ದಾವಣಗೆರೆ; ಸಿಲಿಂಡರ್ ಸ್ಫೋಟ, ಬೀದಿಗೆ ಬಿದ್ದ ಕುಟುಂಬ
ದಾವಣಗೆರೆ, ಆಗಸ್ಟ್ 30; ಈಗ ಈ ಕುಟುಂಬದ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಪತಿ ತೀರಿಕೊಂಡ ಬಳಿಕ ಸಂಸಾರದ ನೊಗ ಹೊತ್ತಿದ್ದ ಆಕೆ ಬದುಕಲ್ಲಿ ಈಗ ಬೆಂಕಿ ಬಿರುಗಾಳಿ ಬೀಸಿದೆ. ಈ ಹೊಡೆತಕ್ಕೆ ಬದುಕು ಮೂರಾಬಟ್ಟೆಯಾಗಿದೆ. ಮಕ್ಕಳ ಬದುಕು ರೂಪಿಸಲು ಒಟ್ಟಿದ್ದ ಹಣ, ಒಡವೆ ಬೆಂಕಿಯಲ್ಲಿ ಬೆಂದು ಹೋಗಿದೆ. ಏನು ಮಾಡಬೇಕೆಂದು ತೋಚದೇ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗಿದೆ.
ಇದಕ್ಕೆಲ್ಲಾ ಕಾರಣ ಆ ಒಂದು ಸ್ಫೋಟ. ಇದ್ದ ಮನೆಯು ಬೆಂಕಿಯಲ್ಲಿ ಧಗಧಗಿಸಿ ಸುಟ್ಟು ಕರಕಲಾಗಿದೆ. ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗಾಹುತಿಯಾಗಿದೆ. ಮುಂದೇನು? ಎಂಬ ಪ್ರಶ್ನೆಗೆ ಉತ್ತರ ಏನು? ಎಂಬ ಚಿಂತೆಯಲ್ಲಿ ಮುಳುಗಿದೆ ಈ ಫ್ಯಾಮಿಲಿ.
ಒಂದೇ ವರ್ಷದಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ 165 ರೂ. ಏರಿಕೆ
ಹೌದು, ಇಂಥದ್ದೊಂದು ಭೀಕರ ಸಮಸ್ಯೆ ಉಂಟಾಗಲು ಕಾರಣ ಶನಿವಾರ ರಾತ್ರಿ ಆದ ಸಿಲಿಂಡರ್ ಸ್ಫೋಟ. ಈ ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಹೊಳೆ ಗ್ರಾಮದಲ್ಲಿ.
ಗೃಹ ಬಳಕೆ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ ಏರಿಕೆ
ಶನಿವಾರ ಆದ ಈ ಘಟನೆ ಮೊಬೈಲ್ನಲ್ಲಿ ಸೆರೆಯಾಗಿದ್ದು, ನಾಲ್ಕು ಸೆಕೆಂಡ್ನ ಸ್ಫೋಟದ ದೃಶ್ಯ ಎಂಥವರ ಎದೆ ಝಲ್ ಎನಿಸದೇ ಇರದು. ಶನಿವಾರ ರಾತ್ರಿ ಮಾವಿನಹೊಳೆ ಗ್ರಾಮದಲ್ಲಿ ತುಂಬಿದ ಸಿಲಿಂಡರ್ ಸ್ಫೋಟ ಆಗಿ ಇಡಿ ಮನೆಗೆ ಮನೆಯೇ ಸಂಪೂರ್ಣ ಸುಟ್ಟು ಕರಕಲಾಗಿದೆ.
ಸಿಹಿಸುದ್ದಿ: ಮನೆಯಲ್ಲಿ ಕುಳಿತುಕೊಂಡೇ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡಲು ಸುಲಭ ವಿಧಾನ
ಸ್ಫೋಟಕ್ಕೆ ಕಾರಣವೇನು?; ಮಾವಿನಹೊಳೆ ಗ್ರಾಮದ ವೀಣಾ ಎಂಬುವರ ಮನೆಯಲ್ಲಿ ಸಿಲೀಂಡರ್ ಅನ್ನು ಬದಲಾವಣೆ ಮಾಡಲಾಗುತ್ತಿತ್ತು. ಖಾಲಿಯಾದ ಸಿಲಿಂಡರ್ ತೆಗೆದು ತುಂಬಿದ ಗ್ಯಾಸ್ ತುಂಬಿದ ಸಿಲಿಂಡರ್ ಅನ್ನು ಜೋಡಿಸಲಾಗುತ್ತಿತ್ತು.ಈ ವೇಳೆ ಗ್ಯಾಸ್ ಇದ್ದಕ್ಕಿದ್ದಂತೆ ಲೀಕ್ ಆಗಲು ಶುರುವಾಗಿದೆ.
ಇದರಿಂದ ಗಾಬರಿಯಾದ ವೀಣಾ ತನ್ನಿಬ್ಬರು ಮಕ್ಕಳಿಗೆ ಹೊರಗೆ ಓಡಿ ಹೋಗಲು ಸೂಚಿಸಿ, ಗ್ಯಾಸ್ ಅನ್ನು ಬಂದ್ ಮಾಡಲು ನೋಡಿದ್ದಾರೆ. ಆದರೆ ಆಗಲೇ ಗ್ಯಾಸ್ ಸೋರಿಕೆಯಾಗಿ ದೇವರ ಮುಂದೆ ಹಚ್ಚಿರುವ ದೀಪದಿಂದ ಬೆಂಕಿ ಹತ್ತಿದೆ. ಈ ವೇಳೆ ಸಿಲಿಂಡರ್ ಬಂದ್ ಮಾಡಲು ನಿಂತಿದ್ದ ವೀಣಾಗೂ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಗಾಬರಿಯಾದ ವೀಣಾ ಹೊರಗೆ ಓಡಿ ಬಂದಿದ್ದಾರೆ.
