ವ್ಯಾಪಾರಿಗಳು, ವರ್ತಕರು ಮಾಸ್ಕ್ ಧರಿಸದೇ ಇದ್ದದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದದ್ದು ಕಂಡು ಬಂತು. ಈ ವೇಳೆ ವ್ಯಾಪಾರಸ್ಥರಿಗೆ ಬಿಸಿ ಮುಟ್ಟಿಸಿದರು.
ಸ್ವಪಕ್ಷೀಯ ಸಚಿವರ ವಿರುದ್ಧವೇ ಹರಿಹಾಯ್ದ ರೇಣುಕಾಚಾರ್ಯ!
ಬುಧವಾರ ನಡೆದ ಸಭೆಯಲ್ಲಿ ಮಾರ್ಕೆಟ್ ಬಂದ್ ಮಾಡಿಸುವ ಸಂಬಂಧ ಎರಡು ಗಂಟೆ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. ಯಾರ ಹೊಟ್ಟೆ ಮೇಲೆ ಹೊಡೆಯುವುದಕ್ಕೆ ಇಷ್ಟ ಇಲ್ಲ. ನಾಲ್ಕು ದಿನ ಬಂದ್ ಮಾಡಿಸೋಣ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳುತ್ತಿದ್ದಂತೆ ರೈತರು, ಬಂದ್ ಮಾಡಿಸುವುದು ಬೇಡ ಸಾರ್, ಬಂದು ಮಾರಾಟ ಮಾಡಿ ಹೋಗಲು ಅವಕಾಶ ಕೊಡಿ ಎಂದು ಭಿನ್ನವಿಸಿಕೊಂಡರು.
ಬಳಿಕ ಮಾತನಾಡಿದ ರೇಣುಕಾಚಾರ್ಯ, ಪ್ರತಿನಿತ್ಯ ಜನರು ಕರೆ ಮಾಡ್ತಾರೆ ಜೀವ ಉಳಿಸಿ ಎಂದು ಗೋಗರೆಯುತ್ತಾರೆ. ಮಾಸ್ಕ್ ಧರಿಸದವರು ಇಲ್ಲಿಗೆ ಬರಬೇಡಿ, ದೂರ ನಿಲ್ಲಿ. ಮಾಸ್ಕ್ ಧರಿಸಬೇಕು, ದೂರ ದೂರ ಕುಳಿತು ವ್ಯಾಪಾರ ಮಾಡಬೇಕು. ಉಲ್ಲಂಘಿಸಿದರೆ ಬಂದ್ ಮಾಡಿಸುವುದು ಅನಿವಾರ್ಯ ಆಗುತ್ತದೆ ಎಂದರು.
ಪೊಲೀಸರು ಸಹ ಎಷ್ಟು ಅಂತಾ ಕಂಟ್ರೋಲ್ ಮಾಡ್ತಾರೆ. ಹೊಡೆದರೆ ನನ್ನ ಬಳಿ ಬರುತ್ತಾರೆ. ಮಾಸ್ಕ್ ಧರಿಸದಿದ್ದರೂ ಪೊಲೀಸರ ಕೈಗೆ ಫೋನ್ ಕೊಡ್ತಾರೆ. ಅವರು ಏನು ಮಾಡಬೇಕು ಹೇಳಿ. ಕಾನೂನು ಪ್ರಕಾರ ಎಲ್ಲರೂ ನಡೆದುಕೊಳ್ಳಬೇಕು. ಸರ್ಕಾರದ ಆದೇಶ ಪಾಲಿಸಲೇಬೇಕು. ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ಸಹಕರಿಸಬೇಕು ಎಂದು ಮನವಿ ಮಾಡಿದರು.
Recommended Video
ನೀವು ತಪ್ಪು ಮಾಡಿದಾಗ ಬಿಟ್ಟು ಕಳುಹಿಸಿ ಎಂದು ಪೊಲೀಸರಿಗೆ ಹೇಳಿದರೆ ಅಪರಾಧವಾಗುತ್ತದೆ. ಹೊನ್ನಾಳಿ, ಶಿವಮೊಗ್ಗ, ಬೆಂಗಳೂರು ದಾವಣಗೆರೆ ಸೇರಿದಂತೆ ಎಲ್ಲೆಡೆಯೂ ಬೆಡ್ ಸಿಗುತ್ತಿಲ್ಲ. ಒದ್ದಾಡಿ ಒದ್ದಾಡಿ ಜೀವ ಹೋಗುತ್ತಿವೆ. ಶಿವಮೊಗ್ಗದಲ್ಲಿ ಬೆಡ್ ಸಿಗದ ಕಾರಣ ನಾನೇ ಸಿಎಂ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರರಿಗೆ ಕರೆ ಮಾಡಿದ ಬಳಿಕ ವ್ಯವಸ್ಥೆ ಆಗಿದೆ. ಎಲ್ಲರೂ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ ಎಂದು ಹೊನ್ನಾಳಿ ಶಾಸಕ ಎಂ.ಪಿರೇಣುಕಾಚಾರ್ಯ ಮನವಿ ಮಾಡಿದರು.