ಲಾಕ್ ಡೌನ್: ದಾವಣಗೆರೆಯಲ್ಲಿ 80ಕ್ಕೂ ಹೆಚ್ಚು ವಾಹನಗಳ ವಶ
ದಾವಣಗೆರೆ. ಮಾರ್ಚ್ 31: ಲಾಕ್ ಡೌನ್ ಇದ್ದರೂ ಅನಾವಶ್ಯಕವಾಗಿ ರಸ್ತೆಗಳಲ್ಲಿ ಸಂಚರಿಸುತ್ತಿದ್ದವರಿಗೆ ಇಂದು ಬೆಳಗ್ಗೆ ದಾವಣಗೆರೆ ಪೊಲೀಸರು ಶಾಕ್ ನೀಡಿದ್ದಾರೆ. ಅಲ್ಲದೇ ಕಾನೂನು ಉಲ್ಲಂಘಿಸಿದವರಿಗೆ ಅರಿವು ಮೂಡಿಸಲಾಗಿದೆ. ಬೀದಿಗಿಳಿದಿರುವ ಪೊಲೀಸ್ ಅಧಿಕಾರಿಗಳ ತಂಡ ಚುರುಕಿನ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿರುವ ಲಾಕ್ ಡೌನ್ ಆದೇಶ ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ನಗರದ ವಿವಿಧ ಬಡಾವಣೆಗಳು, ರಸ್ತೆಗಳಲ್ಲಿ ಸಂಚಾರ ಮಾಡುತ್ತಿದ್ದ 80 ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ದಾವಣಗೆರೆಯಲ್ಲಿ ಮಿಲಿಟರಿ ನಿಯೋಜನೆ ಎಂದ ಸಚಿವ ಈಶ್ವರಪ್ಪ
ಇಂದು ಬೆಳಿಗ್ಗೆ ನಗರದ ಜಯದೇವ ವೃತ್ತ, ಅಂಬೇಡ್ಕರ್ ವೃತ್ತ, ಲಕ್ಷ್ಮೀ ಫ್ಲೋರ್ ಮಿಲ್ ರಸ್ತೆ, ಶಾಮನೂರು ಅಂಡರ್ ಬ್ರಿಡ್ಜ್ ರಸ್ತೆಗಳಲ್ಲಿ ತಪಾಸಣೆ ನಡೆಸಿದ ಪೋಲಿಸರು ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಕೊರೋನಾ ವೈರಸ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಏ. 14 ರವರೆಗೆ ಲಾಕ್ ಡೌನ್ ಮಾಡಲಾಗಿದೆ.
ಸಾರ್ವಜನಿಕರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೊರೋನಾ ವೈರಸ್ ಹರಡದಂತೆ ಮಾಡಲು ಎಲ್ಲ ಸಾರ್ವಜನಿಕರು ಮನೆಗಳಲ್ಲಿಯೇ ಇರಬೇಕು. ಅನಗತ್ಯವಾಗಿ ಹೊರಗಡೆ ಅಡ್ಡಾಡುವುದು, ವಾಹನಗಳಲ್ಲಿ ತಿರುಗಾಡುವುದು ಮಾಡುವಂತಿಲ್ಲ ಎಂಬ ಸೂಚನೆ ನೀಡಿದರೂ ಸಹ ಅಲ್ಲಲ್ಲಿ ಅನಗತ್ಯವಾಗಿ ಒಡಾಡುವುದು, ಸುರಕ್ಷತಾ ವಿಧಾನ ಅನುಸರಿಸದೆ ಕಾನೂನು ಉಲ್ಲಂಘಿಸುವುದು ಕಂಡುಬರುತ್ತಿದೆ ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್ ಹೇಳಿದರು.
ದಾವಣಗೆರೆಯ 3ನೇ ಕೊರೊನಾ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ
ಹೀಗಾಗಿ ಜಿಲ್ಲೆಯಲ್ಲಿ ಲಾಕ್ಡೌನ್ ಅನ್ನು ಇನ್ನಷ್ಟು ಬಿಗಿ ಕ್ರಮಗಳ ಮೂಲಕ ಜಾರಿಗೊಳಿಸಲು ಪೋಲಿಸ್ ಇಲಾಖೆ ಕ್ರಮವಹಿಸಿದೆ ದಿನನಿತ್ಯದ ಅತ್ಯಾವಶ್ಯಕ ವಸ್ತುಗಳ ಸಾಗಾಣಿಕೆಗೆ ವಿನಾಯಿತಿ ನೀಡಿ, ಜಿಲ್ಲೆಯನ್ನು ಸಂಪರ್ಕಿಸುವ ಎಲ್ಲಾ ಜಿಲ್ಲಾ, ರಾಜ್ಯ ಮತ್ತು ಅಂತರ ರಾಜ್ಯ ಗಡಿಗಳನ್ನು ಮುಚ್ಚುವಂತೆ, ಯಾವುದೇ ವಾಹನಗಳು ಗಡಿಯೊಳಗೆ ಪ್ರವೇಶಿಸಿದಂತೆ ಜಿಲ್ಲೆಯ ಗಡಿ ಭಾಗಗಳು ಸೇರಿದಂತೆ ಜಿಲ್ಲೆಯಲ್ಲಿ ಸುಮಾರು ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ ಎಂದರು.