ಆದರೆ ಆಗಲೇ ಲೀಕ್ ಆಗುತಿದ್ದ ಗ್ಯಾಸ್ ನಿಂದ ಇಡಿ ಮನೆಯು ಧಗ ಧಗ ಹೊತ್ತಿ ಉರಿದಿದ್ದು, ಸ್ಫೋಟದ ತೀವ್ರತೆಗೆ ಮನೆಯ ಮೇಲ್ಚಾವಣಿ ಹಾರಿ ಹೋಗಿದೆ.
ಹಣ, ಬಂಗಾರವೂ ಹೋಯ್ತು; ಅಲ್ಲದೇ ವೀಣಾ ಮಕ್ಕಳ ಭವಿಷ್ಯಕ್ಕೆ ಕೂಡಿಟ್ಟಿದ್ದ 5 ಲಕ್ಷ ರೂಪಾಯಿ ಹಣ, 10 ತೊಲೆ ಬಂಗಾರ, ಮನೆಯಲ್ಲಿದ್ದ ಪಾತ್ರೆ, ಬಟ್ಟೆ, ಮಕ್ಕಳ ಶಾಲಾ ದಾಖಲಾತಿಗಳು, ಮನೆಯ ದಾಖಲೆ ಪತ್ರಗಳು ಎಲ್ಲವೂ ಭಸ್ಮವಾಗಿವೆ.
ಇನ್ನು ಗಾಯಗೊಂಡ ವೀಣಾರನ್ನು ಚನ್ನಗಿರಿ ತಾಲೂಕಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ವೀಣಾಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬಾತ ಎಸ್.ಎಸ್.ಎಲ್.ಸಿ ಓದಿದ್ರೆ, ಮತ್ತೊಬ್ಬ 9 ನೇ ತರಗತಿ ಓದುತ್ತಿದ್ದಾನೆ. ಮಕ್ಕಳ ಭವಿಷ್ಯಕ್ಕೆ ಕೂಡಿಟ್ಟ ಹಣ, ಒಡವೆ ಬೆಂಕಿಗೆ ಆಹುತಿಯಾಗಿದೆ. ಅಲ್ಲದೆ ಇದ್ದ ಸೂರು ಕೂಡ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮ ಆಗಿದ್ದು, ಕುಟುಂಬವೇ ಬೀದಿಗೆ ಬಿದ್ದಿದೆ.
ಕೆಲ ವರ್ಷಗಳ ಹಿಂದೆಯಷ್ಟೇ ವೀಣಾ ಗಂಡನನ್ನು ಕಳೆದುಕೊಂಡಿದ್ದರು. ಆ ಬಳಿಕ ಸಂಸಾರದ ನೊಗ ಹೊತ್ತಿದ್ದರು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ವೀಣಾ ಇದ್ದ ಒಂದೂವರೆ ಎಕರೆ ಜಮೀನಿನಲ್ಲಿ ಬರುವ ಆದಾಯ ಹಾಗೂ ಕೆಲಸ ಮಾಡಿದ್ದರಿಂದ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದರು.
ಸಿಲಿಂಡರ್ ಸ್ಫೋಟಗೊಂಡು ಸುಟ್ಟು ಕರಕಲಾದ ಮನೆಗೆ ಭೇಟಿ ನೀಡಿದ ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಶಿವಗಂಗಾ ಬಸವರಾಜ್ ಕುಟುಂಬದವರಿಗೆ ಸಾಂತ್ವನ ಹೇಳಿದರಲ್ಲದೇ, ವೈಯಕ್ತಿಕವಾಗಿ ಧನ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ಬಸವರಾಜು ವಿ. ಶಿವಗಂಗಾ ಭೇಟಿ ನೀಡಿ ವೀಣಾರ ಪುತ್ರ ಓಂಕಾರಸ್ವಾಮಿಗೆ ಆತ್ಮಸ್ಥೈರ್ಯ ಹೇಳಿದರು. ಸ್ಥಳದಲ್ಲೇ ಆಸ್ಪತ್ರೆಯ ವೆಚ್ಚಕ್ಕೆ 10 ಸಾವಿರ ರೂಪಾಯಿ ನೀಡಿದರು. ಮುಂದೆ ಮನೆ ಕಟ್ಟಲು ವೈಯುಕ್ತಿವಾಗಿ 50 ಸಾವಿರ ನೀಡುವುದಾಗಿ ತಿಳಿಸುವ ಮೂಲಕ ಮಾನವೀಯತೆ ಮೆರೆದರು. ಈ ಸಂದರ್ಭದಲ್ಲಿ ತಾಲ್ಲೂಕು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಗೌಡ್ರು ಭರತ್ ಪಾಟೀಲ್, ತಿಪ್ಪಗೊಂಡನಹಳ್ಳಿ ಜಗದೀಶ್, ಮಂಜು ಹಾಗೂ ಮಾವಿನಹೊಳೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಇನ್ನು ಘಟನಾ ಸ್ಥಳಕ್ಕೆ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಹ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮಾಡಾಳ್ ವಿರೂಪಾಕ್ಷಪ್ಪ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಧೈರ್ಯತುಂಬಿ 25 ಸಾವಿರ ರೂಪಾಯಿ ಧನಸಹಾಯ ಮಾಡಿದರು.
Recommended Video