ಉತ್ತರಾಯಣ ಪುಣ್ಯಕಾಲ: ತುಂಗಭದ್ರಾ ತಟದಲ್ಲಿ ಮಕರ ಸಂಕ್ರಾಂತಿ ಸಂಭ್ರಮ
ದಾವಣಗೆರೆ, ಜನವರಿ 14: ಖಗೋಳದಲ್ಲಿ ಆಗುವ ಸೂರ್ಯನ ಪಥಸಂಚಲನದ ಸಂಕ್ರಮಣದ ಆಧ್ಯಾತ್ಮದ ಮಹತ್ವವನ್ನು ಸಾರುವ ಸಂಕ್ರಾಂತಿ ಹಬ್ಬವನ್ನು ದಾವಣಗೆರೆ ಜಿಲ್ಲೆಯ ಜನರು ಗುರುವಾರ ಸಂಭ್ರಮದಿಂದ ಆಚರಿಸಿದರು.
ಭೂತಾಯಿ ಒಡಲಲ್ಲಿ ಬೆಳೆದ ಫಸಲನ್ನು ಮನೆ ತುಂಬಿಸಿಕೊಳ್ಳುವ ಸಂದರ್ಭದ ಹಬ್ಬವಾದ ಮಕರ ಸಂಕ್ರಾಂತಿಯ ಸೊಬಗನ್ನು ರೈತರು ತಮ್ಮ ಮನೆ ಮತ್ತು ಹೊಲ-ಗದ್ದೆಗಳಲ್ಲಿ ಆಚರಿಸಿ ಸಂತಸಪಟ್ಟರು.
ಎಳ್ಳು-ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡಿ
ಪರಿಸರ ಪ್ರಿಯರು, ಹರಿಯುವ ನದಿನೀರಲ್ಲಿ ಸ್ನಾನ ಮಾಡಿ ಸೂರ್ಯದೇವನಿಗೆ ಪೂಜಿಸಿದರು. ಮನೆಗಳಲ್ಲಿ ಕಬ್ಬಿನ ತುಂಡು, ಎಳ್ಳು-ಬೆಲ್ಲ, ಸಕ್ಕರೆ ಅಚ್ಚುಗಳನ್ನು ದೇವರ ಮುಂದೆ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮನೆಯ ಮಂದಿ, ಸಂಬಂಧಿಕರು ಹಾಗೂ ಸ್ನೇಹಿತರಿಗೆ ಒಣ ಕೊಬ್ಬರಿ, ಶೇಂಗಾ, ಹುರಿಗಡಲೆ, ಬೆಲ್ಲದ ಅಚ್ಚುಗಳನ್ನು ಮಿಶ್ರಣವನ್ನುವಿನಿಮಯ ಮಾಡುತ್ತಾ, 'ಎಳ್ಳು-ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡಿ' ಎಂದು ಶುಭಾಶಯ ಕೋರಿದರು.
ರಂಗೋಲಿ ಮೆರಗು
ಮಹಿಳೆಯರು ನಸುಕಿನಲ್ಲೇ ಎದ್ದು ಮನೆ ಅಂಗಳ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ ಬಣ್ಣತುಂಬಿ ಮೆರಗು ತಂದರು. ಓಣಿಗಳಲ್ಲಿ ಬಣ್ಣ ಬಣ್ಣದ ರಂಗೋಲಿ ಸಂಕ್ರಾಂತಿ ಸಂದೇಶವನ್ನು ಸಾರುತ್ತಿತ್ತು. ಮನೆ ಬಾಗಿಲಿಗೆ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿದ್ದುದು, ಸಂಕ್ರಾಂತಿಯ ಸೊಬಗನ್ನು ಹೆಚ್ಚಿಸುವಂತಿತ್ತು.
ಖಡಕ್ ರೊಟ್ಟಿ, ಪಲ್ಯ, ಪೊಂಗಲ್ ಸವಿ
ಮುಂಜಾನೆಯಿಂದಲೇ ಗ್ರಾಮೀಣ ಹಾಗೂ ನಗರವಾಸಿಗಳು ಕುಟುಂಬ ಸಮೇತರಾಗಿ ಹರಿಹರದ ತುಂಗಭದ್ರಾ ನದಿಗೆ ಧಾವಿಸಿದ ಹಿರಿಯರು, ಮಕ್ಕಳು, ಮಹಿಳೆಯರು, ಯುವಕರು ನದಿಯಲ್ಲಿ ಸ್ನಾನ ಮಾಡಿ ಸೂರ್ಯದೇವನಿಗೆ ನಮಿಸಿ ಪ್ರಾಥಿಸುವ ಮೂಲಕ ಮನೆಯಿಂದ ತಂದಿದ್ದ ಖಡಕ್ ರೊಟ್ಟಿ, ಚಪಾತಿ, ಪುಂಡಿ ಸೊಪ್ಪಿನ ಪಲ್ಯ, ಎಣಗಾಯಿ ಪಲ್ಯ, ಚಟ್ನಿ ಪುಡಿ, ಚಿತ್ತಾನ್ನ, ಸಿಹಿ ಪೊಂಗಲ್, ಮೊಸರನ್ನ ಬುತ್ತಿ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ಒಟ್ಟಾಗಿ ಸವಿದು ಸಂತಸಪಟ್ಟರು.
ಆಟವಾಡಿ ಮಕ್ಕಳು ಸಂಭ್ರಮಿಸಿದರು
ದಾವಣಗೆರೆ ನಗರದ ಜನರು ಉದ್ಯಾನಗಳಿಗೆ ತೆರಳಿ ಸಂಭ್ರಮಿಸಿದರು. ಗಾಜಿನಮನೆ ಉದ್ಯಾನವನ, ವಿಶ್ವೇಶ್ವರಯ್ಯ ಪಾರ್ಕ್, ಕಾಸಲ್ ಶೆಟ್ಟಿ ಪಾರ್ಕ್, ಡಾಂಗೆ ಪಾರ್ಕ್, ಕುಂದುವಾಡ ಕೆರೆ, ಕೊಂಡಜ್ಜಿ ಕೆರೆ, ದೇವರಬೆಳಕೆರೆ ಪಿಕ್ ಅಪ್ಗಳಿಗೂ ಭಾರಿ ಸಂಖ್ಯೆಯಲ್ಲಿ ಜನ ಕುಟುಂಬ ಸಮೇತ ತೆರಳಿ ಹಬ್ಬದ ಊಟವನ್ನು ಮಾಡಿದರು. ಉದ್ಯಾನದಲ್ಲಿದ್ದ ವಿವಿಧ ಆಟಿಕೆ ಸಾಮಗ್ರಿಗಳೊಂದಿಗೆ ಆಟವಾಡಿ ಮಕ್ಕಳು ಸಂಭ್ರಮಿಸಿದರು. ದಾವಾಣಗೆರೆ ನಗರದೇವತೆ ದುರ್ಗಾಂಬಿಕಾ ದೇವಸ್ಥಾನ, ಗ್ರಾಮ ದೇವತೆ ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನ ಸಹಿತ ಎಲ್ಲ ದೇವಾಲಯಗಳನ್ನು ಅಲಂಕರಿಸಲಾಗಿದ್ದು, ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತಿ ಸಮರ್ಪಿಸಿದರು.